ಬೆಂಗಳೂರಿನಲ್ಲಿ ನೆಲೆಸಿರುವ ಸೊರಬ ಮೂಲದ ಉದ್ಯಮಿ ಡಾ.ಎಂ.ವಿ.ಕೃಷ್ಣಪ್ಪ ಮಲೆನಾಡು ಭಾಗದ ಶಾಲೆಗಳನ್ನು ದತ್ತು ಪಡೆದು ಅವುಗಳ ಸಮರ್ಪಕ ನಿರ್ವಹಣೆಗೆ ಮುಂದಾಗಿದ್ದಾರೆ.
ಅದರ ಮೊದಲ ಭಾಗವಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೊಡಕಣಿ ಹಾಗೂ ಹೊಸಬಾಳೆ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಈಗ ಸಮರ್ಪಕ ದುರಸ್ಥಿ ಹಾಗೂ ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ.
ಅದೇ ರೀತಿ ಸಾಗರ ತಾಲ್ಲೂಕಿನ ಎಸ್.ಎನ್.ನಗರ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯ ಪ್ರಗತಿಯಲ್ಲಿದ್ದು, ಅದು ಸಹ ಸುಣ್ಣಬಣ್ಣಗಳಿಂದ ಕಂಗೊಳಿಸಲು ಸಜ್ಜಾಗಿದೆ. ಡಾ.ಎಂ.ವಿ.ಕೃಷ್ಣಪ್ಪ ಅವರ ಡಿಡಿ ಪಿಕ್ಚರ್ಸ್ ನ ಮೂಲಕ ಇದನ್ನು ಸಾಧ್ಯಗೊಳಿಸಲಾಗಿದೆ..
ಸೊರಬ ತಾಲ್ಲೂಕಿನಾದ್ಯಂತ ವಿವಿಧ ಯೋಜನೆಗಳನ್ನು ರೂಪಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವ ಕೃಷ್ಣಪ್ಪ ಅವರಿಗೆ ಅದರ ಪ್ರತಿಯಾಗಿ ಪ್ರತಿಫಲಾಪೇಕ್ಷೆ ಇಲ್ಲ. ತಾನು ಹುಟ್ಟಿ ಬೆಳೆದ ತವರು ಮತ್ತು ಜನರು ಖುಷಿಯಾಗಿರಲಿ ಎಂಬ ಕಾರಣದಿಂದ ಇದನ್ನು ಮಾಡುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳು ನೀಡಿದ ವಿವರ.
ಅಂದ ಹಾಗೆ ಡಾ.ಎಂ.ವಿ.ಕೆ. ಅಭಿಮಾನಿ ಸಂಘವು ಅಸ್ತಿತ್ವದಲ್ಲಿದ್ದು, ಅದರ ಮೂಲಕ ಶಾಲಾ ಕಾಲೇಜುಗಳಲ್ಲಿ ದೊಡ್ಡ ಮಟ್ಟದಲ್ಲಿ ಆಟ ಪಾಠದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದರ ಖರ್ಚಿನ ಹೊಣೆಯನ್ನು ಸಹ ಡಾ.ಎಂವಿಕೆ ಡಿಡಿ ಪಿಕ್ಚರ್ಸ್ ನಿರ್ವಹಿಸುತ್ತದೆ.
ಮೂಲತಃ ಚಿತ್ರ ನಿರ್ಮಾಪಕರಾಗಿರುವ ಡಾ.ಎಂ.ವಿ.ಕೃಷ್ಣಪ್ಪ ಸಮಾಜ ಸೇವೆಯ ನೆಲೆಯಿಂದ ನಾಯಕರಾಗಿ ಹೊಮ್ಮಿದವರು. ಸಮಾಜ ಸೇವೆಯ ಧ್ಯೇಯ ಹೊಂದಿರುವಾಗಲೇ ಕೊರೊನಾ ಹೆಮ್ಮಾರಿ ಜನರ ಬದುಕನ್ನು ಕಿತ್ತು ತಿಂದಿತು. ಈ ಸಂದರ್ಭದಲ್ಲಿ ಮಲೆನಾಡು ಹಾಗೂ ಕನ್ನಡ ಚಿತ್ರರಂಗದ ಪರವಾಗಿ ನಿಂತ ಡಾ.ಎಂ.ವಿ.ಕೆ. ಮಾಡಿದ ದಾನಗಳಿಗೆ ಲೆಕ್ಕವೇ ಇಲ್ಲ..
ದಿನ ನಿತ್ಯದ ವಸ್ತುಗಳೂ ಸೇರಿದಂತೆ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಗಳು ಪುಸ್ತಕ ಹಾಗೂ ಇತರ ಪರಿಕರಗಳನ್ನು ಒದಗಿಸುವಲ್ಲಿ ನೆರವಾದರು. ಕನ್ನಡ ಚಿತ್ರರಂಗದ ಪ್ರತಿ ವಲಯದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದು ಕೂಡ ಹೆಗ್ಗಳಿಕೆ.
ಡಿಡಿ ಪಿಕ್ಚರ್ಸ್ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣ ಗುರಿ ಹೊಂದಿರುವ ಡಾ.ಎಂವಿಕೆ ಈಗಾಗಲೇ ‘ಅಭಿರಾಮಿ’ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಗುರಿಯ ಜೊತೆಗೆ ಹೊಸ ಪ್ರತಿಭೆಗಳಿಗೆ ಸಿನಿಮಾ ವೇದಿಕೆ ಸೃಷ್ಟಿಸಿ ಕೊಡುತ್ತಿದ್ದಾರೆ.