ಚಿತ್ರದ ಹೆಸರೇ ಬಯಲು ಸೀಮೆ.. ಗಂಡು ಭಾಷೆಯ ಸೊಗಡುತನ ಎದ್ದು ಕಾಣುತ್ತದೆ..
ಅಂದ ಹಾಗೆ ಈಚೆಗೆ ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆಯ ಸಮಾರಂಭದಲ್ಲಿಯೂ ಜವಾರಿ ಭಾಷೆಯ ಝಲಕ್ ಕಂಡು ಬಂದಿತು.. ಚಿತ್ರದಲ್ಲಿ ಅದೇ ಸೊಗಡು ಕಾಣುವುದರಿಂದ ನೋಡಲು ಮಜಾ ಎಂದರು ಗಣ್ಯರು.
ಈಗಾಗಲೇ ಉತ್ತರ ಕರ್ನಾಟಕ ಭಾಗದ ಸೊಗಡಿನ ಸವಿಯನ್ನು ಹಲವಾರು ಚಿತ್ರಗಳಲ್ಲಿ ಉಣಬಡಿಸಿರುವ ನಟ ರವಿಶಂಕರ್ ಈ ಚಿತ್ರದಲ್ಲಿಯೂ ಅದನ್ನು ಅನುಭವಿಸಿದ ಘಟನೆಗಳನ್ನು ಮೆಲುಕು ಹಾಕಿದರು. ಜೊತೆಗೆ ಹಿರಿಯ ನಿರ್ದೇಶಕರಾಗಿರುವ ನಾಗಾಭರಣರ ಜೊತೆ ನಟಿಸಿದ ಖುಷಿಯನ್ನೂ ಹಂಚಿಕೊಂಡರು.
ನಿರ್ದೇಶಕರು ಎಂತಹ ಪರಿಕಲ್ಪನೆಯಲ್ಲಿ ಚಿತ್ರ ಮಾಡಿದರೂ ಅದಕ್ಕೆ ನಿರ್ಮಾಪಕರ ಬಂಡವಾಳ ಬೇಕೇ ಬೇಕು. ಹಾಗಾಗಿ ಅವರೇ ಇಲ್ಲಿ ಮುಖ್ಯವಾಗುತ್ತಾರೆ ಎಂದರು ರವಿಶಂಕರ್.
ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರವನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಬತ್ತರ ದಶಕ ಮತ್ತು ಈವಾಗಿನ ಕಾಲಮಾನದೊಂದಿಗೆ ಬೆಸೆಯ್ಪಟ್ಟಿರುವ ಕಥೆ ರೋಚಕ ಅನುಭವಗಳನ್ನು ನೀಡಬಲ್ಲದು ‘ಬಯಲು ಸೀಮೆ’.
ಉತ್ತರ ಕರ್ನಾಟಕದ ಜವಾರಿ ಶೈಲಿಯೇ ಇಲ್ಲಿ ಹೊಸದು. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಕಥೆ ಚಲಿಸುತ್ತದೆ. ಆತನ ಸುತ್ತ ಆವರಿಸುವ ಅಕ್ರಮ ಸಂಬಂಧ, ಮತ್ತು ಲವ್ ಸ್ಟೋರಿ ಅದರ ಜೊತೆಗೆ ಹುಟ್ಟುವ ರಣ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರಲ್