ಇದು ಒಂದು ರೀತಿಯಲ್ಲಿ ಎಲ್ಲರಿಗೂ ಸಂಕಷ್ಟ ತಂದು ಒಡ್ಡಿರುವ ಕಾಲ. ಕೊವಿಡ್ ಪರಿಣಾಮ ಇಡೀ ವಿಶ್ವದ ಮನರಂಜನಾ ಕ್ಷೇತ್ರ ನಷ್ಟದಲ್ಲಿದೆ. ಆದರೆ ಕನ್ನಡ ನಾಡಿನಲ್ಲಿ ಎಲ್ಲಾ ಬಗೆಯ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ.
ಅದರಲ್ಲಿಯೂ ಅಲ್ಲಲ್ಲಿ ವಾದ್ಯಗೋಷ್ಠಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹೆಚ್ಚು ಕಡಿಮೆ ಬೀದಿ ಪಾಲಾಗಿದ್ದಾರೆ. ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಲ್ಲ. ಯಾವುದೇ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿಲ್ಲ.. ಕೊನೆಗೆ ಗಣೇಶ ಉತ್ಸವ ಕೂಡ ಅದ್ದೂರಿಯಾಗಿ ನಡೆಸದಂತೆ ಸರ್ಕಾರದ ಆದೇಶವಾಗಿದೆ.
ಇದೆಲ್ಲವೂ ಪರಿಸ್ಥಿತಿಗೆ ಅನುಗುಣವಾಗಿ ಸರಿ ಇರಬಹುದು. ಆದರೆ ಹೊಟ್ಟೆಪಾಡಿಗಾಗಿ ವಾದ್ಯಗೋಷ್ಠಿ ನಂಬಿಕೊಂಡವರ ಗತಿ ಏನಾಗಿದೆ ಮತ್ತು ಏನಾಗಬಹುದು. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಮಾಧ್ಯಮಗಳ ಮುಂದೆ ಬಂದು ಅಳಲನ್ನು ತೋಡಿಕೊಂಡಿತು. ವಾದ್ಯಗೋಷ್ಠಿ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ವಿವರಿಸಿದರು ಸಂಘದ ಅಧ್ಯಕ್ಷ ಶಂಕರ್.
ಇದೇ ವೇಳೆ ಉಪಸ್ಥಿತರಿದ್ದ ಮದನ್ ಮಲ್ಲು ವಾದ್ಯಗೋಷ್ಠಿ ಮುಖ್ಯಸ್ಥರು ಹಾಗೂ ನಾಯಕ ನಟ ಮತ್ತು ನಿರ್ದೇಶಕ ಮದನ್ ಪಟೇಲ್, ಗಣೇಶ ಉತ್ಸವ ಮತ್ತು ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಅವಕಾಶ ನೀಡದಿದ್ದ ಪಕ್ಷದಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಸೌಂಡ್ ಆಫ್ ಮ್ಯೂಜಿಕ್ ನ ಗುರುರಾಜ್ ಅವರು ನಮ್ಮ ಜೀವಮಾನದಲ್ಲೇ ಇಂತಹ ಕಷ್ಟ ಅನುಭವಿಸಿರಲಿಲ್ಲ.. ಸರ್ಕಾರ ಸ್ಪಂದಿಸಬೇಕು.. ವಾರ್ತಾ ಇಲಾಖೆ ಸಂಸ್ಕೃತಿ ಇಲಾಖೆ ಯಾವುದು ಸ್ಪಂದಿಸಿಲ್ಲ. ಗಣೇಶ್ ಉತ್ಸವ ಮಾಡಬಾರದೆಂದರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 12 ಸಾವಿರ ವಾದ್ಯಗೋಷ್ಠಿ ಮತ್ತು ಜನಪದ ಕಲಾವಿದರಿದ್ದಾರೆ. ಅವರ ಬದುಕು ಸರಿಪಡಿಸುವ ಜವಾಬ್ದಾರಿ ಸರ್ಕಾರ ಮಾಡಲಿ ಎಂದರು.