Snehapriya.com

June 9, 2025

ಆರ್.ಚಂದ್ರು ಸ್ಟುಡಿಯೋಸ್ ಚಿತ್ರ ಫಾದರ್ ಮೋಷನ್ ಪೋಸ್ಟರ್..

Social Share :

ಕನ್ನಡದ ಸಾಹಸಿ ನಿರ್ಮಾಪಕರ ಸಾಲಿಗೆ ಪ್ರವೇಶ ಪಡೆದಿರುವ ಆರ್.ಚಂದ್ರು ಈಗ ಮತ್ತಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

ಅವರು ಘೋಷಣೆ ಮಾಡಿದಂತೆ ಆರು ಚಿತ್ರಗಳ ನಿರ್ಮಾಣದ ಕಾರ್ಯಕ್ಕೆ ವೇಗವನ್ನು ನೀಡಿದ ಖುಷಿಯಲ್ಲಿ ಬೀಗುತ್ತಿದ್ದಾರೆ.

ಏಕೆಂದರೆ ಮೊದಲ ಚಿತ್ರ ‘ಫಾದರ್’ ಚಿತ್ರೀಕರಣದ ಕೆಲಸಗಳು ಮುಗಿದಿದ್ದು, ಚಿತ್ರದ ಬಗ್ಗೆ ಅಪಾರ ಭರವಸೆಯ ನೆಲೆಯಲ್ಲಿ ಉಳಿದ ಕೆಲಸಗಳು ನಡೆಯುತ್ತಿವೆ.

ಈ ಚಿತ್ರದ ಪ್ರಚಾರದ ಭಾಗವಾಗಿ ಈಚೆಗೆ ನಡೆದ ಅದ್ದೂರಿ ಕಾರ್ಯಕ್ರಮ ದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಂಡಿದ್ದು, ಅದೀಗ ತೀವ್ರ ಕುತೂಹಲದ ವಿಷಯವಾಗಿ ಮಾರ್ಪಟ್ಟಿದೆ.

ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ತಂದೆ ಪಾತ್ರದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ಅವರ ಸಹಜ ನಟನೆಯ ಸುತ್ತ ಆವರಿಸಿರುವ ಸಂಚಲನೆ ಇದಾಗಿದೆ.

ಆರ್.ಚಂದ್ರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರದ ಆಶಯಗಳನ್ನು ಮತ್ತು ಆರ್.ಚಂದ್ರು ಅವರ ಕೆಚ್ಚೆದೆಯ ಸವಾಲುಗಳನ್ನು ಅವರು ಕೊಂಡಾಡಿದರು.

ಚಂದ್ರು ಅವರ ಹಿತೈಷಿಯಾಗಿರುವ ಹಿರಿಯ ರಾಜಕಾರಣಿ ಮತ್ತು ಸರ್ಕಾರದ ಗ್ಯಾರಟಿ ಸಮಿತಿ ಅಧ್ಯಕ್ಷರಾಗಿರುವ ಎಚ್.ಎಂ.ರೇವಣ್ಣ, ನಟ ಅನೂಪ್ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷ ವಾಗಿತ್ತು.

ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಚಿತ್ರತಂಡ ಫಾದರ್ ಚಿತ್ರದ ಹೆಮ್ಮೆಯ ಆಶಯಗಳನ್ನು ವಿವರಿಸಿತು. ಆರ್.ಸಿ.ಸ್ಟುಡಿಯೋಸ್ ಚಿತ್ರಗಳ ನಿರ್ಮಾಣದ ವಿಷಯದಲ್ಲಿ ವೇಗ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ವಿವರಿಸಿದರು ಆರ್.ಚಂದ್ರು.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ನೂರು ಕೋಟಿ ಸಿನಿಮಾ (ಕಬ್ಜ) ಮಾಡುವ ಮಟ್ಟಕ್ಕೆ ಬೆಳೆಯುವುದು ಹೇಗೆ ಸಾಧ್ಯವಾಯಿತು ಎಂಬುದು ನನಗೇ ಅಚ್ಚರಿಯಾಗಿದೆ. ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ 12 ಚಿತ್ರಗಳು ನಿರ್ಮಾಣವಾದವು. ನಂತರ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳನ್ನು ಮಾಡುವ ಅದಮ್ಯ ಇಚ್ಛೆಯಿಂದ ಆರ್.ಸಿ.ಸ್ಟುಡಿಯೋಸ್ ಹುಟ್ಟು ಹಾಕಲಾಗಿದೆ ಎಂದು ವಿವರಿಸಿದರು ಆರ್.ಚಂದ್ರು.

ಅಪ್ಪ ಮಗನ ಬಾಂಧವ್ಯದ ವಿಷಯದಲ್ಲಿ ಹೊಸತನವನ್ನು ಕಾಯ್ದುಕೊಳ್ಳಲಾಗಿದೆ. ಡಾರ್ಲಿಂಗ್ ಕೃಷ್ಣ ಇಲ್ಲಿ ಬೇರೆಯದೇ ಆದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ವಿವರಗಳು ಬಂದವು.

‘ಫಾದರ್’ ಚಿತ್ರ ಮಾಡುವಾಗಲೇ ಫಾದರ್ ಆಗುವ ಯೋಗ ಬಂದಿದ್ದು, ಆಕಸ್ಮಿಕ ಮತ್ತು ಪುಣ್ಯದಿಂದ ಇರಬಹುದು ಎಂದರು ಡಾರ್ಲಿಂಗ್ ಕೃಷ್ಣ. ಅಮೃತಾ ಅಯ್ಯಂಗಾರ್ ಕೂಡ ತಮ್ಮ ಪಾತ್ರದ ಚಿತ್ರತಂಡದ ಸಹಕಾರಗಳ ಕುರಿತು ಮಾತನಾಡಿದರು.

ಪ್ರಕಾಶ್ ರೈ ಅವರ ಪಾತ್ರಕ್ಕೆ ಬೇರೆಯದೇ ಆದ ನೆಲೆ ಇದೆ. ಇಲ್ಲಿಯವರೆಗಿನ ಅವರ ಪಾತ್ರಗಳ ಹೆಚ್ಚುಗಾರಿಕೆಯ ಸಮಕ್ಕೆ ಈ ಪಾತ್ರ ಬಂದು ನಿಲ್ಲಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ನಿರ್ದೇಶಕ ರಾಜ್ ಮೋಹನ್, ನಟ ನಾಗ್ ಭೂಷಣ್, ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *