ಗ್ಲಾಮರ್ ಬೆಡಗಿ ಎಂದೇ ಕರೆಸಿಕೊಳ್ಳುವ ಕನ್ನಡದ ಹೆಸರಾಂತ ನಟಿ ರಾಗಿಣಿ ದ್ವಿವೇದಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ, ತಾವು ಎಂದಿಗೂ ಸುಮ್ಮನೆ ಕೂರುವುದಿಲ್ಲ.. ಎಂಬ ಸಂದೇವವನ್ನು ಸಮಾಜಕ್ಕೆ ರವಾನಿಸಿದವರು. ಇದೀಗ ಅವರು ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇಡೀ ದೇಶ ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಲಾಕ್ ಡೌನ್ ಗೆ ಒಳಗಾಗಿತ್ತು.. ಆ ಸಂದರ್ಭದಲ್ಲಿ ಕೂಡ ಅನೇಕ ಸಂಘ ಸಂಸ್ಥೆಗಳ ಜೊತೆ ಸೇರಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸ್ ಇಲಾಖೆ ಸಹ ತಮ್ಮ ಕಾರ್ಯಕ್ರಮಗಳಿಗೆ ರಾಗಿಣಿ ಅವರನ್ನು ಆಹ್ವಾನಿಸಿತ್ತು. ಕಲಾವಿದರಿಗೆ ಆಹಾರ ಕಿಟ್ ನೀಡುವಾಗಲೂ ರಾಗಿಣಿ ಇರುತ್ತಿದ್ದರು.
ಸದ್ಯ ರಾಗಿಣಿ ಅವರು ತಮ್ಮ ಸಾಮಾಜಿಕ ಕಾರ್ಯದ ನಡೆಯನ್ನು ಮತ್ತಷ್ಟು ವಿಸ್ತರಿಸಿ ಕೊಂಡಿದ್ದಾರೆ. ಅವರೀಗ ‘ಆರ್ ಡಿ ವೆಲ್ ಫೇರ್’ (ರಾಗಿಣಿ ದ್ವಿವೇದಿ ಕಲ್ಯಾಣ)ಎಂಬ ಸಂಸ್ಥೆ ಆರಂಭಿಸಿದ್ದಾರೆ. ಅದರ ಮೂಲಕ ಅಬಲೆಯರಾದ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಗಂಡ ಅಥವಾ ಹೊರಗಿನವರಿಂದ ಕಿರುಕುಳ ಅನುಭವಿಸಿದ ಹೆಣ್ಣು ಮಕ್ಕಳಿಗೆ ಕಾನೂನು ರೀತಿಯ ಸಿಗುವ ಸಹಾಯವನ್ನು ಅವರು ಒದಗಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಹಾಗೂ ಮಹಿಳಾ ಆಯೋಗ ಅವರಿಗೆ ಸಹಕರಿಸುತ್ತಿದೆ.
ಈಚೆಗಷ್ಟೇ ಗಂಡನಿಂದ ಹಾಗೂ ಅವರ ಮನೆಯವರಿಂದ ಕಿರುಕುಳ ಅನುಭವಿಸಿದ ನಂದಿತಾ ಪಾಟಕ್ ಎಂಬುವರಿಗೆ ನೆರವು ನೀಡಿ ಪೊಲೀಸರಿಗೆ ದೂರು ದಾಖಲಿಸಿ ಬಳಿಕ ಮಹಿಳಾ ಆಯೋಗದ ಅಧ್ಯಕ್ಷರ ಬಳಿ ಕರೆದೊಯ್ದು ಸಹ ದೂರು ನೀಡಿದ್ದಾರೆ. ಇದರ ತನಿಖೆ ಮುಂದುವರೆದಿದೆ.
ತಮ್ಮದೇ ಚಿತ್ರ ‘ರಾಗಿಣಿ ಐಪಿಎಸ್’ ನಲ್ಲಿ ಜನರಿಗೆ ನೆರವಾಗುವಂತೆ ನಿಜ ಜೀವನದಲ್ಲಿಯೂ ಸಮಾಜಮುಖಿಯಾಗಿರುವ ರಾಗಿಣಿ ಅವರನ್ನೊಮ್ಮೆ ಅಭಿನಂದಿಸೋಣ.