ಬೆಂಗಳೂರಿನ ಭೂಗತ ಜಗತ್ತಿನ ಸಂಘರ್ಷದ ಕಥೆಯನ್ನು ಹೊಂದಿರುವ ಈ ಚಿತ್ರ ನಿರ್ಮಾಣವಾಗಿರುವುದು ಕ್ರೌಡ್ ಫಂಡ್ (ಗುಂಪಿನ ಹಣ) ಮೂಲಕ.
ಅದೇ ಕ್ಯಾಪಿಟಲ್ ಸಿಟಿ..!
ನಟನೆ ಹಾಗೂ ಸಿನಿಮಾಸಕ್ತಿಯಲ್ಲಿ ಮಿಂದೆದ್ದ ಜನರು ಆಸಕ್ತಿ ವಹಿಸಿ ‘ತಮ್ಮಿಂದ ಇಷ್ಟು ಹಣ’ ಎಂದು ಹೂಡಿಕೆ ಮಾಡಿದವರ ಸಂಖ್ಯೆ ಸುಮಾರು ಇಪ್ಪತ್ತು.
ಈಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕ್ಕಿಕ್ಕಿರಿದ ಜನಸಂದಣಿ.
ವೇದಿಕೆಯ ಮೇಲೆಯೂ ಅದು ಪ್ರದರ್ಶನವಾಗಿದ್ದು ವಿಶೇಷ. ಸ್ವಾಮೀಜಿಗಳು, ಚಿತ್ರರಂಗದ ಗಣ್ಯರು ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದ ಆ ಕ್ಷಣಗಳು ಅತ್ಯಂತ ಸಂಭ್ರಮದಿಂದ ಕೂಡಿತ್ತು.
ಆರ್ ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ರಾಜೀವ್ ರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇನಿಫಿನಿಟಿ ಕ್ರಿಯೇಷನ್ಸ್ ಸಂಸ್ಥೆಯ ಬ್ಯಾನರ್ ನಡಿ ಸುಮಾರು 20 ಮಂದಿ ಈ ಚಿತ್ರದ ನಿರ್ಮಾಪಕರು.
ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ ಹಿನ್ನೆಲೆ ಆರ್.ಅನಂತರಾಜು ಅವರಿಗಿದೆ.
ರಾಜೀವ್ ರೆಡ್ಡಿ ಈ ಮುಂಚೆ ‘ರಂಭಾ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳನ್ನು ಜಯನಗರ ಎಂಎಲ್ ಎ ಸಿ.ಕೆ.ರಾಮಮೂರ್ತಿ, ಮಾಜಿ ಸಚಿವ ರೇಣುಕಾಚಾರ್ಯ ಅನಾವರಣ ಮಾಡಿದರು. ಶಿವಗಂಗೆಯ ಶ್ರೀಮಲಯ ಶಾಂತಮುನಿ ಸ್ವಾಮಿಗಳು ಹಾಗೂ ಶ್ರೀ ಆದಿತ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಡಿ.ಕೆ.ರಾಮಕೃಷ್ಣ, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಾಜೀವ್ ರೆಡ್ಡಿ ಎದುರು ಪ್ರೇರಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್ ಮೊದಲಾದ ಹಿರಿಯ ಕಲಾವಿದರು ಹಾಗೂ ಚಿತ್ರದ ಕೆಲವು ನಿರ್ಮಾಪಕರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, 2025 ರ ಜನವರಿ ಅಂತ್ಯಕ್ಕೆ ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.
ಇದೊಂದು ಪ್ರತೀಕಾರದ ಕಥೆ. ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುವಿರಿ ಎಂಬುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂಬುದು ರಾಜೀವ್ ರೆಡ್ಡಿ ವಿವರಣೆ.
ನಟಿ ಪ್ರೇರಣ, ನಿರ್ಮಾಪಕರಾದ ಮಂಜುನಾಥ್, ಕರ್ನಲ್ ರಾಜೇಂದ್ರ, ಶಿವಪ್ಪ ಕುಡ್ಲೂರು, ಆಂಟೋನಿ ರಾಜ್, ಕೃಷ್ಣಮೂರ್ತಿ ಹಾಗೂ ಸಂಗೀತ ನಿರ್ದೇಶಕ ನಾಗ್ ಚಿತ್ರದ ಕುರಿತು ಮಾಹಿತಿ ನೀಡಿದರು.