ನಿಸರ್ಗದಲ್ಲಿನ ಅಪಾರ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆ ಎಂಬ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದ ವರನಟ ಡಾ.ರಾಜ್ ಕುಮಾರ್ ಅವರ ಅಮೋಘ ಅಭಿನಯದ ಆ ‘ಮಾಸ್ಟರ್ ಪೀಸ್’ ಎಂದಿಗೂ ಕನ್ನಡಿಗರ ಹೃನ್ಮನಗಳಲ್ಲಿ ನೆಲೆಸಿದೆ. ಅದೇ ಕಾರಣಕ್ಕೆ ಆ ಚಿತ್ರ ಎರಡು ಬಾರಿ ಮರು ನಿರ್ಮಿಸಲ್ಪಟ್ಟಿದೆ.
ಅದೇ ಗಂಧದ ಗುಡಿ..!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ‘ಗಂಧದ ಗುಡಿ-2’ ರಲ್ಲಿ ಅಪ್ಪನ ಜೋತೆಯೇ ಅಭಿನಯಿಸಿ ಗಮನ ಸೆಳೆದಿದ್ದರು. ಬಳಿಕ ಅಪ್ಪ ಮತ್ತು ಅಣ್ಣನ ಹಾದಿಯಲ್ಲಿ ಹೆಜ್ಜೆ ಹಾಕಿ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ನಿಜವಾದ ಇರುವಿಕೆಯನ್ನು ಶೋಧಿಸುತ್ತಾ ಹೊರಟವರು ಪವರ್ ಸ್ಟಾರ್ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಅವರ ಜೊತೆ ಸೇರಿ ತಮ್ಮ ಹುಟ್ಟೂರಿನ ಸಮೀಪವೇ ಇರುವ ದಟ್ಟ ಅರಣ್ಯ ಹಾಗೂ ಅದರ ನಿಗೂಢ ಸಂಪತ್ತನ್ನು ಶೋಧಿಸುವ ಮತ್ತು ಪರಿಚಯಿಸುವ ಕ್ರಮ ಕೈಗೊಂಡ ಅಪ್ಪು ಅವರಿಗೆ ಈ ಚಿತ್ರ ಕನಸಿನ ಕೂಸಾಗಿತ್ತು ಅದೇ..
ಗಂಧದ ಗುಡಿ..!
ಇದೀಗ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ಅರಣ್ಯ ಮತ್ತು ಅದರೊಳಗಿನ ನಿಗೂಢಗಳನ್ನು ಶೋಧಿಸುತ್ತ ಹೋಗುವ ದಾರಿಯಲ್ಲಿ ಅಪರಿಮಿತ ಸಾಹಸ ಮಾಡಿರುವುದು ಎದ್ದು ಕಾಣುತ್ತದೆ.
ಪುನೀತ್ ರಾಜ್ಕುಮಾರ್ ಅರಣ್ಯದ ಪ್ರಾಣಿ ಪಕ್ಷಿಗಳ ಜೊತೆ ಬೆರೆತ್ತಿದ್ದಾರೆ. ನೀರಿನಲ್ಲಿ ಈಜುತ್ತಾ ಸಾಹಸ ಮಾಡಿದ್ದಾರೆ. ಕ್ಷಣ ಕ್ಷಣ ರೋಮಾಂಚನ ಮತ್ತು ಭಾವುಕತೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವ ಸಾಧ್ಯತೆಗಳನ್ನು ಚಿತ್ರದ ಟ್ರೈಲರ್ ಹೇಳುತ್ತದೆ.
ಅಕ್ಟೋಬರ್ 9ರ ಭಾನುವಾರ ಟ್ರೈಲರ್ ಬಿಡುಗಡೆ ಕಾಣುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಟ್ವೀಟ್ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಸಂದೇಶ ಕಳುಹಿಸಿದ್ದಾರೆ.
ಅಪ್ಪು ಅವರು ಕಣ್ಮರೆಯಾಗಿ ಒಂದು ವರ್ಷ ಆಗುತ್ತಿರುವಾಗ ಅವರ ಪುಣ್ಯ ಸ್ಮರಣೆಯ ಒಂದು ದಿನ ಮುಂಚೆ ಅಂದರೆ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.
ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಜ ಜೀವನದ ಅಪ್ಪುವಾಗಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ತಮ್ಮ ದೇವರು ಮತ್ತು ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.