ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಸದಾ ಕಾಲ ವಿಭಿನ್ನ ಪ್ರಯತ್ನಗಳಲ್ಲಿ ಗಮನ ಸೆಳೆಯುವ ಆರ್.ಚಂದ್ರು ಈಗ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ.
ಅಚ್ಚರಿಯ ವಿಷಯವೇನೆಂದರೆ, ಒಂದು ಸಾಧಾರಣ ಚಿತ್ರ ಮಾಡಲು ಹೊರಟ ಚಂದ್ರು ಪ್ಯಾನ್ ಕಲ್ಪನೆಯಲ್ಲಿ ಮುಳುಗಿದಾಗ ಅದು ದೊಡ್ಡದಾಯಿತು. ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಸಹ ಸೇರಿಕೊಂಡರು. ಮೊದಲೇ ಮೇಕಿಂಗ್ ಬಗ್ಗೆ ಅತೀವ ಆಸಕ್ತಿ ಹೊಂದಿದ ಚಂದ್ರು ಈ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡ್ಯೊಯ್ಯುವುದಾಗಿ ಪಣ ತೊಟ್ಟರು. ಅದರ ಪ್ರತಿಫಲವೇ ಈ ಕಬ್ಜ.
ಈಗ ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳು ಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. 1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತೂ ಚಿತ್ರದ ಆಶಯಗಳಿಗೆ ಮನ ಸೋತಿದ್ದಾರೆ ಎಂಬುದು ನಿರ್ದೇಶಕ ಆರ್.ಚಂದ್ರು ಅವರಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.
ಇಡೀ ವಿಶ್ವ ಒಮ್ಮೆ ತಿರುಗಿ ನೋಡುಬೇಕು; ಇದು ಕೇವಲ ನಿರ್ದೇಶಕರ ಆಶಯ ಮಾತ್ರವಲ್ಲ; ಕನ್ನಡಿಗರ ಹೃದಯ ಸಂವೇದನೆ ಕೂಡ ಆಗಿದೆ. ಹಾಗಾಗಿ ಆರ್.ಚಂದ್ರು ಶಕ್ತಿ ಮೀರಿದ ಪ್ರಯತ್ನವನ್ನು ಮಾಡಿದ್ದಾರೆ.