Snehapriya.com

March 7, 2026

ರಾಬಿನ್ ಹುಡ್ ಕಥೆಯ ಥ್ರಿಲ್ಲರ್ ಯುವ ಸರ್ಕಾರ್ ಚಿತ್ರದ ಟೀಸರ್

* ಶಿವಣ್ಣ ಮೆಚ್ಚಿದ ಟೀಸರ್ *

ರಾಬಿನ್ ಹುಡ್ ಮಾದರಿಯ ಕಥೆಯೊಂದು ಸದ್ದಿಲ್ಲದೆ ರೂಪುಗೊಂಡು ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಟೀಸರ್ ಈಚೆಗೆ ಬಿಡುಗಡೆ ಕಂಡಿದೆ.

ಅದೇ ಯುವ ಸರ್ಕಾರ್..!

ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿಯ ಪುತ್ರ ಸಂತೋಷ್ ಕುಮಾರ್ ಈ ಚಿತ್ರದ ನಿರ್ದೇಶಕ. ಹಿಂದೆ ಅವರು ಬಿಂದಾಸ್ ಗೂಗ್ಲಿ, ಕ್ಯಾಂಪಸ್ ಕ್ರಾಂತಿ ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು‌.

ಇದು ಸಂತೋಷ್ ಕುಮಾರ್ ಅವರ ನಾಲ್ಕನೇ ಚಿತ್ರ. ಯುವ ನಟ ವೀರೇನ್ ಕೇಶವ್ ಚಿತ್ರದ ಮುಖ್ಯ ಪಾತ್ರದಲ್ಲಿದ್ದು, ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ಅವರ ಎದುರು ನಟಿಸಿದ್ದಾರೆ.

ಚಿತ್ರದ ಟೀಸರ್ ಬಗ್ಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಚಿಕ್ಕಮ್ಮನ ಮಗ ಸಂತೋಷ್ ಯುವ ಮನಸ್ಸುಗಳ ನಾಡಿ ಮಿಡಿತ ಬಲ್ಲವರು. ಅವರಿಂದ ಉತ್ತಮ ಚಿತ್ರ ಹೊರಬರಲಿ ಎಂಬ ಆಶಯ ವ್ಯಕ್ತಪಡಿಸಿದ್ದರು‌.

ಪ್ರೇಮಿಗಳ ದಿನದ ಅಂಗವಾಗಿ ಈ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಹಾಗೂ ಎಸ್.ಎ.ಗೋವಿಂದರಾಜ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್ ನ್ನು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್, ಎ.ಗಣೇಶ್ ಹಾಗೂ ಮಾಧವಿ ಸೇರಿ ಬಿಡುಗಡೆ ಮಾಡಿದರು.

ಈ ಚಿತ್ರವನ್ನು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಹಾಗೂ ತಂದೆ ಕೀರ್ತಿರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆಯಿದು ಎಂದರು ನಿರ್ದೇಶಕ ಸಂತೋಷ್ ಕುಮಾರ್. ತಮಿಳಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಅದೇ ಯುವ ಸರ್ಕಾರ್ ಎಂಬ ಹೆಸರಿಡಲಾಗಿದೆ.

ತಾಯಿ ತನ್ನ ಮಗನನ್ನು ಗಾಂಧಿಯ ಅದರ್ಶದಲ್ಲಿ ಬೆಳೆಸುತ್ತಾಳೆ, ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಈ ಚಿತ್ರದ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದ, ಆತನನ್ನು ಒಬ್ಬ ದರೋಡೆಕೋರನ ರೀತಿ ಬಿಂಬಿಸಲಾಗಿತ್ತು. ಆದರೆ ಇಲ್ಲಿ ಜನಸ್ನೇಹಿಯಾಗಿ ತೋರಿಸಲಾಗಿದೆ. ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಸಂತೋಷ್ ಕುಮಾರ್.

ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಚಿತ್ರದಲ್ಲಿ 5 ಹಾಡುಗಳಿವೆ. ನಾಲ್ಕು ಸಾಹಸ ದೃಶ್ಯಗಳಿವೆ. ಇದೊಂದು ಜನರಿಗೆ ಸ್ಫೂರ್ತಿ ನೀಡುವ ಚಿತ್ರವಾಗಿದ್ದು, ಚೆನ್ನೈ, ಚಿಕ್ಕಮಗಳೂರು, ಮೇಲುಕೋಟೆಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂದರು.

ವೀರೇನ್ ಕೇಶವ್ ಅವರ ತಂದೆ, ನಿರ್ಮಾಪಕ ಡಾ.ಶಿವಪ್ಪ ಮಾತನಾಡಿ, ಸಂತೋಷ್ ಅವರಿಗೆ ಮಾರ್ಗದರ್ಶಕನಾಗಿ ಅವರ ಜತೆ ಇದ್ದೇನೆ. ಸಿನಿಮಾ ಬಗ್ಗೆ ಅವರಿಗಿರುವ ಕಾಳಜಿ ದೊಡ್ಡದು ಎಂದರು.

ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ಜಾಹ್ನವಿ ಹಾಗೂ ಇತರರು ಪಾತ್ರಗಳ ಕುರಿತಂತೆ ಮಾತನಾಡಿದರು.

ಚಿತ್ರವನ್ನು ಮೇ ಅಥವಾ ಜೂನ್ ನಲ್ಲಿ ಬಿಡುಗಡೆ ಮಾಡುವ ಆಶಯವಿದೆ ಎಂಬ ವಿವರಗಳೂ ಬಂದವು.

ಅಂದ ಹಾಗೆ ಹಿರಿಯ ಛಾಯಾಗ್ರಾಹಕ ಮ್ಯಾಥ್ಯು ರಾಜನ್ ಅವರ ಕ್ರಿಯಾಶೀಲ ಕಾಯಕ ಈ ಚಿತ್ರಕ್ಕಿದೆ..

ದುಷ್ಟ ಸಂಹಾರಕ್ಕೆ ದೈವವೇ ತ್ರಿಕಾರಂ ಪ್ರೇಮಿಗಳಿಗಾಗಿ ಹಾಡು ಬಿಡುಗಡೆ..

* ಶಿವನ ಮತ್ತೊಂದು ಹೆಸರೇ ತ್ರಿಕಾರಂ *

ತ್ರಿಕಾರಂ ಚಿತ್ರದ ಹೆಸರು. ದುಷ್ಟ ಸಂಹಾರಕ್ಕೆ ದೈವದ ಬಲ ದೊರೆಯುವುದೇ ಕಥೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಆಗಿ ನೋಡುಗರಿಗೆ ಇಷ್ಟವಾಗುತ್ತದೆ..

ಹಾಗೆಂದು ಹೇಳಿಕೊಂಡಿತು ಚಿತ್ರತಂಡ..!

‘ತ್ರಿಕಾರಂ’ ಚಿತ್ರದ ಮೊದಲು ಹಾಡಿಗೆ ಬಹಳವೇ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನ ಹತ್ತಿರವಿದ್ದಾಗ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಿತು ಚಿತ್ರತಂಡ.

