ರೇಟಿಂಗ್ : 4/5
ನಿರ್ಮಾಣ : ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್
ನಿರ್ಮಾಪಕರು : ಕೆ.ಎಂ.ಶಶಿಧರ್
ನಿರ್ದೇಶನ : ಖದರ್ ಕುಮಾರ್
ಶತೃ ಹೃದಯ ಚೆಂಡಾಡುವ ಬಗೆ..
ಸ್ಮಶಾನದಲ್ಲಿ ಚಿತೆ ಉರಿಯುವಾಗ ರೌಡಿ ಪಡೆಯ ಅಟ್ಟಹಾಸಕ್ಕೆ ನಲುಗಿದ ವೀರ ಯುವಕ ಸಾವು ಬದುಕಿನ ಪ್ರಶ್ನೆ ಎದುರಾದಾಗ ಉರಿಯುವ ಚಿತೆಯಿಂದ ಎತ್ತಿಕೊಂಡ ಕೊಳ್ಳಿಯ ಆ ಅಸ್ತ್ರದಿಂದ ವಿರೋಧಿ ಪಡೆಯ ರುಂಡ ಚೆಂಡಾಡುತ್ತಾನೆ…
ಬೆಂಕಿಯ ರುದ್ರ ನರ್ತನದಂತೆ ಕಾಣುವ ಆ ಕೊಳ್ಳಿಯಾಟ ಸಾಹಸಪ್ರಿಯರಿಗೆ ನೋಡಲು ಚೆನ್ನ..
ಇಡೀ ಚಿತ್ರದಲ್ಲಿ ಕಣ್ಣುಗಳನ್ನು ಬೆಂಕಿಯುಂಡೆ ಮಾಡಿ ವಿಕೃತರ ಅಟ್ಟಹಾಸ ಹತ್ತಿಕ್ಕುವ ಹುಡುಗನ ಹೆಸರು ವೀರು. ಚಿತ್ರದ ಹೆಸರು ವೀರಂ.
ನಮ್ಮ ವ್ಯವಸ್ಥೆಯಲ್ಲಿ ಲೋಪಗಳಿವೆ. ರಾಜಕೀಯದಲ್ಲಿ ರೌಡಿ ಪಡೆಗಳ ರಂಗಿನಾಟ ಇದ್ದೇ ಇರುತ್ತದೆ. ಇಂತಹ ರಾಜಕೀಯ ವ್ಯಕ್ತಿಗಳು ದಾಳಗಳಾಗಿ ಬಳಸುವ ಹುಡುಗರ ಸ್ಥಿತಿ ಗತಿ ಹೇಗಿರುತ್ತದೆ ಎಂಬುದು ಚಿತ್ರದ ತಿರುಳು. ಅದನ್ನು ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕ ಖದರ್ ಕುಮಾರ್.
ಇಬ್ಬರು ತಮ್ಮಂದಿರ ಮುದ್ದಿನ ಅಕ್ಕ (ಶೃತಿ) ತ್ಯಾಗಮಹಿಯಾದರೂ ಒಬ್ಬ ತಮ್ಮ ‘ಅಣ್ಣ’ ಎಂಬ ವ್ಯಕ್ತಿಯ ಹಿಂದೆ ಹೋಗುತ್ತಾನೆ. ಮತ್ತೊಬ್ಬ ತಮ್ಮ ಪರಿಸ್ಥಿತಿಯ ಕೈಗೊಂಬೆ.
ಆತನೇ ವೀರು..!
ನೋಡುವುದಕ್ಕೆ ಪಕ್ಕಾ ಲೋಕಲ್ ರೌಡಿಸಂನ ಕಥೆಯಂತೆ ಕಂಡರೂ ಒಳಗೆ ಅದಮ್ಯ ಭಾವನಾತ್ಮಕ ಗುಣಗಳನ್ನು ಹೊಂದಿರುವ ಕಾರಣಕ್ಕೆ ಇದು ಬೇರೆಯದೇ ಬಗೆಯ ಚಿತ್ರ ಎಂಬಂತೆ ಕಾಣುತ್ತದೆ.
