ಪಿಂಕಿ ಎಲ್ಲಿ ಚಿತ್ರವಿಮರ್ಶೆ
ನಿರ್ಮಾಣ : ಸಪ್ತಗಿರಿ ಕ್ರಿಯೇಷನ್ಸ್
ನಿರ್ಮಾಪಕ : ಕೃಷ್ಣೇಗೌಡ
ನಿರ್ದೇಶಕ : ಪೃಥ್ವಿ ಕೋಣನೂರು
ತಾರಾಗಣ : ಅಕ್ಷತಾ ಪಾಂಡವಪುರ ಹಾಗೂ ಮತ್ತಿತರು
ಪ್ರದರ್ಶನ : ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ
ಆಧುನಿಕ ಸಂವೇದನೆಯಲ್ಲಿ ಪ್ರೀತಿ ಪ್ರೇಮ ಅರ್ಥ ಕಳೆದುಕೊಳ್ಳುತ್ತವೆ ಇಲ್ಲವೇ.. ತೆಳುವಾಗುತ್ತವೆ. ಬದುಕಿನ ಅನಿವಾರ್ಯತೆಯಲ್ಲಿ ಬೇಯುವ ಮನಸ್ಸುಗಳು ತಮ್ಮದೇ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳಿಂದ ಬೇಯುತ್ತವೆ.. ಮತ್ತು ನರಳುತ್ತವೆ..
ಪಿಂಕಿ ಎಂಬ ಹೆಣ್ಣು ಮಗು ಕೇವಲ 8 ತಿಂಗಳಿಗೆ ದುಡಿಯುವ ಮಗುವಾಗುತ್ತದೆ; ಮೋಸದಿಂದಲೇ ಅದನ್ನು ಹೊತ್ತು ತಿರುಗುವವಳು ತನ್ನ ಕುಡಿತದ ಚಟಕ್ಕೆ ಕಾಸು ಮಾಡಿಕೊಳ್ಳುತ್ತಾಳೆ. ಅಸಲಿಗೆ ಅದು ಆಕೆಯ ಮಗಳಲ್ಲ.. ದುಡಿಯುವ ಹೆಣ್ಣಿನ ಅನಿವಾರ್ಯ ನಿರ್ಲಕ್ಷ್ಯಕ್ಕೆ ಶಾಪಗ್ರಸ್ತಳಂತೆ ಭಿಕ್ಷುಕಿಯ ಕೈಗೆ ಸಿಗುವವಳು.. ಹಸುಗೂಸು ಅಮಲಿಗೆ ಜಾರುವ ಅನಿಷ್ಟವನ್ನು ಅನುಭವಿಸುವವಳು..
ಪಿಂಕಿ ಕಳೆದು ಹೋದಾಗ ಆಕೆಯ ಹುಡುಕಾಟ ನಡೆಯುತ್ತದೆ.. ಅಲ್ಲಿ ಮಾನವ ಸಂಬಂಧಗಳು, ಸ್ಲಂಗಳಲ್ಲಿನ ಅನಿಷ್ಟ ಬದುಕು, ದಾಂಪತ್ಯ ಮತ್ತು ಸಂಬಂಧಗಳ ಹುಳುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾನಗರಗಳಲ್ಲಿ ಬದುಕುವಾಗಿನ ಅನಿವಾರ್ಯತೆ ಹಾಗೆಯೇ ದಟ್ಟವಾದ ಜನರೊಳಗಿನ ಭಾವಗಳು ವ್ಯಕ್ತವಾಗುತ್ತಾ ಹೋಗುತ್ತವೆ.
ಪಿಂಕಿ ಎಂಬ ಮಗು ಇಲ್ಲಿ ಕೇವಲ ಸಾಂಕೇತಿಕ. ಗೊಂದಲಮಯ ಬದುಕು ಮತ್ತು ಸಾಮಾಜಿಕ ಅಸ್ತವ್ಯಸ್ತತೆಯ ಜೀವಾಳ ಎದ್ದು ಕಾಣುತ್ತದೆ. ಮಗುವಿನ ತಾಯಿಯ ಒಡಲಾಳದ ನೋವು ಅಮಾಯಕತೆ ಮತ್ತು ಅಸಹಾಯಕ ನಿಲವು ಕರುಣೆ ಹುಟ್ಟಿಸುತ್ತದೆ. ಆಕೆಯ ಪತಿ ಹಾಗೂ ಸ್ನೇಹಿತ ಎಂಬ ಎರಡು ಆಯಾಮಗಳಲ್ಲಿ ಪುರುಷತ್ವದ ಹೆಮ್ಮೆ ಮತ್ತು ಪೌರುಷ ಎರಡೂ ಕಾಣುತ್ತವೆ.
ಮಗು ಮಾರಾಟಕ್ಕೆ ಬೇಕಾದರೂ ಸಿಗುತ್ತದೆ.. ಮನೆ ಕೆಲಸದವಳ ಆಸೆ ಬುರುಕುತನದಿಂದ ಥೇಟ್ ಭಿಕ್ಷಾಟನೆಗೆ ಸಿಕ್ಕಂತೆ. ಅದು ಶಾಪಗ್ರಸ್ತವಾದರೆ ಹೆಚ್ಚು ಮೌಲ್ಯ.. ಪಿಂಕಿ ಬಿಳಿ ಹುಡುಗಿ.. ಯಾವುದೇ ಹೋಲಿಕೆಗೆ ಸಿಗದೆ ಬಚಾವಾಗುತ್ತಾಳೆ.. ಆಕೆ ಕಾಣೆಯಾಗಿ ನಡೆಯುವ ಪ್ರಹಸನದಲ್ಲಿ ಆಕೆಯ ಅಮ್ಮ ಕೂಡ ಬಚಾವಾಗುತ್ತಾಳೆ.
ಕೊನೆಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆಯ ಸಮಿತಿ ಮತ್ತು ಅದರ ಸುತ್ತ ನಡೆಯುವ ಘಟನಾವಳಿಗಳು ಇಂದಿನ ವೇಗದ ಬದುಕಿನಲ್ಲಿರುವವರು ಅರಿತುಕೊಳ್ಳಬೇಕಾದ ವಿಷಯ. ಹಾಗಾಗಿ ಅದು ಅತ್ಯುತ್ತಮ ಸಂದೇಶ.
ನಿರ್ದೇಶಕ ಪೃಥ್ವಿ ಕೋಣನೂರು ಸಾಕಷ್ಟು ಕೆಲಸ ಮಾಡಿರುವುದು ಎದ್ದು ಕಾಣುತ್ತದೆ. ಮುಖ್ಯವಾಗಿ ಕೊಳಗೇರಿ ವಾಸಿಗಳನ್ನು ಅಭಿನಯಕ್ಕೆ ತರಬೇತಿಗೊಳಿಸಿರುವುದು ಮತ್ತು ಗಜಿಬಿಜಿಯಲ್ಲೂ ಕ್ಯಾಮೆರಾ ಚಮತ್ಕಾರ ಮೆರೆದಿರುವುದು ಈ ಎಲ್ಲಾ ಕಾರಣದಿಂದ ಚಿತ್ರ ಎಲ್ಲಾ ಉತ್ಕೃಷ್ಟ ಚಿತ್ರೋತ್ಸವಗಳಲ್ಲಿ ಮಿಂದೆದ್ದು ಬಂದಿರುವ ಸತ್ಯ ಗೋಚರಿಸುತ್ತದೆ.
🖋ಸ್ನೇಹಪ್ರಿಯ ನಾಗರಾಜ್