ಬುಧವಾರ ವಿಜಯನಗರ ಕ್ಷೇತ್ರದ ರಾಜಕೀಯ ಮುಖಂಡ ರವೀಂದ್ರ, ನಟ ಶಿವರಾಜ್.ಕೆ.ಆರ್.ಪೇಟೆ ಹಾಗೂ ನಿರ್ದೇಶಕ ಖದರ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಪಿನ್2ಪಿನ್ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿರುವ ’ಸೀದಾ ನಿಂತರೂ ಲೋಕ ಯಾಕೆ ಉಲ್ಟ ಕಾಣ್ತದೆ’ ಸಾಲಿನ ಗೀತೆ ಬಿಡುಗಡೆ ಕಂಡಿತು.
ಕೇಶು-ಚೇತನ್ ರಚನೆಗೆ, ರಾಜೇಶ್ ಕೃಷ್ಣನ್ ಧ್ವನಿ, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಇದೆ.

ಜಿ.ಗಣೇಶ್ ಮೂರ್ತಿ ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುವುದರ ಜತೆಗೆ ಖಳ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಜ್ಜಂಪುರದ ದಿಲೀಪ್ ಕುಮಾರ್.ಜೆ.ಆರ್ ನಿರ್ದೇಶನ ಮಾಡುತ್ತಿದ್ದಾರೆ.

ಮುಗ್ದ ಹಾಗೂ ರುದ್ರನಾಗಿ ಹರ್ಷವರ್ಧನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಜಂಭದಹುಡುಗಿ, ಮೃದು ಸ್ವಭಾವದ ಹುಡುಗಿ ಪಾತ್ರದಲ್ಲಿ ನಿಶ್ಚಿತಾಶೆಟ್ಟಿ ನಟಿಸಿದ್ದಾರೆ. ನಾಗೇಂದ್ರಅರಸು, ಬ.ಲ.ರಾಜವಾಡಿ, ಮಂಜುಪಾವಗಡ ಉಳಿದ ಪಾತ್ರ ವರ್ಗದಲ್ಲಿದ್ದಾರೆ.

ಹೊನ್ನಾಳಿ ಯಾಸಿನ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಚಂದ್ರುಬಂಡೆ ಸಾಹಸ, ಹೈಟ್‌ಮಂಜು-ಕಂಬಿರಾಜ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಸಂಪೂರ್ಣ ಚಿತ್ರೀಕರಣ ಹೊಸದುರ್ಗ ಸುತ್ತಮುತ್ತ ನಡೆಸಲಾಗಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಸುಖಿ ಭವ ಚಿತ್ರವಿಮರ್ಶೆ

ರೇಟಿಂಗ್ : 3/5

ನಿರ್ಮಾಣ : ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್

ನಿರ್ದೇಶನ‌ : ಎನ್.ಕೆ.ರಾಜೇಶ್ ನಾಯ್ಡು

ಪ್ರೇಮ ಸಂವೇದನೆಯ ಶಕ್ತಿ ನಿರೂಪಣೆ..

ಪ್ರೇಮ ಮಧುರಾಕ್ಷರ; ಪ್ರೇಮ ಅಜರಾಮರಾ ಎಂಬುದು ನಿಜವಾದರೂ ಕಾಲದ ನಿರಂತರತೆಯಲ್ಲಿ ಪ್ರೇಮವೆಂಬುದು ಮರೆವಿಗೆ ಆಹಾರವಾಗುವುದೇ ಹೆಚ್ಚು..

ಬಾಲ್ಯದ ಪ್ರೇಮದ ನೆನಪು ಮತ್ತು ಸವಾಲು ಒಬ್ಬ ಬಲಾಢ್ಯ ವ್ಯಕ್ತಿಯನ್ನು ರೂಪಿಸುತ್ತದೆ ಮಾತ್ರವಲ್ಲ; ಸಂಬಂಧಗಳ ನೆಲೆ ಅಲ್ಲಾಡದಂತೆ ಕಾಪಾಡುತ್ತದೆ..

ಬಾಲ್ಯದಲ್ಲಿ ಪೋಲಿ ಮತ್ತು ಒರಟನಂತ್ತಿದ್ದ ವೈಭವ್, ಮುಂದೆ ಪ್ರೇಮಿಯ ಆಶಯದಂತೆ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮಟ್ಟಕ್ಕೆ ಬೆಳೆಯುತ್ತಾನೆ. ಈ ದಾರಿಯಲ್ಲಿ ಕೌಟುಂಬಿಕ ಮಹತ್ವ ಎಲ್ಲರಿಗೂ ತಿಳಿಸುವ ಆದರ್ಶವಂತನಾಗುತ್ತಾನೆ..

ಊರ್ಮಿಳಾ ಅಲಿಯಾಸ್ ಊರ್ಮಿ ಎಂಬ ಹುಡುಗಿ ಪ್ರೀತಿ ಮದುವೆ ಎಂದೆಲ್ಲಾ ಹಿಂದೆ ಬಿದ್ದರೂ ಬಾಲ್ಯದಲ್ಲಿ ಸವಾಲು ಒಡ್ಡಿದ ತಾರಾ ಅವನ ಮನದನ್ನೇಯಾಗಿ ಕಂಗೊಳಿಸುತ್ತಾಳೆ. ಈ ಇಬ್ಬರಲ್ಲಿ ಆತನಿಗೆ ಸಿಗುವುದ್ಯಾರು ಎಂಬುದಕ್ಕೆ ಚಿತ್ರ ಮುಗಿಯುವವರೆಗೂ ಕಾಯಬೇಕು.

ಮಧ್ಯದಲ್ಲಿ ಹಾಸ್ಯಮಯ ಸನ್ನಿವೇಶಗಳಿವೆ. ಆದರೆ ಅವುಗಳನ್ನು ಸುಖಾ ಸುಮ್ಮನೆ ತುರುಕಿದಂತೆ ಕಾಣುತ್ತದೆ. ಕೆಲವೊಮ್ಮೆ ಹಾಸ್ಯ ಹೋಗಿ ಹಾಸ್ಯಾಸ್ಪದವಾಗಿದೆ.

ಇಷ್ಟರ ನಡುವೆ ಒಬ್ಬ ವ್ಯಕ್ತಿಯ ಬಾಳಿನಲ್ಲಿ ಸ್ಫೂರ್ತಿಯಾಗಬಲ್ಲ ಪ್ರೇಮವೂ ಇದೆ. ಆದರೆ ಅದರ ಸರಿಯಾದ ಪೋಷಣೆ ಮಾಡಲಾಗಿಲ್ಲ ಎಂಬುದು ಚಿತ್ರದ ನಕಾರಾತ್ಮಕ ಸಂಗತಿ.

ಸಂಬಂಧಗಳ ಬಗ್ಗೆ ಭಾವನಾತ್ಮಕ ಅಂಶಗಳಿವೆ ಎಂಬುದು ಚಿತ್ರದ ಹೆಗ್ಗಳಿಕೆ. ಈ ವಿಷಯದಲ್ಲಿ ಅಪ್ಪನ ಪಾತ್ರದಲ್ಲಿರುವ ರವಿಶಂಕರ್ ಗೌಡ ಅವರಿಗೆ ಹೆಚ್ಚಿನ ಅಂಕಗಳು ಸಲ್ಲುತ್ತವೆ.

