ಪನ್ನಾಗಭರಣ ಹಾಗೂ ಸ್ನೇಹಿತರು ಸೇರಿ ನಿರ್ಮಾಣ ಮಾಡಿರುವ ಚಿತ್ರ ‘ತತ್ಸಮ ತದ್ಭವ’ ಬಿಡುಗಡೆಗೆ ಸಿದ್ಧವಿದ್ದು, ಕಳೆದ ಭಾನುವಾರ ಅಂದರೆ ಆಗಸ್ಟ್ 27ರಂದು ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತು.
ಸೆಪ್ಟೆಂಬರ್ 15 ರಂದು ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿರುವ ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾರಾಜ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಡಾಲಿ ಧನಂಜಯ್ ಹಾಗೂ ಧ್ರುವಸರ್ಜಾ ಟ್ರೈಲರ್ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ನಟ ಸುಂದರ್ ರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಚಿತ್ರದ ಕಥೆ ಚಿರು ಅವರಿಗೆ ಇಷ್ಟವಾಗಿತ್ತು. ಪನ್ನಾಗಭರಣ, ಪ್ರಜ್ವಲ್ ಜೊತೆ ಸೇರಿ ಸದಭಿರುಚಿಯ ಚಿತ್ರಗಳನ್ನು ಮಾಡುವ ಆಶಯಗಳನ್ನು ಚಿರು ಇಟ್ಟುಕೊಂಡಿದ್ದರು. ಈ ಚಿತ್ರ ವಿಶೇಷ ರೀತಿಯಲ್ಲಿ ಮೂಡಿ ಬಂದಿದೆ ಎಂದರು ಮೇಘನಾರಾಜ್ ಸರ್ಜಾ.
ನಾನು ಇದುವರೆಗೂ ಮಾಡದೇ ಇರುವಂತಹ ಪಾತ್ರವಿದು ಎಂದರು ಪ್ರಜ್ವಲ್ ದೇವರಾಜ್. ಜೊತೆಗೆ ನಾನು ತುಂಬಾ ಇಷ್ಟಪಟ್ಟು ಮಾಡಿದ ಪಾತ್ರ ಎಂದರು. ಟ್ರೈಲರ್ ಗೆ ಅಪ್ಪ (ದೇವರಾಜ್) ಧ್ವನಿ ನೀಡಿರುವುದು ಖುಷಿ ತಂದಿದೆ ಎಂದರು.
ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ವಿಶೇಷ ಧನ್ಯವಾದ ತಿಳಿಸಲು ಮರೆಯಲಿಲ್ಲ ಪ್ರಜ್ವಲ್.
ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಚಿತ್ರದ ನಿರ್ದೇಶಕ.
‘ತತ್ಸಮ ತದ್ಭವ’ ಒಂದು ಕ್ರೈಮ್ ಥ್ರಿಲ್ಲರ್ ಚಿತ್ರ. ನಾನು ನಿರ್ಮಾಪಕನಾಗಬೇಕು ಎಂದು ಅಂದುಕೊಂಡಿರಲಿಲ್ಲ. ಇದು ಅನಿವಾರ್ಯ ಸಂದರ್ಭದಲ್ಲಿ ಆಗಿದೆ ಎಂದರು ಪನ್ನಾಗಭರಣ.
ನನ್ನ ಜೊತೆ ಕೆಲವು ಸ್ನೇಹಿತರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 15 ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ಧನ್ಯವಾದ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ಇನ್ನೊಂದು ವಿಶೇಷವೆಂದರೆ ನಮ್ಮ ಚಿತ್ರದ ಟಿಕೇಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೇಟ್ ನಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಆಗ ಹಲವರಿಗೆ ಗಿಫ್ಟ್ ಕೂಪನ್ ಗಳು ದೊರೆಯಲಿವೆ ಎಂದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್, ಛಾಯಾಗ್ರಾಹಕ ಶ್ರೀನಿವಾಸ ರಾಮಯ್ಯ, ಕೆ.ಆರ್.ಜಿ ಸ್ಟುಡಿಯೋಸ್ ಯೋಗಿ ಜಿ ರಾಜ್ ಚಿತ್ರದ ಕುರಿತು ಮಾತನಾಡಿದರು.