ಅದು ರಾಗಿಣಿ ದ್ವಿವೇದಿ ಮುಖ್ಯ ಪಾತ್ರದಲ್ಲಿರುವ ‘ಸಾರಿ’ ಎಂಬ ಚಿತ್ರದ ಹಾಡು ಮತ್ತು ಸಾಹಿತ್ಯ ಬಿಡುಗಡೆ ಕಾರ್ಯಕ್ರಮ. ಅಲ್ಲಿ ರಾಗಿಣಿ ಮುಖ್ಯ ಆಕರ್ಷಣೆ ಎಂಬುದು ನಿಜವಾದರೂ ನಿಜಕ್ಕೂ ಆಕರ್ಷಣೆ ಅನಿಸಿದ್ದು ಒಂದೇ ವೇದಿಕೆಯಲ್ಲಿ ಅದೂ ಅಕ್ಕಪಕ್ಕದಲ್ಲಿ ಎರಡು ವಾಣಿಜ್ಯ ಮಂಡಳಿಗಳ ಅಧ್ಯಕ್ಷರ ಸಮಾಗಮ.
ಒಬ್ಬರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮತ್ತು ಇನ್ನೊಬ್ಬರು ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಕೃಷ್ಣೇಗೌಡ.
ಹಿಂದೊಮ್ಮೆ ಅಂದರೆ ಒಂದು ವರ್ಷದ ಹಿಂದೆ ಎರಡು ವಾಣಿಜ್ಯ ಮಂಡಳಿಗಳು ಒಂದಾಗಲಿ ಎಂಬ ಆಶಯವನ್ನು ಜಯಮಾಲಾ, ರಾಕ್ ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು ರೀತಿಯ ಉದ್ಯಮದ ಗಣ್ಯರು ವ್ಯಕ್ತಪಡಿಸಿದರೆಂಬ ಮಾತ್ತಿತ್ತು.
ಮಾತೃಸಂಸ್ಥೆ ವಾಣಿಜ್ಯ ಮಂಡಳಿ ವಿರುದ್ಧ ಸಿಡಿದೆದ್ದು ಮತ್ತೊಂದು ವಾಣಿಜ್ಯ ಮಂಡಳಿಯನ್ನು ಕೃಷ್ಣೇಗೌಡ ರು ಹುಟ್ಟು ಹಾಕಿದ್ದು ಎಲ್ಲರಿಗೂ ಗೊತ್ತು. ಅದಕ್ಕಿಂತಲೂ ಮುಖ್ಯವಾಗಿ ಎಲ್ಲಾ ಸಂಸ್ಥೆಗಳಿಗೂ ಚುನಾವಣೆ ನಡೆಸಲು ಅವರು ನಡೆಸುವ ಕೆಲಸಗಳು ಗೊತ್ತು. ಆದರೂ ಮಾತೃ ಸಂಸ್ಥೆ ಬಗ್ಗೆ ಅವರು ಹೇಗೆ ಸಾಫ್ಟ್ ಆದರೂ ಎಂಬುದು ಕುತೂಹಲದ ವಿಷಯವಾದರೂ ರಾಜೇಂದ್ರಸಿಂಗ್ ಬಾಬು ಮೂಲಕ ಜಯಮಾಲಾ, ರಾಕ್ ಲೈನ್ ವೆಂಕಟೇಶ್ ಅವರನ್ನು ಸಂಘಟಿಸಿ ಭಾ.ಮ.ಹರೀಶ್ ಗೆಲುವಿಗೆ ಕೃಷ್ಣೇಗೌಡ ಕೂಡ ಕಾರಣರಾದ ವಿಷಯವೂ ಉದ್ಯಮದಲ್ಲಿ ಬಹಳಷ್ಟು ಜನರಿಗೆ ಗೊತ್ತು.
ಸದ್ಯಕ್ಕೆ ಭಾ.ಮ.ಹರೀಶ್ ಸ್ನೇಹಿತರು. ಹಾಗಾಗಿ ಒಟ್ಟಾಗಿ ಸೇರಿದ್ದಾರೆ ಅಂದು ಕೊಳ್ಳ ಬಹುದು ಅಷ್ಟೇ. ಈಗ ಚಿತ್ರದ ವಿಷಯಕ್ಕೆ ಬರೋಣ..
ರಾಗಿಣಿ ದ್ವಿವೇದಿ ಅಪರೂಪದ ಪಾತ್ರ ಮತ್ತು ಗೆಟ್ಟಪ್ ನಲ್ಲಿ ಕಾಣಿಸಿಕೊಂಡ ಮೋಷನ್ ಪೋಸ್ಟರ್ ಸಹ ಬಿಡುಗಡೆಗೊಂಡಿತು. ಚಿತ್ರದ ಹೆಸರು ‘ಸಾರಿ’ ಜೊತೆಗೆ ‘ಕರ್ಮ ರಿಟನ್ಸ್’ ಎಂಬ ಟ್ಯಾಗ್ ಲೈನ್ ಸಹ ಇದೆ.
ಹಿಂದೆ ಜಾಹಿರಾತು ಚಿತ್ರಗಳನ್ನು ಮಾಡಿದ್ದ ಬ್ರಹ್ಮ ಚಿತ್ರದ ನಿರ್ದೇಶಕ. ಪರ್ತಕರ್ತ ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಷ್ಟೇ ಅಲ್ಲದೆ ಪಾತ್ರವನ್ನೂ ನಿರ್ವಹಿಸಿದ್ದಾರೆ.
ರಾಗಿಣಿ ಎದುರು ಅರ್ಜುನ್ ಶರ್ಮ ನಟಿಸಿದ್ದಾರೆ. ರಾಗಿಣಿ ಅವರಿಗೆ ಸೂಪರ್ ಹೀರೋ ಮಾದರಿಯ ಪಾತ್ರ ಸಿಕ್ಕಿದೆ ಎಂದು ನಿರ್ದೇಶಕರು ಹೇಳಿದರೆ, ಈ ರೀತಿಯ ಪಾತ್ರ ಕೊಟ್ಟಿರುವುದಕ್ಕೆ ಧನ್ಯವಾದ ಹೇಳಿದರು ರಾಗಿಣಿ.
ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ರಾಜು ಹೆಮ್ಮಿಗನೂರು ಸಂಗೀತ ನೀಡಿರುವ ಚಿತ್ರಕ್ಕೆ ರಾಜೀವ್ ಛಾಯಾಗ್ರಾಹಕ. ನವೀನ್ ಕುಮಾರ್, ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂಬ ಮಾಹಿತಿಗಳು ಬಂದವು.