ಮುಖ್ಯ ಪಾತ್ರದಲ್ಲಿರುವ ಮಹೇಂದ್ರ ಜೋಡಿಯಾಗಿರುವ ಸುಶ್ಮಿತ ನಾಯಕ್, ವಿಯಾನ್‌ಶಿ ಹೆಗ್ದೆ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇನ್ನುಳಿದಂತೆ ಗೌರವ್‌ಶೆಟ್ಟಿ, ಶೋಭರಾಜ್, ಶೀಲಾ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗು ಮೊದಲಾದವರ ನಟನೆ ಗಮನ ಸೆಳೆಯುತ್ತದೆ.

ನೆನಪುಗಳ ಮಾತು‌ ಮಧುರ ಚಿತ್ರವಿಮರ್ಶೆ

ರೇಟಿಂಗ್ : 2.5/5

ನಿರ್ಮಾಣ : ರೆಡ್ ಅಂಡ್ ವೈಟ್ ಸೆವೆನ್ ರಾಜ್

ನಿರ್ದೇಶನ : ಅಫ್ಜಲ್ ಸಪೋರ್ಟರ್ಸ್

ರಂಗಿನಾಟದ ಮಜಲುಗಳು

ಸಾಲ ಕೊಡುವ ಶ್ರೀಮಂತ ವ್ಯಕ್ತಿಗೆ ವಯಸ್ಸಾದರೂ ಅಪಾರ ಚಪಲ; ಈ ವ್ಯಕ್ತಿ ಸಾಲ ತೆಗೆದುಕೊಂಡು ಅಸಹಾಯಕರಾದ ಯುವಕರ ಪತ್ನಿಯ ಮೇಲೆ ಕಣ್ಣು ಹಾಕುತ್ತಾನೆ. ಈ ಶ್ರೀಮಂತನಿಗೆ ಬುದ್ಧಿ ಕಲಿಸಲು ಯುವಕ ಆಡುವ ನಾಟಕ; ಡೆಲಿವರಿ ಬಾಯ್ ಗೆ ಆದ ಅನುಭವ; ಐಟಿ ಉದ್ಯೋಗಿಯ ರೆಸಾರ್ಟ್ ಅನುಭವ ಮತ್ತು ಕಳ್ಳನೊಬ್ಬನ ಅನುಭವ ಎಲ್ಲವೂ ಸೆಕ್ಸ್ ಕೇಂದ್ರೀತ..!

ಸಮಾಜದಲ್ಲಿ ಯುವ ಜನರು ಒಂದೆಡೆ ಸೇರಿದರೆ ಅವರ ಗುಪ್ತ ಅನಿಸಿಕೆ ಸಾಹಸ ರೂಪದಲ್ಲಿ ಹೊರ ಬರುತ್ತದೆ. ಇಲ್ಲಿನ ನಾಲ್ವರೂ ‘ಆ ವಿಷಯದಲ್ಲಿ ಹೆಚ್ಚಿನ ಸಾಹಸಿಗಳು’.

ಕಷ್ಟಗಳಿಂದ ನಲುಗುವ ಅಭಿ ಎಂಬ ಹುಡುಗ ಶ್ರೀಮಂತನಿಂದ ಸಾಲ ಪಡೆದು ಅದನ್ನು ತೀರಿಸುವ ಸಲುವಾಗಿ ‘ಪೂರೈಕೆದಾರ’ ಆಗಿ ಆಡುವ ಆಟ; ವಿಮಲ್ ಎಂಬ ಡೆಲಿವರಿ ಬಾಯ್ ಗೆ ಕವಿತಾ ಎಂಬ ಯುವತಿಯಿಂರ ಒಲಿಯುವ ಅದೃಷ್ಟ ಮತ್ತು ಕಂಟಕ.

ರೋಹಿತ್ ಎಂಬ ಐಟಿ ಉದ್ಯೋಗಿ ಮತ್ತು ಸಹೋದ್ಯೋಗಿ ಪೂಜಾ ನಡುವಿನ ಸ್ನೇಹ ಮತ್ತು ಆಯುಷ್ ಮತ್ತು ಟೀನಾ ಎಂಬ ಫ್ಲರ್ಟಿಗಳ ಮಿಲನ ಮಹೋತ್ಸವದ ಆಟಗಳು. ಅಲ್ಲಿ ನಡೆಯುವ ಎಕ್ಸ್ ಚೇಂಜ್ ಆಫರ್ ನಲ್ಲಿ ರೋಹಿತ್ ಮತ್ತು ಟೀನಾ ಹಾಗೂ ಆಯುಷ್ ಮತ್ತು ಪೂಜಾ ಸುಖದ ಮತ್ತಿನಲ್ಲಿ ತೇಲಾಡುವುದು.
ಅದಕ್ಕಾಗಿ ವಿಲಾಸಿ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡಿರುವುದು..

ನಂತರ ಬಚ್ಚಿಕೊಳ್ಳುವ ಮನೋಜ್ ಎಂಬ ಕಳ್ಳನ ಕಥೆ. ಆತ ದೀಪ್ತಿ ಎಂಬಾಕೆಯನ್ನು ಸುಖಿಸುವುದು. ಬಳಿಕ ಈ ನಾಲ್ವರಿಗೂ ಕುಬೇರಪ್ಪ ಹೊಂದಿಕೊಳ್ಳುವ ಕಥೆಯಲ್ಲಿ ಜಾಳುತನದ್ದೇ ಪಾರುಪಥ್ಯ.

ಕೇವಲ ಲೈಂಗಿಕ ಸಂಪರ್ಕ ಮತ್ತು ಆಲೋಚನೆಗಳಿಂದ ಆವೃತವಾದ ಇಡೀ ಚಿತ್ರದಲ್ಲಿ ಕಲಾತ್ಮಕತೆ ಮತ್ತು ಕ್ರಿಯಾಶೀಲ ಆಶಯಗಳನ್ನೇ ಕಡೆಗಣಿಸಿರುವುದು ಎದ್ದು ಕಾಣುತ್ತದೆ.

ಸಾಮಾಜಿಕ ನೆಲೆಯಲ್ಲಿ ನಡೆಯುವ ಕೆಲವು ನೈಜ ಅಂಶಗಳಿದ್ದರೂ ನಿರೂಪಣೆಯ ಬಾಲಿಶತನದಿಂದಾಗಿ ಅದು ಗೌಣವೆನಿಸುತ್ತದೆ. ಮುಖ್ಯವಾಗಿ ಸಂಭಾಷಣೆ ಮತ್ತು ದೃಶ್ಯ ಸಂಯೋಜನೆಯಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ.