‘ಅಣ್ಣ’ನ ಹಿಂದೆ ಹೋದ ದೊಡ್ಡ ತಮ್ಮ (ಶ್ರೀನಗರ ಕಿಟ್ಟಿ) ಬೀದಿ ಹೆಣವಾಗುವುದು. ವೀರು (ಪ್ರಜ್ವಲ್) ಪೊಲೀಸರ ಕೈಗೆ ಸಿಕ್ಕು ನರಳುವುದು ಈ ದೃಶ್ಯಗಳು ನೈಜ ಭಾವಗಳನ್ನೇ ಮೊಗೆದು ಕೊಡುತ್ತವೆ.
ಮುಖ್ಯವಾಗಿ ಇದು ಕಲ್ಪನೆಯ ಕಟ್ಟುಕತೆಯ ವರಸೆಯಿಂದ ನೈಜತೆ ತುಂಬಿಕೊಂಡಂತೆ ಕಾಣುವುದರಿಂದ ಪ್ರೇಕ್ಷಕ ಅದಮ್ಯ ಕುತೂಹಲದಿಂದ ಕೊನೆಯವರೆಗೂ ಚಿತ್ರ ನೋಡಬಹುದು.
ಅಲ್ಲಲ್ಲಿ ಬರುವ ಧಾತ್ರಿ (ರಚಿತಾ ರಾಮ್)ಯ ಪ್ರೇಮ ಪ್ರಕರಣದಲ್ಲಿ ಲವಲವಿಕೆ ಕಾಣುತ್ತದೆ. ‘ಮೌನವೇ ಚೆನ್ನಾ ಹಾಡು..’ ಮಜಾ ಕೊಡುತ್ತದೆ.
ಗೋವಿಂದ ಮತ್ತು ದೇವಿ ಎಂಬ ಇಬ್ಬರು ರೌಡಿ ಗ್ಯಾಂಗ್ ಅಲ್ಲದೆ ಮತ್ತೊಬ್ಬ ಪಾತಕಿ ವೀರು ಹಿಂದೆ ಬೀಳುವುದು ಮತ್ತು ಕೊನೆಗೆ ಆತನನ್ನೂ ವೀರು ಮಣಿಸುವುದು ಆಸಕ್ತಿಕರ ವಿಷಯಗಳಾಗೇ ನಿಲ್ಲುತ್ತವೆ.
ಶಿವ ಶಿವ ಹಾಡು ಪ್ರೇಕ್ಷಕರ ಹಾಟ್ ಫೆವರಿಟ್ ಆಗುತ್ತದೆ. ವಿಷ್ಣು ದಾದ ನೆನಪು ಅದ್ಭುತವೆನಿಸುತ್ತದೆ. ಪ್ರಜ್ವಲ್ ದೇವರಾಜ್ ವೀರಾವೇಶದ ಯುವಕನಾಗಿ ಅದ್ಭುತ ಅಭಿನಯ ನೀಡಿದ್ದಾರೆ. ಅಕ್ಕನಾಗಿ ಶೃತಿ, ಅಣ್ಣನಾಗಿ ಶ್ರೀನಗರ ಕಿಟ್ಟಿ, ಭಾವನಾಗಿ ಅಚ್ಯುತ್ ಕುಮಾರ್, ಸ್ನೇಹಿತನಾಗಿ ಗಿರೀಶ್ ಶಿವಪ್ಪ ಹಾಗೂ ಜೇಡನಾಗಿ ದೀಪಕ್, ದೇವಿಯಾಗಿ ಬ.ಲ.ರಜವಾಡಿ ಅವರ ಅಭಿನಯ ಗಮನಾರ್ಹ.
ಅನೂಪ್ ಶೀಳಿನ್ ಸಂಗೀತ ಹಾಗೂ ಲವಿತ್ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕ.