Snehapriya.com

June 5, 2025

ಭಾನು ಭುವಿ ಮರೆಯದ ಅಪ್ರತಿಮ ಸ್ವರ ಮಾಂತ್ರಿಕರು

Social Share :

ಭಾನಲ್ಲೂ ನೀನೇ.. ಭುವಿಯಲ್ಲೂ ನೀನೇ.. ನನ್ನಲ್ಲೂ ನೀನೇ.. ಎಲ್ಲೆಲ್ಲೂ ನೀನೇ.. ಎಂಬ ಬಯಲು ದಾರಿ ಚಿತ್ರದ ಹಾಡು ಕೇಳುಗರ ಹೃದಯವನ್ನೇ ಸ್ಪರ್ಶಿಸುತ್ತಿದ್ದ ಆ ಕಾಲಘಟ್ಟದಲ್ಲಿ ನಿಜವಾಗಿ ಚಿತ್ರ ಸಂಗೀತ ಲೋಕವನ್ನು ಆಳುತ್ತಿದ್ದವರು ರಾಜನ್-ನಾಗೇಂದ್ರ ಜೋಡಿ. ಅದು ಗ್ರಾಮಫೋನ್ ನಿಂದ ಹೊರಬಂದು ರೇಡಿಯೋಗೆ ಹೊಂದಿಕೊಂಡಿರುತ್ತಿದ್ದ ದಿನಗಳು. ಅದೃಷ್ಟದ ವಿಷಯವೇನೆಂದರೆ ಆಗ ರೇಡಿಯೋದಲ್ಲಿ ಉದ್ಘೋಷಕರು ಒಂದು ಹಾಡಿನ ಸಂಪೂರ್ಣ ವಿಷಯ ವನ್ನು ತಿಳಿಸಿಕೊಡುತ್ತಿದ್ದರು. ಹಾಗಾಗಿ .. ಇವರು ರಚಿಸಿದ ಗೀತೆಗೆ ಸಂಗೀತ ನೀಡಿದವರು ಇವರು ಎಂಬುದು ಕೊನೆಯ ಪದವಾಗಿರುತ್ತಿತ್ತು.

ಮೆಚ್ಚಿನ ಗೀತೆಗಳಲ್ಲಿ ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ಗಿರಿ ಕನ್ಯೆ, ಎರಡು ಕನಸು, ನ್ಯಾಯವೇ ದೇವರು, ಶ್ರೀನಿವಾಸ ಕಲ್ಯಾಣ, ಗುರಿ, ಚಲಿಸುವ ಮೋಡಗಳು, ಭಾಗ್ಯವಂತರು, ಮೇಯರ್ ಮುತ್ತಣ್ಣ. ಆಟೋರಾಜ, ಚೆಂದನದ ಗೊಂಬೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಒಲವು ಮೂಡಿದಾಗ, ಬೆಂಕಿಯ ಬಲೆ. ಸಿಂಗಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಹೊಂಬಿಸಿಲು, ದೇವರ ಗುಡಿ, ಕಿಲಾಡಿ ಜೋಡಿ, ಕಳ್ಳ ಕುಳ್ಳ, ಒಂದೇ ಗುರಿ, ಜೀವನ ಚಕ್ರ, ಬಿಳಿಗಿರಿಯ ಬನದಲ್ಲಿ, ನಾನಿರುವುದೇ ನಿನಗಾಗಿ, ಪಾವನ ಗಂಗಾ, ಸುಪ್ರಭಾತ. ಪರಸಂಗದ ಗೆಂಡೆತಿಮ್ಮ, ಗಾಳಿ ಮಾತು, ಮಧುರ ಸಂಗಮ, ಮೋಡದ ಮರೆಯಲ್ಲಿ. ಹೀಗೆ ಹೆಚ್ಚಿನ ಪಾಲು ಕಬಳಿಸುತ್ತಿದ್ದ ಆ ಸುಶ್ರಾವ್ಯ ಗೀತೆಗಳಿಗೆ ಸಂಗೀತ ನೀಡಿದವರು ರಾಜನ್ ನಾಗೇಂದ್ರ.