ಕಾಮ ಕೇಂದ್ರೀತ ಕಥೆಗೆ ನಿರೂಪಣೆಯ ವರಸೆಯನ್ನಾದರೂ ಶ್ರೀಮಂತಗೊಳಿಸಿ ಆನಂದಿಸುವ ಅಪೂರ್ವ ಅವಕಾಶದಿಂದ ಚಿತ್ರತಂಡ ವಂಚಿತವಾಗಿದೆ. ಅದಕ್ಕೆ ಬಜೆಟ್ ಮಿತಿ ಮತ್ತು ಏಳರ ಗಂಟಿನ ರಹಸ್ಯದ ಕಾರಣವೂ ಇರಬಹುದು..

ಕುಬೇರಪ್ಪನ ಪಾತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್ ರಾಜ್ ವಿಲನ್ ಆಗುವ ಆಸೆಯನ್ನು ಈಡೇರಿಸಿಕೊಂಡಿದ್ದಾರೆ ಎಂಬುದು ಅವರ ಆಪ್ತರಿಗೆ ಎದ್ದು ಕಾಣುವ ಅಂಶ.

ಇನ್ನುಳಿದಂತೆ ಅಫ್ಜಲ್, ವಸಿಷ್ಠ ಬಂಟನೂರು, ವಿನಯ್, ರಾಜಪ್ರಭು, ಅಂಜಲಿ, ರಣವೀರ್, ಸೌಮ್ಯ, ರೇಖಾ ಮೊದಲಾದವರು ತಮಗೆ ಸಿಕ್ಕಿದ ಅವಕಾಶಗಳಲ್ಲಿ ಮಿಂದೆದ್ದಿದ್ದಾರೆ.

ರಾಜು ಮೈಸೂರು ಛಾಯಾಗ್ರಹಣ ಹಾಗೂ ರಾಜು ಹೆಮ್ಮಿಗನೂರು ಸಂಗೀತ ಚಿತ್ರಕ್ಕೆ ಪೂರಕ.

ವಾಣಿಜ್ಯ ಮಂಡಳಿ ಚುನಾವಣೆ ಜಯಮಾಲ ಜಯಭೇರಿ..

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶನಿವಾರ (ಜನವರಿ 31) ನಡೆದ ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲ ಜಯಭೇರಿ ಬಾರಿಸಿದ್ದಾರೆ.

ಜಯಮಾಲ ಭಾರೀ ಮತಗಳನ್ನು ಪಡೆಯುವ ಮೂಲಕ ಎದುರು ಸ್ಪರ್ಧಿಸಿದ್ದ ಭಾ.ಮ.ಹರೀಶ್ ಅವರನ್ನು ಪರಾಭವಗೊಳಿಸಿದ್ದಾರೆ.

ಚುನಾವಣೆಯಲ್ಲಿ ಚಲಾವಣೆಯಾದ 813 ಮತಗಳ ಪೈಕಿ 512 ಮತಗಳ ಭಾರೀ ಬಹುಮತ ಪಡೆದು ಜಯಮಾಲ ಗೆದ್ದು ಬೀಗಿದ್ದಾರೆ.

ಮತದಾನದಲ್ಲಿ ಚಿತ್ರರಂಗದ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಡಾಲಿ ಧನಂಜಯ, ಅಶ್ವಿನಿ ಪುನೀತ್ ರಾಜ್ ಕುಮಾರ್, ಶೃತಿ, ರಕ್ಷಿತಾ ಮೊದಲಾದವರು ಪ್ರಮುಖವಾಗಿ ಚುನಾವಣಾ ಸಂದರ್ಭದಲ್ಲಿ ಕಾಣಿಸಿಕೊಂಡರು.

ಒಂದು ರೀತಿಯಲ್ಲಿ ಜಿದ್ದಾ ಜಿದ್ದು ಏರ್ಪಟ್ಟಿದ್ದ ಇಂದಿನ ಚುನಾವಣೆಯಲ್ಲಿ ದೊಡ್ಮನೆ ಪ್ರಮುಖವಾಗಿ ಜಯಮಾಲ ಅವರ ಬೆಂಬಲಕ್ಕೆ ನಿಂತಿದ್ದು ಎದ್ದು ಕಂಡಿತು.

ಕಳೆದ 2008ರಲ್ಲಿ ನಡೆದಿದ್ದ ಚುನಾವಣೆಯಲ್ಲೂ ಗೆಲವು ಸಾಧಿಸಿದ್ದ ಜಯಮಾಲ ತಮ್ಮ ಅಧಿಕಾರದ ಅವಧಿಯಲ್ಲಿ‌ ಮಹತ್ವದ ಕೆಲಸ ಮಾಡಿದ್ದರು. ಕನ್ನಡ ಚಿತ್ರರಂಗದ ‘ಅಮೃತ ಮಹೋತ್ಸವ’ ಆಚರಣೆಯ ದೊಡ್ಡ ಕಾರ್ಯಕ್ರಮವೂ ಇದರಲ್ಲಿ ಸೇರಿರುವುದು ವಿಶೇಷ..

ಇದೀಗ ಅವರು ಎರಡನೇ ಬಾರಿಗೆ ಚುನಾವಣೆ ಎದುರಿಸಿ ಗೆಲುವು ಪಡೆದು ವಾಣಿಜ್ಯ ಮಂಡಳಿಯ ಚುಕ್ಕಾಣಿ ಹಿಡಿಯುತ್ತಿದ್ದಾರೆ..

ಸಿನಿಮಾ ಉತ್ಸವದ ಮಾದಕತೆ ಲುಲು ಮಾಲ್ ಫುಲ್ ಫುಲ್..

ಅದೇ ಉತ್ಸಾಹ ಉಲ್ಲಾಸ ಸಿನಿಮಾಸಕ್ತರು ಉಲ್ಲಾಸದಿಂದ ನಡೆದಾಡುವ ಆ ಸ್ಥಳ ಅತ್ಯಾಧುನಿಕತೆಯ ಸೌಂದರ್ಯ ಲಹರಿಯಲ್ಲಿ ಮಿಂದೆದ್ದಿತು..

ಬೆಂಗಳೂರಿನ ಲುಲು ಮಾಲ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸವ ಎರಡನೇ ದಿನವಾದ ಶನಿವಾರ ತುಂಬಿ ತುಳುಕಾಡಿತು..

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಿನಿಮಾ ಪ್ರದರ್ಶನಗಳು ನಡೆಯುವಾಗಲೇ ಅದರ ಕುರಿತು ಸಂವಾದ ಮತ್ತು ಚರ್ಚಾ ಕಾರ್ಯಕ್ರಮಗಳು ಸಿನಿಮಾಸಕ್ತರಲ್ಲಿ ಉತ್ಸಾಹ ಪುಟಿದೇಳುವಂತೆ ಮಾಡಿದವು..

ಶನಿವಾರ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿದ್ದ ‘ತೀರ್ಥರೂಪು ತಂದೆಯವರಿಗೆ’ ಚಿತ್ರದ ಪ್ರದರ್ಶನವಿದ್ದ ಪರದೆ ತುಂಬಿ ತುಳುಕಾಡಿತು. ನಂತರ ಸಂವಾದದಲ್ಲಿ ಚಿತ್ರತಂಡ ಪಾಲ್ಗೊಂಡಿತು..

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಲುಲು ಮಾಲ್ ಸುತ್ತಾಡುತ್ತ ಸಿನಿಮಾಸಕ್ತರ ಆಶಯಗಳನ್ನು ಕೊಂಡಾಡಿದರು.

