* ಪುನೀತ್ ರಾಜ್ಕುಮಾರ್ ಈಗ ಕರ್ನಾಟಕ ರತ್ನ
* ವರುಣಾರ್ಭಟದ ನಡುವೆ ಪ್ರಶಸ್ತಿ ಪ್ರದಾನ
* ರಜನಿಕಾಂತ್, ತಾರಕ್ ಮಳೆಯಲ್ಲಿಯೇ ಭಾಷಣ
ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು (01/11/2022) ರಾಜ್ಯದ ಹೆಮ್ಮೆಯ ಪ್ರತೀಕವಾದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಭವ್ಯವಾದ ಸಮಾರಂಭದಲ್ಲಿ ಇಡೀ ಜಗತ್ತೇ ಮೆಚ್ಚುವ ಅನುಪಮ ಕಲಾವಿದರ ಸಾಕ್ಷಿಯಾಗಿ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡದ ಜನಮಾನಸದ ನಡುವೆ ಸದಾ ಕಂಗೊಳಿಸುವ ಅಪ್ಪು ಅವರ ಸಾಧನೆಯ ಹಾದಿಯನ್ನು ನೆನೆಯುತ್ತಲೇ ಮರಣೋತ್ತರವಾಗಿ
ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯ ಕಿರೀಟಧಾರಣೆ ಮಾಡಲಾಯಿತು.
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಂದಮುರಿ ತಾರಕ ರಾಮ್ ರಾವ್ (ಜೂ. ಎನ್.ಟಿ.ಆರ್), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸುಧಾಮೂರ್ತಿ ಹಾಗೂ ಇತರ ಗಣ್ಯರ ನಡುವೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಈ ಪ್ರಶಸ್ತಿಯ ಗೌರವ ನೀಡಲಾಯಿತು.
ಅಷ್ಟೊತ್ತಿಗಾಗಲೇ ಮಳೆಯ ಆರ್ಭಟ ಜೋರಾಗಿತ್ತು. ಅತಿಥಿಗಳು ಮಾತನಾಡುವುದೋ ಬೇಡವೋ ಎಂಬ ಗೊಂದಲದಲ್ಲಿ ಮಾತನಾಡಿದರಾದರೂ ಆ ಒಂದೊಂದು ಮಾತುಗಳೂ ಮುತ್ತುಗಳಾಗಿ ಹೊಮ್ಮಿ ಕನ್ನಡಿಗರ ಹೃದಯವನ್ನು ಪುಳಕಗೊಳಿಸಿದವು.
ಅಪ್ಪು ದೇವರ ಮಗ; ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಸಾಧನೆ ಮಾಡಿ ಹೊರಟು ಹೋದ.. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂದು ದಾನ ಮಾಡಿದ ಪುಣ್ಯಾತ್ಮ ಎಂದು ಕೊಂಡಾಡಿದರು ತಲೈವಾ ರಜನಿಕಾಂತ್.
ಪರಂಪರೆ; ಉಪನಾಮ ಮನೆತನದಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಸ್ವಂತ ನಡೆಯಿಂದ ಬರುತ್ತದೆ. ಹಾಗೆ ಅಪರೂಪದ ವ್ಯಕ್ತಿತ್ವ ಹೊಂದಿದವರು ನನ್ನ ಗೆಳೆಯ.. ಅವರು ನಗುವಿನ ಒಡೆಯ ಎಂದು ಅಪ್ಪು ಗುಣಗಾನ ಮಾಡಿದವರು ಜೂನಿಯರ್ ಎನ್.ಟಿ.ಆರ್.
ಅಪ್ಪಾಜಿ ನಂತರ ಅಪ್ಪು ಕೂಡ ಸಾಧನೆಯ ಶಿಖರದಲ್ಲಿ ಕಂಗೊಳಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನವಾಗಿರುವುದು ನೋವಿನಲ್ಲೂ ಖುಷಿ ಕೊಟ್ಟಿದೆ ಎಂದರು ಡಾ.ಶಿವರಾಜ್ ಕುಮಾರ್.
ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಅಪ್ಪು ಸಾಧನೆಗಳನ್ನು ಹೊಗಳಿ ಮತ್ತೆ ಹುಟ್ಟಿ ಬಾ ಅಪ್ಪು ಎಂದರು.