ಕೆಲವೊಮ್ಮೆ ಎದುರಾಗುವ ಸವಾಲುಗಳು ಮಹಾ ಪ್ರಯತ್ನಗಳಿಗೆ ನಾಂದಿ ಹಾಡಿ ಬಿಡುತ್ತವೆ. ಆ ಪ್ರಯತ್ನ ಗೆದ್ದಾಗ ಕಣ್ಣೀರು ಕೋಡಿಯಾಗುತ್ತದೆ. ಮನಸ್ಸು ಗರಿಗೆದರಿ ಆಗಸದೆತ್ತರಕ್ಕೆ ವಿಹರಿಸಿ ಬಿಡುತ್ತದೆ.
‘ಕಬ್ಜ’ ಯಶಸ್ಸಿನ ಗಳಿಗೆಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಕಣ್ಣೀರು ಹಾಕಿದರು. ಇದರಲ್ಲಿ ಗೆಲುವಿನ ಸಂತಸದ ಬುಗ್ಗೆಯಿತ್ತು. ಜೊತೆಗೆ ಕಾಲೆಳೆಯುತ್ತಿರುವವರ ಬಗ್ಗೆ ಆಕ್ರೋಶವಿತ್ತು. ಯಾರು ಏನೇ ಮಾಡಿದರು ನಾನು ಅಸಹಾಯಕತೆಗೆ ಜಾರುವುದಿಲ್ಲ ಎಂಬ ಅರ್ಥದಲ್ಲೇ ಮಾತನಾಡಿದರು.
ಏಕೆಂದರೆ ತೆಲುಗು ಚಿತ್ರವೊಂದನ್ನು ನಿರ್ದೇಶನ ಮಾಡುವ ಪ್ರಯತ್ನದಲ್ಲಿ ಆದ ಅವಮಾನವೊಂದು ಪ್ಯಾನ್ ಇಂಡಿಯಾ ಚಿತ್ರ ಮಾಡುವುದಕ್ಕೆ ಕಾರಣವಾಯಿತು. ಕನ್ನಡ ಚಿತ್ರ ಹಾಗೂ ಕನ್ನಡದ ನಿರ್ದೇಶಕರ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಉತ್ತರ ಕೊಡಬೇಕಾಗಿತ್ತು.
ಅದು ‘ಕಬ್ಜ’ದಂತಹ ದೊಡ್ಡ ಚಿತ್ರ ಮಾಡುವುದಕ್ಕೆ ಪ್ರೇರಣೆಯಾಯಿತು. ಕನ್ನಡದ ಚಿತ್ರಗಳು ಹೇಗೆ ಎಂಬುದಕ್ಕೆ ಇತ್ತೀಚೆಗೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆದಿರುವೆ..
ಇಷ್ಟು ಹೇಳುವಾಗ ನಿರ್ದೇಶಕ ಆರ್.ಚಂದ್ರು ಅತ್ಯಂತ ಭಾವುಕರಾಗಿದ್ದರು. ಒಂದು ಚಿತ್ರ ಅದರಲ್ಲೂ ದೊಡ್ಡ ಕನಸುಗಳ ಜೊತೆ ಪ್ರಯಾಣ ಮಾಡುವ ಮತ್ತು ಕಂಡ ಕನಸು ನನಸು ಮಾಡುವ ಪ್ರಯತ್ನದಲ್ಲಿ ರಕ್ತವೇ ಬಸಿದು ಹೋಗಿರುತ್ತದೆ. ಗೆಲ್ಲಬೇಕು ಎಂಬ ಹಠ ಅದನ್ನೇಲ್ಲಾ ಸಹಿಸಿಕೊಳ್ಳುತ್ತದೆ. ಆದರೆ ಇಂತಹ ಪ್ರಯತ್ನವನ್ನೇ ಗುರುತಿಸದೇ ಹೋದರೆ ಹೃದಯ ಏನಾಗಬೇಕು.. ಅದೃಷ್ಟವಶಾತ್ ಇಲ್ಲಿ ನಾವು ಗೆದ್ದಿದ್ದೇವೆ ಎಂದು ನಕ್ಕರು ಆರ್.ಚಂದ್ರು.
ಇಲ್ಲಿನ ಪ್ರಯತ್ನಕ್ಕೆ ಗಾಡ್ ಫಾದರ್ ರೀತಿ ಸಹಕರಿಸಿದವರು ಉಪ್ಪಿ ಸರ್, ಸಾಥ್ ಕೊಟ್ಟವರು ಸುದೀಪ್ ಸರ್ ಮತ್ತು ಯಾವಾಗಲೂ ಬೆನ್ನು ತಟ್ಟುವ ಅಣ್ಣಾ ಶಿವರಾಜ್ ಕುಮಾರ್ ಮತ್ತು ಹಗಲು ರಾತ್ರಿ ಎರಡೂವರೆ ವರ್ಷಗಳ ಕಾಲ ಶ್ರಮಿಸಿದ ನನ್ನ ಚಿತ್ರತಂಡ ಜೊತೆಗೆ ನಿಂತಿದ್ದರಿಂದ ಇದೆಲ್ಲಾ ಸಾಧ್ಯವಾಯಿತು ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಅವರು ಚಂದ್ರು ಪ್ರಯತ್ನಗಳನ್ನೇ ಕೊಂಡಾಡಿದರು. ಚಿತ್ರದ ಪ್ರತಿ ಹಂತದಲ್ಲಿ ಹೆಗಲು ಕೊಟ್ಟವರು ಕೆ.ಪಿ.ಶ್ರೀಕಾಂತ್ ಎಂದು ಪ್ರತಿಯೊಬ್ಬರೂ ಕೊಂಡಾಡಿದರು.
ಗೆಲುವಿನ ಸಂತಸ ಹಂಚಿಕೊಳ್ಳಲು ಸ್ಟಾರ್ ಹೊಟೇಲ್ ನಲ್ಲಿ ಇಡೀ ಚಿತ್ರತಂಡ ಸೇರಿದ್ದ ವಾತಾವಾರಣವದು. ಚಿತ್ರ ತಂಡದ ಪರವಾಗಿ ಬಿ.ಸುರೇಶ್,
ಪ್ರದೀಪ್ ಈಶ್ವರ್, ಅಶ್ವಥ್ ನೀನಾಸಂ
ಅನೂಪ್ ರೇವಣ್ಣ, ವಿತರಕ ಮೋಹನ್, ಕಾಮರಾಜು, ನವರಸನ್
ಶೋಭ ರಾಘವೇಂದ್ರ, ಸಾಹಸ ನಿರ್ದೇಶಕ ಚೇತನ್ ಡಿಸೋಜ,
ಕೆ.ಪಿ.ಶ್ರೀಕಾಂತ್, ಕಿನ್ನಾಳ್ ರಾಜ್ ಮಾತನಾಡಿದರು.