ವರನಟ ಡಾ.ರಾಜ್ ಕುಮಾರ್ ಅವರ ‘ಬಂಗಾರದ ಮನುಷ್ಯ’ ಟೆಂಟ್ ಸಿನಿಮಾದಲ್ಲಿ ಉದ್ಘಾಟನಾ ಚಿತ್ರವಾಗಿದ್ದು ವಿಶೇಷವಾಗಿತ್ತು. ಈ ಚಿತ್ರವು ಸಿನಿಮಾಸಕ್ತರ ಅತ್ಯಂತ ಮೆಚ್ಚಿನ ಸಿನಿಮಾವಾಗಿ ದಾಖಲಾಯಿತು.

Oplu

ಲ್ಯಾಂಡ್ ಲಾರ್ಡ್ ಚಿತ್ರವಿಮರ್ಶೆ

ರೇಟಿಂಗ್ : 4/5

ನಿರ್ಮಾಣ : ಕೆ.ವಿ.ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್.

ನಿರ್ದೇಶನ : ಜಡೇಶ್ ಕೆ.ಹಂಪಿ

ಸಮಾನತೆಗಾಗಿ ಹೋರಾಟದ ಕಿಚ್ಚು

ದಲಿತ ಸಮುದಾಯದಿಂದ ಬಂದು ಐಪಿಎಸ್ ಅಧಿಕಾರಿಯಾಗಿದ್ದ ಸುಭಾಷ್ ಭರಣಿ ಅವರು ಬಳ್ಳಾರಿ ಎಸ್ಪಿ ‌ಆಗಿದ್ದಾಗ, ದೇವದಾಸಿ ಪದ್ಧತಿ ಮತ್ತು ಹೆಣ್ಣು ಮಕ್ಕಳ ಮೇಲೆ ಬಣ್ಣದ ನೀರು ಎರಚುವ ಹೀನ ಆಚರಣೆಗಳನ್ನು ನಿಷೇಧಿಸುವಂತೆ ಮಾಡಿದ್ದೂ ಅಲ್ಲದೆ. ಅದಕ್ಕೆ ಕಾರಣರಾದವರನ್ನು ಮಟ್ಟ ಹಾಕಿದ್ದರು.

ಆಗ ಅದು ಸಾಧಾರಣ ವಿಷಯವೇ ಅಲ್ಲ; ಜಮೀನ್ದಾರಿ ಪದ್ಧತಿ ಮತ್ತು ಅದರ ದರ್ಪಗಳನ್ನು ಅಭಿವ್ಯಕ್ತಿಸುವಲ್ಲಿ ಆಂಧ್ರ ಗಡಿಯಲ್ಲಿದ್ದ ಬಳ್ಳಾರಿ ಮುಂಚೂಣಿಯಲ್ಲಿತ್ತು.

ವಿದ್ಯೆ ಕಲಿತರೆ ಸಮಾಜ-ಸಂವಿಧಾನ ಅರ್ಥೈಸಿ ಉತ್ತಮ ಬಾಳು ಬದುಕುವುದಕ್ಕೆ ಅವಕಾಶವಾಗುತ್ತದೆ ಮತ್ತು ಅಧಿಕಾರದಿಂದ ದುಂಡಾವರ್ತಿ ಮಾಡುವವರನ್ನು (ಎಂಥಾ ಪ್ರಭಾವಿ ಆದರೂ) ಮಟ್ಟ ಹಾಕಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ದೇಶದ ಎರಡು ಅತ್ಯಂತ ದೊಡ್ಡ ಮೂಲಭೂತ ಸಮಸ್ಯೆಗಳೆಂದರೆ, ಮೊದಲನೇಯದು ಅಸ್ಪೃಶ್ಯತೆಯ ಆಚರಣೆ. ಎರಡನೇಯದು ಹಕ್ಕನ್ನು ಕಸಿದುಕೊಳ್ಳುವುದು..

ಎರಡರ ಮೇಲೂ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ತಾಂತ್ರಿಕತೆ ಮತ್ತು ಮಾತುಗಾರಿಕೆಯ ವೇಗ ಎಲ್ಲಿಯೂ ಪ್ರೇಕ್ಷಕನನ್ನು ಅಲುಗಾಡಲು ಬಿಡುವುದಿಲ್ಲ ಎಂಬುದು ಹೆಚ್ಚುಗಾರಿಕೆ.

ಶ್ರೇಷ್ಠತೆಯ ವ್ಯಸನದಿಂದ ಮತ್ತು ದಬ್ಬಾಳಿಕೆ ನಡೆಸುವ ಮನೋ ವ್ಯಸನದ ಅಸ್ವಸ್ಥ ಮನಸ್ಥಿತಿಯಿಂದ ದುರ್ಬಲರ ಮೇಲೆ ಅಟ್ಟಹಾಸ ಮಾಡುತ್ತಾ ಮೆರೆಯುವ ಖಳರನ್ನು ಧ್ವಂಸ ಮಾಡುವ ವ್ಯಕ್ತಿ ಇಲ್ಲಿ ಇತಿಹಾಸವನ್ನು ಮೆರೆಸುವವನಂತೆ ಕಾಣುತ್ತಾನೆ.

ಹಾಗಾಗಿ ಕೊಡ್ಲಿ ರಾಚಯ್ಯ ಎಂಬುದು ಕೇವಲ ವ್ಯಕ್ತಿಯಲ್ಲ; ಆತ ದಮನಿತ ಸಮಾಜದ ಪ್ರಜ್ವಲ ಪ್ರತಿನಿಧಿ. ರಾಚಯ್ಯನ ಮಗಳು ರಥ ಮುಟ್ಟಿದಳು ಎಂಬ ಕಾರಣಕ್ಕೆ ರಥವನ್ನೇ ಸುಟ್ಟು ಹಾಕುವ ಹೀನ ಮನಸ್ಥಿತಿಗಳು ಬಹಳ ಕಾಲದ ನಂತರವಾದರೂ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗುವುದು ದಮನಿತ ಸಮಾಜದ ವಿಜಯೋತ್ಸವದಂತೆ ಕಾಣುತ್ತದೆ.

ಎರಡು ಎಕರೆ ಭೂಮಿಗಾಗಿ ಹೋರಾಟ ನಡೆಸುವ ರಾಚಯ್ಯ, ಮಗಳ ವಿದ್ಯಾಭ್ಯಾಸಕ್ಕೂ ತುಡಿಯುವುದು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡ ನಿಲುವು. ಆದರೂ ಆತ ಕೊಡಲಿಯಂತಹ ಶಸ್ತ್ರ ಹಿಡಿಯ ಬೇಕಾಗಿ ಬರುವುದು ಸಾಮಾಜಿಕ ನೆಲೆಯಲ್ಲಿನ ದೌರ್ಜನ್ಯ ಮತ್ತು ಅಸಮಾನತೆಯ ಶಾಪದಿಂದಲೇ..

