* ಅಕ್ಟೋಬರ್ 3 ಚಿತ್ರ ತೆರೆಗೆ *
* ಸಿನಿಮಾ ಗೆದ್ದರೆ ಮಾತ್ರ ಮತ್ತೆ ನಿರ್ಮಾಣ *
* ಕಾಳಿ ಪಾತ್ರದಲ್ಲಿ ರಾಧಿಕಾ ನಟನೆ ಭಯಂಕರ *
ಕನ್ನಡದ ಮುಂಚೂಣಿಯ ನಟಿಯರ ಸಾಲಿಗೆ ಸೇರುವ ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಭೈರಾದೇವಿ’ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದೆ.
ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಟಿಸಿರುವ ಬಹು ನಿರೀಕ್ಷಿತ ಚಿತ್ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅದರ ಪೂರ್ವಭಾವಿಯಾಗಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ನಿರ್ದೇಶಕ ಶ್ರೀಜೈ, ನೃತ್ಯ ನಿರ್ದೇಶಕ ಮೋಹನ್, ಸಹ ನಿರ್ಮಾಪಕರಾದ ರವಿರಾಜ್, ಯಾದವ್ ಮೊದಲಾದವರು ಪಾಲ್ಗೊಂಡಿದ್ದರು.
ಭೈರಾದೇವಿ ಕಥೆ ಇಷ್ಟವಾಗಿದ್ದರಿಂದ ಇದನ್ನು ಸಿನಿಮಾ ಮಾಡಿದೆ. ಕಥೆಯ ಒಳಗೆ ಮತ್ತು ಹೊರಗೆ ಕಷ್ಟಕರ ಸನ್ನಿವೇಶಗಳು ಎದುರಾದರೂ ಎದೆಗುಂದದೆ ಮಾಡಿರುವ ಸಿನಿಮಾ ಇದು ಎಂದರು ರಾಧಿಕಾ ಕುಮಾರಸ್ವಾಮಿ.
ಹೆಣ್ಣು ಅಘೋರಿಯ ಈ ಪಾತ್ರ ಸವಾಲಿನಿಂದ ಕೂಡಿತ್ತು. ಕಷ್ಟ ಪಟ್ಟು ಜೊತೆಗೆ ಇಷ್ಟಪಟ್ಟು ಮಾಡಿದ ಸಿನಿಮಾ ಇದಾಗಿದ್ದು, ಗೆಲ್ಲಲೇ ಬೇಕು ಎಂಬ ಹಂಬಲವೂ ಹೆಚ್ಚಾಗಿದೆ.
ಈ ಸಿನಿಮಾ ಗೆದ್ದರೆ ಮತ್ತೆ ಸಿನಿಮಾ ನಿರ್ಮಾಣ ಮಾಡುವ ನನ್ನ ಸಂಕಲ್ಪ ಮುಂದುವರೆಯುತ್ತದೆ. ಇಲ್ಲದಿದ್ದರೆ ನಾನು ಸಿನಿಮಾದಿಂದಲೇ ದೂರ ಉಳಿಯುವೆ ಎಂಬ ಅಚ್ಚರಿಯ ಹೇಳಿಕೆ ನೀಡಿದರು ನಟಿ ರಾಧಿಕಾ ಕುಮಾರಸ್ವಾಮಿ.
ಆದರೆ ಈ ಚಿತ್ರ ಇಡೀ ಕುಟುಂಬವೇ ನೋಡುವ ಅತ್ಯುತ್ತಮ ಚಿತ್ರವಾಗಿ ಹೊರ ಹೊಮ್ಮಿದೆ ಎಂಬುದು ನನ್ನ ನಂಬಿಕೆ. ನನ್ನ ಅಣ್ಣ ರವಿರಾಜ್ ಮತ್ತು ನಿರ್ದೇಶಕ ಶ್ರೀ ಜೈ ಇದಕ್ಕೆ ಕಾರಣ ಎಂದರು.
ಸಹೃದಯ ನಟ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು, ನನ್ನದು ರೌಡಿಗಳನ್ನು ಮಟ್ಟ ಹಾಕುವ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಎಂದರು ರಮೇಶ್ ಅರವಿಂದ್.
ಆದರೆ ನಾನು ಬೇರೆ ಲೋಕದಿಂದ ಬಂದವರನ್ನೂ ಎದುರಿಸ ಬೇಕಾಗುತ್ತದೆ. ಹಾಗಾಗಿ ಇದು ಸವಾಲಿನ ಪಾತ್ರವಾಗಿತ್ತು. ಅಲ್ಲದೆ ಈ ಸಮಯದಲ್ಲಿ ನನಗೆ ಹೆಚ್ಚು ಕಾಡಿದ್ದು ‘ಆಪ್ತ ಮಿತ್ರ’ ಎಂದರು ರಮೇಶ್ ಅರವಿಂದ್.
ರಾಧಿಕಾ ಕುಮಾರಸ್ವಾಮಿ ಅವರು ಚಿತ್ರದ ನಿರ್ಮಾಪಕಿ ಮತ್ತು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಆ ಪಾತ್ರದಲ್ಲಿ ಅವರು ಅಭಿನಯಿಸುತ್ತಿರುವಾಗ ಮಾತನಾಡುವುದಕ್ಕೆ ಭಯವಾಗುತ್ತಿತ್ತು ಅಷ್ಟು ನೈಜವಾಗಿತ್ತು ಆ ಪಾತ್ರ ಎಂದರು.
ಈ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿ ಬರಲು ಕಾರಣ ನಿರ್ಮಾಪಕರು ಮೊದಲು ಅವರಿಗೆ ಧನ್ಯವಾದ ಹೇಳುವೆ. ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ ಅದ್ಭುತವಾಗಿದೆ ಎಂದವರು ನಿರ್ದೇಶಕ ಶ್ರೀಜೈ.
ನಟಿ ಅನು ಪ್ರಭಾಕರ್ ಕೂಡ ಚಿತ್ರದ ಭಾಗವಾಗಿದ್ದು, ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಚೆನ್ನಾಗಿದೆ ಎಂದರು ಅನು ಪ್ರಭಾಕರ್.