ರೇಟಿಂಗ್ : 3/5
ನಿರ್ಮಾಣ : ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್.ಸನತ್ ಕುಮಾರ್
ನಿರ್ದೇಶನ : ಆರ್.ರವೀಂದ್ರ
ಸಹಜ ಕೃಷಿಯ ನೆಲೆ ಬೆಲೆ
ಪ್ರೇಮಿಗೆ ಅಸಹಜ ಬಲೆ..
ರೈತ ದೇಶದ ಬೆನ್ನೆಲುಬು. ರೈತನ
ಆ ಬೆನ್ನೆಲುಬು ಮುರಿಯಲು ಹುಟ್ಟಿಕೊಂಡ ಕಂಪನಿಗಳಿಗೆ ವ್ಯವಸ್ಥೆಯೇ ಸಹಕರಿಸುತ್ತದೆ. ಅಮಾಯಕ ರೈತ ಬಲಿಪಶುವಾಗಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಗೆ ಲೆಕ್ಕವಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ನೈಸರ್ಗಿಕ ಕೃಷಿ ಅನ್ನದಾತನ ಕೈ ಹಿಡಿಯುತ್ತದೆ ಎಂಬುದಕ್ಕೆ ಇಲ್ಲಿನ ಧರ್ಮೇಗೌಡ ಅತ್ಯುತ್ತಮ ಉದಾಹರಣೆ. ಆತನ ಪುತ್ರ ಗೋಪಿ ವಿಲಾಸಿ ರೂಪದಲ್ಲಿ ಸಾಧನೆಗೆ ನಿಂತ ಪ್ರತಾಪಿ.
ಗಂಭೀರ ನೆಲೆಯಲ್ಲಿ ರೈತರ ಸಮಸ್ಯೆ, ಒತ್ತಡ, ಉದಾರ ನೆಲೆ, ಸಂಕುಚಿತ ಮನೋಭಾವ ಎಲ್ಲವನ್ನೂ ಹೇಳುವ ಸಾಧ್ಯತೆ ಇದ್ದರೂ ನಿರ್ದೇಶಕರು ಚಿತ್ರವನ್ನು ಮನರಂಜನೆಯ ಚೌಕಟ್ಟಿಗೆ ಒಗ್ಗಿಸಲು ಪ್ರಯತ್ನಿಸಿರುವುದು ಕಾಣುತ್ತದೆ.
ಧರ್ಮೇಗೌಡ, ರಾಮಯ್ಯ, ಸೈಮನ್, ಗೌರಿ, ಸುಶೀಲ ಹೀಗೆ ಅನೇಕ ಪಾತ್ರಗಳು ಬಂದು ಹೋದರೂ ಲೀಲಾ ಪಾತ್ರ ಕೊಂಚ ಕೆಣಕುತ್ತದೆ. ಅದು ಅಮಾಯಕ ನಡೆ ಅಲ್ಲ ದುಡುಕಿನ ವರ್ತನೆ ಎಂಬುದು ಎದ್ದು ಕಾಣುತ್ತದೆ.
ನೈಸರ್ಗಿಕ ಕೃಷಿಗೆ ಬೆಂಬಲ ನೀಡುವ (ಡಿಜಿ) ಕಂಪನಿ ಹುಟ್ಟಿಕೊಂಡರೂ ಅದರ ಮೇಲಿನ ವಿಶ್ವಾಸ ಹೆಚ್ಚುವುದಿಲ್ಲ. ಯಾವ ಕಂಪನಿಯ ನಡೆಯು ವಿಶ್ವಾಸಾರ್ಹವಲ್ಲ ಎಂಬ ನಂಬಿಕೆ ಅದಕ್ಕೆ ಕಾರಣ.
ನೈಸರ್ಗಿಕ ಅಥವಾ ಸಹಜ ಕೃಷಿಯಿಂದ ಫಲವತ್ತತೆ ಹೆಚ್ಚಿಸಲು ಮತ್ತು ರೈತ ಅಗಾಧ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂಬ ನಂಬಿಕೆಯ ನಿರೂಪಣೆ ಜೊತೆಗೆ ಕೃಷಿ ಭೂಮಿಯಲ್ಲಿ ಕೀಟ ನಾಶಕಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಗಟ್ಟಿಯಾದ ಮಾಹಿತಿಯ ಅಗತ್ಯವಿತ್ತು.
ಹೆಸರು ಗೋಪಿ; ಕೃಷ್ಣನ ಅವತಾರವೇ ಎಂದು ಭಾವಿಸಿದ ವರ್ತನೆ ಅಸಹಜ ನಡವಳಿಕೆಯಾಗಿ ಕಾಣುತ್ತದೆ. ಆದರೆ ಪ್ರತಿ ಹೆಜ್ಜೆಯಲ್ಲಿ ಆತ ಗೆಲ್ಲುವುದು ಅಚ್ಚರಿ. ಅಪ್ಪನ ಹೆಸರಿನಲ್ಲಿ ಕಂಪನಿ ಮಾಡಿ ಬೆರಗುಗೊಳಿಸುವುದೂ ಅಷ್ಟೇ..
ಮುಖ್ಯ ಪಾತ್ರದಲ್ಲಿರುವ ನಟ ಮಂಜುನಾಥ್ ಲೀಲಾಜಾಲವಾಗಿ ನಟಿಸಿದ್ದಾರೆ. ಎಸ್.ನಾರಾಯಣ್ ಗತ್ತು ಗಾಂಭೀರ್ಯ ಕಾಯ್ದುಕೊಂಡ ಪಾತ್ರದಲ್ಲಿ ಮೆಚ್ಚುಗೆಗೆ ಪಾತ್ರವಾದರೆ, ತಾಯಿಯಾಗಿ ಪದ್ಮ ವಾಸಂತಿ ಅದ್ಭುತ.
ನಿಮಿಷ ಕೆ.ಚಂದ್ರ, ಸಪ್ತಗಿರಿ, ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್, ಆರಾಧ್ಯ ಶಿವಕುಮಾರ್, ಶಂಖನಾದ ಆಂಜನಪ್ಪ ಮೊದಲಾದ ಕಲಾವಿದರ ನಟನೆ ಗಮನಾರ್ಹ.
ನಿರ್ಮಾಪಕ ಎಸ್.ಆರ್.ಸನತ್ ಕುಮಾರ್ ಕಥೆ, ಕೇಶವಚಂದ್ರ ಚಿತ್ರಕಥೆ ಹಾಗೂ ಸಂಭಾಷಣೆ, ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಿಥುನ್ ಅಶೋಕನ್ (ಚೆನ್ನೈ) ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.
ಸಾಮಾಜಿಕ ಬದ್ಧತೆಯನ್ನು ಮೆರೆಯುವ ಚಿತ್ರಗಳು ವಿರಳವೆನಿಸುವ ಪರಿಸ್ಥಿತಿಯಲ್ಲಿ ದೇಶದ ರೈತರಿಗೆ ಸಂದೇಶ ನೀಡುವ ಚಿತ್ರವಾಗಿ ‘ಗೋಪಿಲೋಲ’ ನಿಲ್ಲುತ್ತದೆ.