ಪ್ರಿಯಾಂಕ ಉಪೇಂದ್ರ ಈಗ ಆಕ್ಷನ್ ಕ್ವೀನ್..!
ಚಿತ್ರ ಉಗ್ರಾವತಾರ.. !
ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ವಿರುದ್ಧ ಸಿಡಿದೇಳುವ ಮಹಿಳಾ ಕಾಪ್ ಪಾತ್ರದಲ್ಲಿ ದುಷ್ಕರ್ಮಿಗಳನ್ನು ಹಿಡಿದು ಚಚ್ಚಿ ಹಾಕುವುದರಿಂದ ಈಗ ಅವರಿಗೊಂದು ಆಕ್ಷನ್ ಇಮೇಜ್ ಬಂದಿದೆ.
ಈಚೆಗೆ ಚಿತ್ರತಂಡ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಮೊದಲು ಸಿನಿಮಾ ಮಾಡಿದಾಗ ಎಲ್ಲರೊಳಗೂ ಒಂದು ಆತಂಕ ಇರುತ್ತದೆ. ಈ ಚಿತ್ರದ ನಿರ್ಮಾಪಕರಿಗೆ ಅಥವಾ ನಾನೇ ಸಿನಿಮಾ ಮಾಡಿದಾಗ ಆ ರೀತಿ ಭಾವಗಳನ್ನು ಅನುಭವಿಸಿರುವೆ ಎಂದರು ಉಪೇಂದ್ರ.
ಪೊಲೀಸ್ ಪಾತ್ರದಲ್ಲಿ ಪ್ರಿಯಾಂಕ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಆದರೆ ಗ್ಲಾಮರಸ್ ಆಗಿ ಕಾಣುವುದರಿಂದ ಫೈಟ್ ಮಾಡುವುದನ್ನು ನೋಡುವುದಿಲ್ಲ. ಬದಲಿಗೆ ಅವರನ್ನೇ ನೋಡುತ್ತಾ ಮೈಮರೆಯಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕನ್ನಡ ಚಿತ್ರರಂಗವನ್ನು ಹಣ ಹೂಡುವ ನಿರ್ಮಾಪಕರು ಕಾಪಾಡುತ್ತಿದ್ದಾರೆ. ಕನ್ನಡ ಸಿನಿಮಾ ಬಗ್ಗೆ ಸುಮ್ಮನೆ ಮಾತನಾಡುವುದು ತರವಲ್ಲ; ಸಿನಿಮಾಗಳನ್ನು ನೋಡಿ ಅಭಿಪ್ರಾಯಗಳನ್ನು ಕೊಡಿ ಎಂದರು ರಿಯಲ್ ಸ್ಟಾರ್.
ಮಹಿಳೆಯರು ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ ಎಂದರು ಪ್ರಿಯಾಂಕ ಉಪೇಂದ್ರ. ಪ್ರತಿ ನಿತ್ಯ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣಿನ ಮೇಲೆ ನಡೆಯುವ ಶೋಷಣೆ ಮತ್ತು ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಇದಕ್ಕೆ ಮಹಿಳಾ ಜಾಗೃತಿ ಎಂಬುದೇ ಅನಿವಾರ್ಯ ಎಂದರು.
ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ದುಷ್ಟರನ್ನು ದಮನ ಮಾಡುವುದು ಚಿತ್ರದಲ್ಲಿದೆ. ಈ ಚಿತ್ರ ಮಹಿಳೆಯರಿಗೆ ಜಾಗೃತಿ ಮೂಡಿಸುವ ಚಿತ್ರವಾಗಿಯೂ ನಿಲ್ಲುತ್ತದೆ ಎಂದರು ಪ್ರಿಯಾಂಕ ಉಪೇಂದ್ರ.
ಶೋಷಣೆ ಮತ್ತು ರಕ್ಷಣೆ ವಿಚಾರದಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಾಗಿದೆ. ಒಂಟಿ ಮಹಿಳೆಯಲ್ಲಿ ಪೊಲೀಸರಿಂದ ರಕ್ಷಣೆ ಇರುವ ಸುರಕ್ಷಾ ಆಪ್ ಬಳಸಬಹುದಾಗಿದೆ. ನಮ್ಮ ರಕ್ಷಣೆ ನಮ್ಮ ಹೊಣೆ ಎಂದು ಮಹಿಳೆಯರಿಗೆ ಕರೆ ನೀಡಿದರು.
ಎಸ್ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ, ಎಸ್.ಜಿ.ಸತೀಶ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗುರುಮೂರ್ತಿ ಇದರ ನಿರ್ದೇಶಕರು.
ಮಹಿಳಾ ಜಾಗೃತಾ ಚಿತ್ರವಾಗಿ ಇದು ನಿಲ್ಲುತ್ತದೆ. ನೈಜ ಘಟನೆಗಳನ್ನು ಆಧರಿಸಿಯೇ ಚಿತ್ರವು ರೂಪುಗೊಂಡಿದೆ. ಮುಖ್ಯವಾಗಿ ಪ್ರಿಯಾಂಕಾ ಮೇಡಂ ಇದರಲ್ಲಿ ಆಕ್ಷನ್ ಕ್ವೀನ್ ಆಗಿದ್ದಾರೆ ಎಂದರು ನಿರ್ದೇಶಕರು.
ಕಲಾವಿದರಾದ ರೋಬೋಗಣೇಶ್, ಲತಾ, ದರ್ಶನ್ ಸೂರ್ಯ, ಲಕ್ಷೀಶೆಟ್ಟಿ, ಚರಣ್, ಲೀಲಾಮೋಹನ್, ಕಾರ್ಯನ್, ಪ್ರವೀಣ್ ಸೂರ್ಯ, ಸಂಗೀತ ನಿರ್ದೇಶಕ ಕೃಷ್ಣ ಬಸ್ರೂರು, ಛಾಯಾಗ್ರಾಹಕ ನಂದಕುಮಾರ್, ವಿತರಕ ಮರೀಸ್ವಾಮಿ ಹಾಗೂ ಉಪೇಂದ್ರ ಅವರ ಸೋದರ ಪುತ್ರ ನಟ ನಿರಂಜನ್ ಸುಧೀಂದ್ರ, ನಿದರ್ಶನ್ ಉಪಸ್ಥಿತರಿದ್ದರು.