ಕಳೆದ 2000ನೇ ಇಸವಿಯಲ್ಲಿ ನಾಗೇಂದ್ರ ಇಹಲೋಕ ತ್ಯಜಿಸಿದರು. ರಾಜನ್ ಅವರು ಸಂಗೀತ ಪ್ರಿಯರಿಗೆ ಮಾರ್ಗದರ್ಶಕರಾಗಿ ದಿನಗಳನ್ನು ಕಳೆದರು. ಅತ್ಯಂತ ಸರಳ ಸಹೃದಯ ವ್ಯಕ್ತಿತ್ವದ ರಾಜನ್ ಅನೇಕರಿಗೆ ಸ್ಫೂರ್ತಿ ಯಾಗಿದ್ದರು. ಆದರೆ ಅವರೂ ಭಾನುವಾರ ರಾತ್ರಿ ಮೋಡದ ಮರೆಯಲ್ಲಿ ನಕ್ಷತ್ರವಾದರು. ಆಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ನಲಿದಾಡುತ್ತಿದ್ದ ‘ನಾವಾಡುವ ನುಡಿಯೇ ಕನ್ನಡ ನುಡಿ.. ನಾವಿರುವ ತಾಣವೆ ಗಂಧದ ಗುಡಿ,’ ಜೇನಿನ ಹೊಳೆಯೋ ಹಾಲಿನ ಮಳೆಯೋ..’ ‘ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ..’ ‘ಏನೆಂದು ನ ಅ ಹೇಳಲಿ.. ಮಾನವನಾಸೆಗೆ ಕೊನೆಯಲ್ಲಿ..’ ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು..’ ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..’ ‘ಕಲ್ಲಿನ ವೀಣೆಯ‌ ಮೀಟಿದರೇನು ನಾದವು ಹೊಮ್ಮುವುದೇ..’ ‘ನಲಿವಾ ಗುಲಾಬಿ ಹೂವೆ..’, ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ..’ ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..’ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ..’ ‘ ಪ್ರೀತಿ ಪ್ರೇಮ ನನ್ನುಸಿರು..ನ್ಯಾಯ ನೀತಿ ನನ್ನುಸಿರು..’ ‘ಹಳ್ಳಿಯಾದರೇನು ಶಿವ..’ ‘ನಾ.. ಹಾಡಲು ನೀವು ಹಾಡಬೇಕು.. ‘ ‘ತೇರ ಏರಿ ಅಂಬರದಾಗೆ ನೇಸರು ನಗುತಾನೆ..’ ಹೀಗೆ ಅಸಂಖ್ಯಾ ಗೀತೆಗಳು ಕೇಳುಗರನ್ನು ಸಂಮೋಹನಗೊಳಿಸುತ್ತಿದ್ದರೆ ಅಲ್ಲಿ ರಾಜನ್ ನಾಗೇಂದ್ರ ಇರುತ್ತಿದ್ದರು.

ವರನಟ ಡಾ.ರಾಜ್ ಕುಮಾರ್, ವಿಷ್ಣು ವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತನಾಗ್ ಹೀಗೆ ಎಲ್ಲಾ ಸ್ಟಾರ್ ಗಳ ಫೆವರಿಟ್ ಮ್ಯೂಜಿಕ್ ಡೈರೆಕ್ಟರ್ ಆಗಿ ಮೆರೆದರು. ಕನ್ನಡ ಚಿತ್ರರಂಗದ ಗಾನಸುಧೆಯ ಹರಿಸುವ ಸಂಗೀತ ಲೋಕವನ್ನು ಸುಮಾರು ಐದು ದಶಕಗಳನ್ನು ಆಳಿತು ಈ ಜೋಡಿ.  ಒಮ್ಮೆ ಹಿಂದಿ ಭಾಷೆಯ ರಿಯಾಲಿಟಿ ಶೋನಲ್ಲಿ ಸೂಪರ್ ಸ್ಟಾರ್ ಗೋವಿಂದ ಅವರು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ ಎಂದು ಹಾಡಿದ್ದರು. ಭಾರತೀಯ ಮಟ್ಟದಲ್ಲಿ ರಾಜನ್ ನಾಗೇಂದ್ರ ಅವರು ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಅದು ನಿದರ್ಶನವಾಗಿತ್ತು. ನಾಲ್ಕು ಭಾಷೆಗಳಿಗೆ ಸಂಗೀತ ನೀಡಿದ ಹೆಗ್ಗಳಿಕೆ ಈ ಜೋಡಿಗಿದೆ.

ಸಂಗೀತ ಎಂದಿಗೂ ಅಮರ. ಹಾಗಾಗಿ ಕನ್ನಡಿಗರ ಹೃದಯದಲ್ಲಿ ರಾಜನ್ ನಾಗೇಂದ್ರ ಜೋಡಿ ಕೂಡ ಶಾಶ್ವತ ವಾಗಿ ನೆಲೆಸುತ್ತದೆ ಎಂದರೆ ಅದು ಅಚ್ಚರಿ ಅಲ್ಲವೇ ಅಲ್ಲ.

Share This Article on Whatsapp

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *