ಪಾಶ್ಚಿಮಾತ್ಯ ದೇಶಗಳಲ್ಲಿ 13 ಎಂದರೆ ದೆವ್ವ ಭೂತದ ಸಂಖ್ಯೆ ಎಂದು ಪರಿಭಾವಿಸಿರುವುದೂ ಉಂಟು.. ಆದ್ದರಿಂದೇ ‘ಫ್ರೈಡೆ ದಿ 13′ ರೀತಿಯ ಚಿತ್ರಗಳು ಹೆಚ್ಚು ಜನಪ್ರಿಯತೆ ಪಡೆದಿವೆ..
ಈಗ ಕನ್ನಡದಲ್ಲಿ ಬರುವ ’13’ ಸಂಖ್ಯೆಯ ಶೀರ್ಷಿಕೆ ಹೊಂದಿರುವ ಚಿತ್ರದ ಕಥೆಯೇ ಬೇರೆ ಇಲ್ಲಿ ರಾಷ್ಟ್ರೀಯ ಭಾವೈಕ್ಯತಾ ವಿಷಯ ತಳಕು ಹಾಕಿಕೊಂಡಿದೆ ಎಂಬುದು ಹೆಗ್ಗಳಿಕೆ.
ರಾಘವೇಂದ್ರ ರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತು ಅವರ ಜೊತೆ ಶೃತಿ ಅವರೂ ನಟಿಸಿರುವುದು ವಿಶೇಷ. ‘ಓ ಗುಲಾಬಿ’ ‘ಪಲ್ಲಕ್ಕಿ’ಯಂತಹ ಪ್ರೇಮ ಕಥೆಗಳನ್ನು ಮಾಡಿದ ಕೆ.ನರೇಂದ್ರ ಬಾಬು ಈ ಚಿತ್ರದ ನಿರ್ದೇಶಕ.
ಅಂದ ಹಾಗೆ ಚಿತ್ರತಂಡ ಈಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು. ಅದು ಚಿತ್ರ ಐಟಂ ಸಾಂಗ್ ನ ಜೊತೆಯಲ್ಲಿ..
ಮನರಂಜನೆಯ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ‘ಸಿಂಗಲ್ ಸೇವಂತಿ..’ ಎಂಬ ಐಟಂ ಸಾಂಗ್ ಒಳಗೊಂಡಿದ್ದು, ಆ ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಿಂದ ಕೂಡಿತ್ತು.
ಸಿಂಗಲ್ ಸೇವಂತಿ ಹಾಡಿಗೆ ಮುಂಬೈ ಮೂಲದ ಪ್ರೀತಿ ಗೋಸ್ವಾಮಿ ಹೆಜ್ಜೆ ಹಾಕಿದ್ದಾರೆ. ಸ್ಲೋಗನ್ ಬಾಬು ಸಂಗೀತ ನಿರ್ದೇಶನದಲ್ಲಿ ಹಾಡು ಮೂಡಿ ಬಂದಿದೆ.
ಇನ್ನೇನು ಬಿಡುಗಡೆಯ ಸಮೀಪದಲ್ಲಿರುವ ’13’ ಚಿತ್ರದಲ್ಲಿ ಭಾವೈಕ್ಯತೆಯ ಜೊತೆಗೆ ಸಾಮಾಜಿಕ ಸಂದೇಶದ ಕಥೆಯೊಂದನ್ನು ನಿರೂಪಣೆ ಮಾಡಲಾಗಿದೆ.
ರಾಘವೇಂದ್ರ ರಾಜ್ ಕುಮಾರ್ ಹಾಗೂ ಶೃತಿ ಅವರು 20 ವರ್ಷಗಳ ಹಿಂದಿನ ನೆನಪಿಗೆ ಜಾರಿದರೆ, ‘ಗೆಲುವಿನ ಸರ್ದಾರ’ ಚಿತ್ರದ ಬಳಿಕ ಅಪ್ಪಾಜಿ ಮತ್ತು ಶೃತಿ ಒಟ್ಟಿಗೆ ನಟಿಸಿದ್ದಾರೆ ಎಂಬುದನ್ನು ರಾಘಣ್ಣ ಪುತ್ರ ನಟ ವಿನಯ್ ರಾಜ್ ಕುಮಾರ್ ನೆನಪು ಮಾಡಿಕೊಂಡರು.
ವಿನಯ್ ರಾಜ್ ಕುಮಾರ್ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಭಾ.ಮ.ಹರೀಶ್ ಐಟಂ ಸಾಂಗ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಕಥೆ ಮಾಡುವಾಗಲೇ ಮೋಹನ್ ಹೆಸರಿನ ಪಾತ್ರಕ್ಕೆ ರಾಘಣ್ಣ ಸರಿಯಾದ ಆಯ್ಕೆ ಎಂಬುದು ಮನದಾಳದ ವಿಷಯವಾಗಿತ್ತು. ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶೃತಿ ಅವರು ಜೀವ ತುಂಬಿದ್ದಾರೆ. ಎರಡೂ ಪಾತ್ರಗಳು ಚಿತ್ರದ ಘನತೆಯನ್ನು ಹೆಚ್ಚು ಮಾಡಿವೆ ಎಂದರು ನಿರ್ದೇಶಕ ಕೆ.ನರೇಂದ್ರಬಾಬು.
ಚಿತ್ರದ ಶೀರ್ಷಿಕೆ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ನ ವಿಷಯಗಳು ನನಗೆ ಹೆಚ್ಚಿನ ಖುಷಿ ಕೊಟ್ಟವು ಎಂದರು ರಾಘವೇಂದ್ರ ರಾಜ್ ಕುಮಾರ್. ನಾನು ಮೊದಲ ಬಾರಿಗೆ ಸಾಹಿರಾ ಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿರುವೆ ಎಂದರು ಶೃತಿ.
ಅನಿಲ್ ಕುಮಾರ್ ಅರ್ಪಣೆ ಮಾಡಿರುವ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್ ಗೌಡ, ಹೆಚ್. ಎಸ್. ಮಂಜುನಾಥ್ ಹಾಗೂ ಕೇಶವ ಮೂರ್ತಿ ನಿರ್ಮಾಣ ಮಾಡಿದ್ದಾರೆ.
ಟೀಸರ್ ಅತ್ಯುತ್ತಮವಾಗಿ ಮೂಡಿ ಬಂದಿದೆ ಮಾತ್ರವಲ್ಲ; ಹೊಸ ಭರವಸೆಗಳನ್ನು ಮೂಡಿಸಿದೆ ಎಂದರು ನಟ ವಿನಯ್ ರಾಜಕುಮಾರ್.