ಮುಂಚೂಣಿಯ ನಟರಿಲ್ಲ
ಜಾಲತಾಣದಲ್ಲಿ ಆಕ್ಷೇಪ
ರಾಜ್ಯಸಭಾ ಸದಸ್ಯ, ನವರಸ ನಾಯಕ ಜಗ್ಗೇಶ್ ನಿರ್ಮಾಣದ ಹಾಗೂ ಸಂತೋಷ್ ಆನಂದರಾಮ್ ನಿರ್ದೇಶನದ ‘ವಂದೇ ಮಾತರಂ’ ಗೀತೆಗೆ ಹಲವು ವಿರೋಧಗಳ ನಡುವೆಯೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಿರ್ಮಾಣವಾದ ‘ವಂದೇ ಮಾತರಂ’ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚಿ ಟ್ವೀಟ್ ಮಾಡಿರುವುದು ಈಗ ಸುದ್ದಿಯಾಗಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದ ವಂದೇ ಮಾತರಂ, ವಿಡಿಯೋ ಹಾಡಿಗೆ ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ. ವಿಜಯಪ್ರಕಾಶ್ ಹಾಡಿದ್ದು, ಶ್ರೀಶ ಕುದಹಳ್ಳಿ ಛಾಯಾಗ್ರಹಣವಿದೆ.
ಕನ್ನಡದ ಮುಂಚೂಣಿಯ ತಾರೆಗಳಾದ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಸುದೀಪ್, ರಮೇಶ್ ಅರವಿಂದ್, ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್. ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಅಪ್ ಲೋಡ್ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ ಇದಾಗಿದೆ ಎಂದು ಕನ್ನಡದಲ್ಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ನವರಸ ನಾಯಕ ಜಗ್ಗೇಶ್, ಕೇವಲ ನಾಲ್ಕೂವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ ‘ವಂದೇ ಮಾತರಂ’ ಎಂದರೆ ಜಾತಿ ಮತ ಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತಮಾತೆಯ ಮಕ್ಕಳುವ ಎನ್ನುವುದಾಗಿದೆ. ನನಗೆ ‘ಮಿಲೇ ಸುರ್ ಮೇರಾ ತುಮಾರ..’ ಬಹಳವೇ ಇಷ್ಟ. ಅದೇ ರೀತಿಯ ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮಾದಲ್ಲಿ ಮಾಡಬೇಕೆಂಬ ಆಸೆ ಇತ್ತು. ಅದು ಈ ಮೂಲಕ ಸಾಕಾರಗೊಂಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆದಾಗ್ಯೂ ಹಲವು ಮುಂಚೂಣಿ ನಾಯಕ ನಟರನ್ನು ವಿಶೇಷವಾಗಿ ಯಶ್, ದರ್ಶನ್, ಉಪೇಂದ್ರ ಅವರನ್ನು ಬಿಟ್ಟಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.