ಅವ್ವನ ಕೈ ತುತ್ತು ಆತನ ಸಾಮರ್ಥ್ಯ. ಆದರೆ ಅವ್ವನನ್ನೇ ಮುಗಿಸುವ ಖಳರ ಅಟ್ಟಹಾಸ ಆತನನ್ನು ಶಾಂತಿಯ ಹೊಸ್ತಿಲನ್ನು ದಾಟುವಂತೆ ಮಾಡುವುದು ವಿಪರ್ಯಾಸ. ತನ್ನವರೇ ದ್ರೋಹ ಬಗೆಯುವ (ನೀರಿಗೆ ಪಾಚಿ ವೈರಿ) ಕ್ರೌರ್ಯದ ನಡುವೆಯೂ ಆತ ಬದುಕುಳಿಯುವುದು ಅಪ್ರತಿಮ ಎದೆಗಾರಿಕೆ ಮತ್ತು ಸಂಯಮದಿಂದ.

ಒಬ್ಬ ಸ್ಟಾರ್ ನಟನಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವ ಮಟ್ಟಕ್ಕೆ ಪಾತ್ರದಲ್ಲಿ ತಲ್ಲೀನತೆ ಪಡೆದಿರುವ ವಿಜಯಕುಮಾರ್ ನಿಜವಾಗಿ ದಮನಿತ ಸಮುದಾಯದ ಪ್ರತಿನಿಧಿಯಾಗೇ ಕಾಣುತ್ತಾರೆ.

‘ಸಾಹಸ’ದ ಮೂಲಕವೇ ಚಿತ್ರರಂಗಕ್ಕೆ ಬಂದ ವಿಜಯಕುಮಾರ್ ಆಕ್ರೋಶಭರಿತನಾಗಿ ಅಷ್ಟು ಜನರನ್ನು ಹೊಡೆದು ಹಾಕುವಾಗ ನೈಜತೆ ಕಾಣುವುದೇ ಈ ಚಿತ್ರದ ಹೈಲೈಟ್. ಮುಖ ಮತ್ತು ಕಣ್ಣಿನ ಕಿಚ್ಚು ಹೊಡೆದಾಟದಲ್ಲೂ ಅಭಿವ್ಯಕ್ತಿ ಪಡೆದಿರುವುದರಿಂದ ಅದು ಸಾಧ್ಯ..

ಅದೂ ಅಲ್ಲದೆ ವಿಜಯ್ ಕೋಟು ಧರಿಸುವಾಗ ಸಂವಿಧಾನ ಮತ್ತು ಬಾಬಾ ಸಾಹೇಬರನ್ನು ಮೈಮೇಲೆ ಹೊದ್ದಂತೆ ಕಾಣುತ್ತಾರೆ.

ನಿರ್ದೇಶಕ ಜಡೇಶ್ ಕೆ.ಹಂಪಿ ಸಿಕ್ಕ ಅವಕಾಶವನ್ನು ಎಲ್ಲಿಯೂ ಸಡಿಲಗೊಳಿಸಿಲ್ಲ; ಸಾಮಾಜಿಕ ಸಮಸ್ಯೆಯನ್ನು ಕಮರ್ಷಿಯಲ್ ಗುಣಕ್ಕೆ ಒಗ್ಗಿಸುವ ಅಪರಿಮಿತ ಶಕ್ತಿ ಅವರಲ್ಲಿದೆ. ಹಾಗಾಗಿ ಯಾವ ಪಾತ್ರ ಮತ್ತು ಸನ್ನಿವೇಶ ಕೂಡ ಬೋರ್ ಎನಿಸುವುದಿಲ್ಲ.

ಅದಕ್ಕೆ ಮತ್ತೊಂದು ಕಾರಣ ಚಿತ್ರದ ಬೆಂಕಿಯಂತಹ ಸಂಭಾಷಣೆ. ಮಾಸ್ತಿ ಮತ್ತು ಇತರರು ಶಕ್ತಿಯ ಅರಿವು ಮಾಡಿಕೊಟ್ಟಿದ್ದಾರೆ.

ಸಾಕವ್ವ ಉಮಾಶ್ರೀ ಪಾತ್ರವನ್ನು ನುಂಗಿ ಹಾಕಿದ್ದಾರೆ. ಅಚ್ಚರಿ ಎಂಬಂತೆ ರಚಿತಾ ರಾಮ್ ತಾನೊಬ್ಬ ಅಪ್ರತಿಮ ಕಲಾವಿದೆ ಎಂಬುದನ್ನು ನಿಂಗವ್ವನ ಪಾತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ಹಾಗೆಯೇ ವಿಜಯಕುಮಾರ್ ಪುತ್ರಿ ರಿತನ್ಯ, ಭಾಗ್ಯ ಪಾತ್ರದಲ್ಲಿ ಸಹನೆಯ ಪೊಲೀಸ್ ಆಗಿ ಮಿಂಚಿದ್ದಾರೆ.

ಸಂಯಮದ ಖಳನ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಅವರದು ಅದ್ಭುತ ಅಭಿನಯ ಎಂದು ಹೇಳಲೇ ಬೇಕಿಲ್ಲ. ರಾಕೇಶ್ ಅಡಿಗ ಖಳ ನಟನಾಗಿಯೂ ಮಿಂಚಬಲ್ಲೆ ಎಂದು ತೋರಿದ್ದಾರೆ.

ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಮಿತ್ರ, ಸಂಪತ್ ಕುಮಾರ್ ಮೈತ್ರಿ, ಸನತ್ ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಲ್ಲೇ ಜೀವಿಸಿರುವುದು ವಿಶೇಷ..

ಸ್ವಾಮಿ ಜೆ.ಗೌಡ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದರೆ, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರ ಮುಗಿದ ನಂತರವೂ ಅದೇ ಚಮತ್ಕಾರಿಕ ತನ್ಮಯತೆ ನೀಡುವಂತೆ ಅಬ್ಬರಿಸುತ್ತದೆ.

ಕಪಾಲಿ ಉಳಿಸಲು ತೆಲುಗು ಮಹೇಶ್ ಬಾಬು ಪರಿಶ್ರಮ

* ಕಪಾಲಿ ಚಿತ್ರಮಂದಿರ ಜಾಗದಲ್ಲಿ ಹೊಸ ಮಾಲ್ *

* ಕಪಾಲಿ ಮಾಲ್ ನಲ್ಲಿ ಅತ್ಯಾಕರ್ಷಕ ಹಾಗೂ ಸುಸಜ್ಜಿತ ಸಿನಿಮಾ ಮಲ್ಟಿಪ್ಲೆಕ್ಸ್ ಎಎಂಬಿ ಸಿನಿಮಾಸ್ *

ಎರಡು ಸಂದರ್ಭದಲ್ಲಿ ಕನ್ನಡಿಗರಿಗೆ ಕಪಾಲಿ ಚಿತ್ರಮಂದಿರದ ನೆನಪು ಅಚ್ಚ ಹಸಿರು. ಒಂದು ಗಂಗಾರಾಮ್ ಕಟ್ಟಡ ಕುಸಿತ ಮತ್ತು ‘ಭಕ್ತ ಪ್ರಹ್ಲಾದ’ ಚಿತ್ರ. ಇನ್ನೊಂದು ಹಡಗಿನ ಆಕಾರದ ಅದರ ವಿಸ್ತಾರ ನಿಲುವು..

ಕಪಾಲಿ ಚಿತ್ರಮಂದಿರ ಇನ್ನೇನು ಬರೀ ನೆನಪಾಗಿ ಉಳಿಯುತ್ತದೆ ಎಂಬಷ್ಟರಲ್ಲಿ ಅದರ ಮತ್ತೊಂದು ಅಸ್ತಿತ್ವ ಆಧುನಿಕ ರೂಪದಲ್ಲಿ ತಲೆ ಎತ್ತಿ ನಿಂತಿದೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ಪ್ರದೇಶದಲ್ಲಿ (ಗಾಂಧಿನಗರ) ಜನಪ್ರಿಯತೆ ಪಡೆದು ಕಲಾರಸಿಕರಿಗೆ ರಸದೌತಣ ನೀಡುತ್ತಿದ್ದ ಚಿತ್ರಮಂದಿರಗಳು ಅಸ್ತಿತ್ವ ಕಳೆದುಕೊಂಡು ಕೇವಲ ನೆನಪಾಗಿ ಉಳಿದವು.

ಆದರೆ ಲಿಡೋ, ಪ್ರಮೋದ್ ಚಿತ್ರಮಂದಿರಗಳ ಮಾದರಿಯಲ್ಲಿ ಮಾಲ್ ರೂಪ ಪಡೆದಿರುವ ‘ಕಪಾಲಿ’ ಈಗ ಆಧುನಿಕ ಸಂವೇದನೆಯ ದನಿಯಾಗಿರುವುದು ವಿಶೇಷ.

ಅದರಲ್ಲಿಯೂ ಡಾಲ್ಬಿ ಶಬ್ಧ ಸಂಚಲನದ ಹೊಸ ರೂಪ ಆವರಿಸಿಕೊಂಡಿರುವ ಭಾರತದ ಎರಡನೇ ಚಿತ್ರಮಂದಿರವಾಗಿ ಕಪಾಲಿ ಮಲ್ಟಿಪ್ಲೆಕ್ಸ್ ಕಂಗೊಳಿಸುತ್ತಿದೆ.

ಎಎಂಬಿ ಸಿನಿಮಾಸ್ ನ ಎಂ.ಡಿ ಭರತ್ ನಾರಂಗ್, ಡಾಲ್ಬಿ ಲ್ಯಾಬೋರೇಟರಿಸ್ ನ ಸಮೀರ್ ಸೇಠ್ ಹಾಗೂ ಆರ್ಕಿಟೆಕ್ಚರ್ ಈರಣ್ಣ ಯೆಕೆಬೋಟೆ ಹಾಗೂ ಇತರರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು.

ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅವರ ಒಡೆತನದ ‘ಎಎಂಬಿ ಸಿನಿಮಾಸ್’ ಇರುವ ಜಾಗದಲ್ಲಿ ಬೃಹತ್ ಮಲ್ಟಿಫ್ಲೆಕ್ಸ್‌ ನಿರ್ಮಾಣವಾಗಿದೆ. ‘ಎಎಂಬಿ ಸಿನಿಮಾಸ್ ಕಪಾಲಿ’ ಎಂಬ ಹೆಸರಿನಲ್ಲಿ ಈ ಮಲ್ಟಿಪ್ಲೆಕ್ಸ್ ಕಾರ್ಯ ಆರಂಭಿಸಿದೆ. ಇದು ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ಅಲ್ಟ್ರಾಸೌಂಡ್ ವ್ಯವಸ್ಥೆ ಇರುವ ಚಿತ್ರಮಂದಿರವಾಗಿದ್ದು, 9 ಸ್ಕ್ರೀನ್‌ಗಳು ಇದರಲ್ಲಿ ಇರಲಿದೆ.

ಸಿನಿಮಾ ಪರದೆಗಳು ಅತ್ಯುತ್ತಮ ವಿಡಿಯೋ ಗುಣಮಟ್ಟ ಹೊಂದಿದ್ದು, ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರ ವೀಕ್ಷಣೆ ಅನುಭವ ನಿಡುತ್ತವೆ. ವಿಶೇಷವಾಗಿ ಎಲ್ಲಾ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಎಎಂಬಿ ಸಿನಿಮಾಸ್‌ ಒಳಗೊಂಡಿದೆ ಎಂಬ ವಿವರಗಳು ಬಂದವು.

ಇದರಲ್ಲಿ ಸ್ಕ್ರೀನ್ 6 ಎಲ್ಲದಕ್ಕಿಂತ ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಪ್ರೇಕ್ಷಕರು ತಲ್ಲೀನತೆ ಹೊಂದುವ ಶಬ್ಧ ಮಾಧುರ್ಯದ ವ್ಯವಸ್ಥೆಯನ್ನು ಹೊಂದಿದೆ.

ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು ‘ಎಂ-ಲೌಂಜ್’ ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಆಹಾರ ಮತ್ತು ಪಾನೀಯ ಚಲನಚಿತ್ರ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ.

ಇಲ್ಲಿನ ಟಿಕೆಟ್ ದರದ ಕುರಿತು ನೋಡುವುದಾದರೆ ಅಷ್ಟೇನು ದುಬಾರಿ ಅಲ್ಲದೆ ಎಲ್ಲರಿಗೂ ಅನುಕೂಲವಾಗುವ ದರದಲ್ಲಿರುತ್ತದೆ. ಸರ್ಕಾರದ ನಿಯಮಾವಳಿಯಂತೆ ಬೆಳಿಗ್ಗೆ ಆರು ಗಂಟೆಯಿಂದ ಪ್ರಥಮ ಪ್ರದರ್ಶನ ಪ್ರಾರಂಭವಾಗುತ್ತದೆ ಮತ್ತು ಕಡೆಯ ಪ್ರದರ್ಶನ ರಾತ್ರಿ 10.30ಕ್ಕೆ ಇರುತ್ತದೆ.

ಇದರ ನಡುವೆ ಐದು, ಆರು ಪ್ರದರ್ಶನಗಳನ್ನು ನೀಡಲು ಯೋಜಿಸಲಾಗುತ್ತದೆ.
ಇಲ್ಲಿ ಲೈವ್ ಕಿಚನ್ ತೆರೆಯಲಾಗಿದ್ದು, ಪ್ರೇಕ್ಷಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ಪೂರೈಸುವ ಉದ್ದೇಶವಿದೆ ಎಂಬ ವಿವರಗಳು ಬಂದವು.

ಎರಡು ಹೊಸ ಧಾರಾವಾಹಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರ

* ಜನವರಿ 27ರಿಂದ ಎರಡು ಹೊಸ ಧಾರಾವಾಹಿಗಳ ಪ್ರಸಾರ ಆರಂಭ *

* ಗೌರಿ ಕಲ್ಯಾಣ ಹಾಗೂ ಪವಿತ್ರ ಬಂಧನ ಎಂಬ ಧಾರಾವಾಹಿಗಳು *

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಜನವರಿ 27 ರಿಂದ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿವೆ.

