ಯಾವಾಗಲೂ ಅಷ್ಟೇ ಮಾಡುವ ಸಹವಾಸ ಒಳ್ಳೆಯದಿದ್ದರೆ ಕಾಪಾಡುತ್ತದೆ.. ಅಕಸ್ಮಾತ್ ಕೆಟ್ಟ ಸಹವಾಸ ಮಾಡಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ..
ಅದೇ ರೀತಿ ಕೆಟ್ಟವರ ಆಶ್ರಯದಲ್ಲಿದ್ದರೂ ಅದರ ಫಲ ಅನುಭವುಸಲೇ ಬೇಕಾಗುತ್ತದೆ.. ಇಲ್ಲಿ ಸಂಬಂಧ, ಸ್ನೇಹ, ಪ್ರೀತಿ ವಾತ್ಸಲ್ಯ ಜೊತೆಗೆ ಕ್ರೌರ್ಯವೂ ದಿಕ್ಕುಗಳಾಗಿ ವಿಂಗಡಿಸಲ್ಪಟ್ಟ ಕಥೆ. ಕ್ಷಣ ಕ್ಷಣವೂ ಕಾಡುವ ಕೌತುಕವಾಗಿ ವ್ಯಕ್ತವಾಗಿದೆ..
ಅದೇ ‘ಒಂಬತ್ತನೇ ದಿಕ್ಕು’. ಶಿವಮೊಗ್ಗ ದ ಪುರಾತನ ದೇವಾಲಯದಲ್ಲಿ ಆಗುವ ವಿಗ್ರಹ ಕಳವಿನ ಸುತ್ತಲೂ ಕಥೆ ಆವರಿಸಿಕೊಳ್ಳುತ್ತದೆ. ಕೋಟಿ ಕೋಟಿ ಬೆಲೆ ಬಾಳುವ ವಿಗ್ರಹ ಕಳವಿನ ಸ್ಟೋರಿಯಲ್ಲಿ ಸಂಬಂಧ, ಬದುಕು, ಮದುವೆ, ದ್ವೇಷ ಅಸೂಯೆ ಯ ನಡುವೆ ಆಧುನಿಕತೆಯೂ ಎದ್ದು ಕಾಣುತ್ತದೆ.
ಕ್ರೌರ್ಯ ಮೆರೆಸುವ ವ್ಯಕ್ತಿ ತನ್ನ ವ್ಯಾಪಾರಕ್ಕೆ ಅಮಾಯಕ ಗೆಳೆಯನನ್ನು ಬಳಸಿಕೊಳ್ಳುತ್ತಾನೆ. ಆ ಗೆಳೆಯನ ಮಗ ಅಪ್ಪನನ್ನು ಹುಡುಕುವಾಗ ಪ್ರೀತಿಯೂ ಜೊತೆಗೆ ಬರುತ್ತದೆ. ಜೊತೆಗೆ ಅರಿವಿಲ್ಲದೆ ಅಪ್ಪನಿಗೆ ಸಂಬಂಧಿಸಿದ ಬ್ಯಾಗ್ ಕೂಡ ಬರುತ್ತದೆ.
ಹಣ ಗಳಿಕೆ ಮಾಡಲು ಏನು ಬೇಕಾದರೂ ಮಾಡಬಲ್ಲ ಕ್ರೂರ ವ್ಯಕ್ತಿತ್ವದ ವ್ಯಕ್ತಿ ಕಥೆಯಲ್ಲಿ ಡಾನ್ ಮತ್ತವನ ಸಹಾಯಕ ಎಲ್ಲರನ್ನು ಮುಗಿಸಿ ಇನ್ನು ತಾನು ಹಣದೊಡೆಯ ಎಂದುಕೊಳ್ಳುವಾಗ ಒಳ್ಳೆಯ ವ್ಯಕ್ತಿಯ ಮಗನ ರೂಪದ ವಿಧಿ ಅವನನ್ನು ಅಟ್ಟಾಡಿಸುತ್ತದೆ.
ವ್ಯಾಘ್ರ ಮುಖದ ಬಾಸ್ ಆಗಿ ಸಾಯಿಕುಮಾರ್ ಕಾಣಿಸಿಕೊಂಡಿದ್ದರೆ; ಪುಣ್ಯ ಕೋಟಿ ರೂಪದ ಸ್ನೇಹಿತನಾಗಿ ಅಶೋಕ್ ಕಾಣಿಸಿಕೊಂಡಿದ್ದಾರೆ. ಅಶೋಕ್ ಅವರ ಪುತ್ರನಾಗಿ ಯೋಗಿ
ಚಿತ್ರವನ್ನು ಆವರಿಸಿಕೊಂಡಿದ್ದಾರೆ.
ಹೆಸರಾಂತ ನಿರ್ದೇಶಕ ದಯಾಳ್ ಪದ್ಮನಾಬ್ ಚಿತ್ರವನ್ನು ಎರವಲು ಪಡೆದಿದ್ದರೂ ನಿರೂಪಣೆಯಲ್ಲಿ ಹೊಸ ತಂತ್ರಗಳನ್ನು ಅಳವಡಿಸಿ ಪ್ರೇಕ್ಷಕ ಕುತೂಹಲದಿಂದ ಉಸಿರು ಬಿಗಿ ಹಿಡಿದು ಸೀಟಿನ ತುದಿಗೆ ಕೂರುವಂತೆ ಮಾಡಿದ್ದಾರೆ.
ಮುಖ್ಯ ಪಾತ್ರದಲ್ಲಿ ಲೂಸ್ ಮಾದ ಯೋಗಿ ತಮಗೆ ದೊರೆತ ಅವಕಾಶದಲ್ಲಿ ಮಿಂಚಿದ್ದಾರೆ. ಅದಿತಿ ಪ್ರಭುದೇವ ಮುಗ್ಧ ಹುಡುಗಿಯಾಗಿ ಮನ ಗೆಲ್ಲುತ್ತಾರೆ. ಖಳನಾಗಿ ಸಂಪತ್ ಮೈತ್ರೇಯ ಅವರದು ಅದ್ಭುತ ನಟನೆ. ಪ್ರಶಾಂತ್ ಸಿದ್ದಿ, ರಮೇಶ್ ಭಟ್ ಹಾಗೂ ಇತರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.
ರಮೇಶ್ ಕ್ಯಾಮೆರಾ ಕೈಚಳಕಕ್ಕೆ ತಕ್ಕಂತೆ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತವಿದೆ. ಆರಂಭದಲ್ಲಿ ಮತ್ತು ಕೊನೆಯಲ್ಲಿ ಅನಿಮೇಷನ್ ಅವತರಣಿಕೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿರುವುದು ಬಹಳವೇ ವಿಶೇಷವಾಗಿದೆ..
-ಸ್ನೇಹಪ್ರಿಯ ನಾಗರಾಜ್