ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿರುವ ಹಾಗೂ ಕೆ.ಎಂ.ಶಶಿಧರ್ ನಿರ್ಮಾಣದ
‘ವೀರಂ’ ಈ ವಾರ ಅಂದರೆ ಏಪ್ರಿಲ್ 7ರಂದು ಬಿಡುಗಡೆ ಕಾಣುತ್ತಿದೆ.
ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲು ಸಂಪೂರ್ಣ ಸಜ್ಜುಗೊಂಡಿದೆ.
ದೊಡ್ಡ ತಾರಾಬಳಗದ ಜೊತೆ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ ವೀರಂ. ಇದು ಹೆಚ್ಚಿನ ಕುತೂಹಲಗಳನ್ನು ಸಹ ಅಭಿಮಾನಿಗಳಲ್ಲಿ ಮೂಡಿಸಿದೆ.
ಈಚೆಗೆ ನಡೆದ ಚಿತ್ರದ ಹೊಸ ಹಾಡು ಮತ್ತು ಟ್ರೈಲರ್ ಪ್ರಚಾರ ಹಂತದಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಭಾಗವಹಿಸಿತ್ತು. ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ರಚಿತಾರಾಮ್, ಶಿಷ್ಯ ದೀಪಕ್ ಸೇರಿದಂತೆ ಅನೇಕ ಕಲಾವಿದರು ಈ ಸಂದರ್ಭದಲ್ಲಿ ಭಾಗವಹಿಸಿ ಚಿತ್ರದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದರು.
ಇದೇ ವೇಳೆ ಚಿತ್ರದ ವಿರಹ ವೇದನೆಯಿಂದ ಹಾಡುವ ಮತ್ತೊಂದು ಹಾಡು ‘ಹೋದಳೋ ಬಿಟ್ಟು ಹೋದಳೋ..’ ಎಂಬ ಹಾಡು ಬಿಡುಗಡೆಗೊಂಡಿತು.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ಕೆ.ಎಂ.ಶಶಿಧರ್ ಈ ಚಿತ್ರವನ್ನು ನಿರ್ಮಿಸಿದ್ದು, ಫ್ಯಾಮಿಲಿ ಎಮೋಷನ್, ಲವ್, ಆಕ್ಷನ್, ಥ್ರಿಲ್ಲರ್ ಡ್ರಾಮಾದಂಥ ಎಲ್ಲಾ ರೀತಿಯ ಮನರಂಜನಾ ಅಂಶಗಳನ್ನು ಒಳಗೊಂಡಿದೆ.
ಕಳೆದ ವಾರಷ್ಟೇ ಬಿಡುಗಡೆಯಾದ ಟ್ರೈಲರ್ ಅತಿ ಹೆಚ್ಚು ವೀಕ್ಷಣೆಯಾಗಿದೆ. ಖದರ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಟಿ ಶೃತಿ ಅವರು ಅಕ್ಕ ತಮ್ಮನಾಗಿ ಅಲ್ಲದೆ ಶ್ರೀನಗರ ಕಿಟ್ಟಿ ಅಣ್ಣನಾಗಿ ಕಾಣಿಸಿ ಕೊಂಡಿದ್ದಾರೆ.
ಟ್ರೈಲರ್ಗೆ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ. ಶಿವನ ಕುರಿತ ಹಾಡು ಈಗಾಗಲೇ ಎಲ್ಲರ ಮನೆ ಮನಗಳಲ್ಲೂ ಗಟ್ಟಿಯಾಗಿ ಬೇರೂರಿದೆ. ಹಾಗಾಗಿ ಚಿತ್ರದ ಗೆಲುವಿನ ಬಗ್ಗೆ ಅಗಾಧ ಭರವಸೆ ಇದೆ ಎಂದರು ಪ್ರಜ್ವಲ್ ದೇವರಾಜ್.
ಕುಟುಂಬಕ್ಕೆ ತೊಂದರೆ ಎದುರಾದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ಲುವರು ಎಂಬುದನ್ನು ಹೇಳುವ ಚಿತ್ರವಿದು. ಹಾಗಾಗಿ ಮೊನ್ನೆ ಚಿತ್ರವನ್ನು ನೋಡಿದ ನನ್ನ ಅಮ್ಮ ಭಾವುಕರಾಗಿ ಕಣ್ಣೀರು ಸುರಿಸಿದರು. ಅದು ಸಿನಿಮಾದ ತಾಕತ್ತು ಎಂದರು.
ನಿರ್ದೇಶಕ ಖದರ್ಕುಮಾರ್ ವಿಷ್ಣು ಅಭಿಮಾನಿ. ಹಾಗಾಗಿ ಚಿತ್ರದ ಮೇಲೆ ಅದರ ಛಾಪು ಎದ್ದು ಕಾಣುತ್ತದೆ. ಈಚೆಗೆ ಹುಬ್ಬಳ್ಳಿ ದಾವಣಗೆರೆ ಹಾಗೂ ಮೈಸೂರಿಗೆ ಹೋಗಿದ್ದಾಗ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು ಎಂದರು ಪ್ರಜ್ವಲ್.
ಬ.ಲ.ರಾಜವಾಡಿ, ಅಚ್ಯುತ್ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವಿದೆ. ಅನೂಪ ಸೀಳಿನ್ ಸಂಗೀತ, ಲವಿತ್ ಛಾಯಾಗ್ರಹಣ ಚಿತ್ರಕ್ಕಿದೆ
ಎಂಬ ಮಾಹಿತಿಯೂ ಬಂತು.