‘ಗೌರಿ ಕಲ್ಯಾಣ’ ಹಾಗೂ ‘ಪವಿತ್ರ ಬಂಧನ’ ಎಂಬ ಧಾರಾವಾಹಿಗಳು ಹೊಸ ಕಥೆಗಳ ಜೊತೆಗೆ ಬರುತ್ತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎರಡೂ ಧಾರಾವಾಹಿಗಳ ತಂಡ ವಿವರ ನೀಡಿತು.

ಮಧ್ಯಮ ವರ್ಗದ ಸರಳತೆ ಮತ್ತು ಶ್ರೀಮಂತ ಸಮಾಜದ ನಿರೀಕ್ಷೆಗಳ ನಡುವೆ ನಡೆಯುವ ಭಾವನಾತ್ಮಕ ಹೋರಾಟ ಗೌರಿ ಕಲ್ಯಾಣವಾಗಿದೆ.
ಶಿಲ್ಪಾ ಕಾಮತ್‌, ಶರತ್‌ ಕುಮಾರ್‌, ದೀಪಿಕಾ ಶರಣ್‌ ಶೆಟ್ಟಿ, ಅಶೋಕ್‌ ಜಂಬೆ, ಸಹನಾ, ನಿಹಾರಿಕಾ ಶೆಟ್ಟಿ, ಗುರುದತ್‌, ಶೀಲಾ, ಜ್ಯೋತಿ ಇದರಲ್ಲಿ ನಟಿಸುತ್ತಿದ್ದಾರೆ.

ರಾಮ್‌ಜಿ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು, ಭರತ್‌ ಕುಮಾರ್‌ ಎನ್‌ ಮೈಸೂರು ಇದರ ನಿರ್ದೇಶಕ ಎಂಬ ವಿವರಗಳು ಬಂದವು.

ದ್ವೇಷಿಸುವ ವ್ಯಕ್ತಿಯ ಜೊತೆಯೇ ಬದುಕಬೇಕಾದ ಅನಿವಾರ್ಯತೆ ಬಂದಾಗ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ವಿಧಿ ಹೇಗೆ ಮನುಷ್ಯನ ಜೀವನವನ್ನು ಬದಲಿಸುತ್ತದೆ ಎಂಬುದು ‘ಪವಿತ್ರ ಬಂಧನ’ ಧಾರಾವಾಹಿ ಕಥೆಯ ಸಾರ.

ಉತ್ತಮ್ ಮಧು ನಿರ್ದೇಶನದ ಈ ಧಾರಾವಾಹಿಯನ್ನು ಮಹೇಶ್ ಜೊತೆಗೆ ಉತ್ತಮ್ ಮಧು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಅಮೂಲ್ಯ ಭಾರದ್ವಾಜ್, ಸೂರಜ್, ಯಶಸ್ ಸೇರಿದಂತೆ ಅನುಷಾ ರಾವ್, ರುಹಾನಿ ಶೆಟ್ಟಿ, ಹಿರಿಯ ನಟ ವಿಜಯ್ ಕಾಶಿ ಹಾಗೂ ಅಂಬರೀಶ್ ಸಾರಂಗಿ ಮೊದಲಾದ ಕಲಾವಿದರ ಬಳಗವಿದೆ.

ಈ ಬಾರಿ ಲುಲು ಮಾಲ್ ನಲ್ಲಿ ಬೆಂಗಳೂರು ಸಿನಿಮೋತ್ಸವ..

* ಜನವರಿ 29 ಮುಖ್ಯಮಂತ್ರಿಗಳಿಂದ ಉದ್ಘಾಟನೆ *

* ಜನವರಿ 30 ರಿಂದ ಫೆಬ್ರವರಿ 6ರವರೆಗೆ ಚಿತ್ರರಸಿಕರಿಗೆ ರಸದೌತಣ *

* ರಾಜಾಜಿನಗರದ ಲುಲು ಮಾಲ್ ನ 11 ಪರದೆಗಳಲ್ಲಿ ಪ್ರದರ್ಶನ *

ಚಿತ್ರರಸಿಕರಿಗೆ ರಸದೌತಣ ಬಡಿಸುವ ’17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗ (ಪೂರ್ವದ್ವಾರ ಮೆಟ್ಟಿಲು) ಚಾಲನೆ ದೊರೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ದೇಶ – ವಿದೇಶದ ಅತಿಥಿಗಳು ಸಹ ಜೊತೆಗಿರಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕಲಾತ್ಮಕ ನಿರ್ದೇಶಕ ಪಿ.ಬಿ.ಮುರಳಿ ಈ ಕುರಿತ ವಿವರಗಳನ್ನು ನೀಡಿದರು.

ಬೆಂಗಳೂರಿನ ರಾಜಾಜಿನಗರದ ಲುಲುಮಾಲ್‌ನಲ್ಲಿರುವ, ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ.

ಲುಲುಮಾಲ್‌ ಜೊತೆಗೆ, ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಹ ಚಲನಚಿತ್ರ ಪ್ರದರ್ಶನಗಳು ನಡೆಯಲಿದ್ದು, ಇದರಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಭಾಗವಹಿಸಿರುವುದು ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ವೈಶಿಷ್ಟ್ಯ ವಾಗಿದೆ.

ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌, ಕೊರಿಯಾ, ಆಷ್ಟ್ರಿಯಾ, ಬೆಲ್ಜಿಯಂ, ನೆದರ್ಲೆಂಡ್‌, ಫಿನ್‌ಲೆಂಡ್‌, ಇರಾನ್‌, ಅರ್ಜೆಂಟೈನಾ, ಕೆನಡಾ, ಡೆನ್‌ಮಾರ್ಕ್‌, ಗ್ರೀಸ್‌, ರಷ್ಯಾ, ಫಿಲಿಫೈನ್ಸ್‌, ಪೋಲೆಂಡ್‌, ರೊಮಾನಿಯಾ, ಜಪಾನ್‌, ಸ್ಪೇನ್‌, ಇಂಡೋನೇಷಿಯಾ, ಇಟಲಿ, ಆಸ್ಟ್ರೇಲಿಯಾ, ಚೀನಾ, ಕಿರ್ಗಿಸ್ತಾನ್ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಸಮಕಾಲೀನ ವಿಶ್ವಸಿನಿಮಾ ವಿಭಾಗದ ಮೂಲಕ ‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಳ್ಳಲಿವೆ.

‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ನ ಜೊತೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುವುದು ವಾರ್ತಾ ಇಲಾಖೆ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ.

ಮುಖ್ಯಮಂತ್ರಿಗಳ ಆಶಯದಂತೆಯೇ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಧ್ಯೇಯ ವಾಕ್ಯದೊಂದಿಗೆ ಈ ಚಿತ್ರೋತ್ಸವ ಆಚರಿಸಲಾಗುತ್ತಿದೆ.

ಚಲನ ಚಿತ್ರೋತ್ಸವ ನಡೆಯುವ ಪ್ರತಿ ದಿನವೂ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ವಿಚಾರ ಸಂಕಿರಣಗಳು ನಡೆಯಲಿವೆ.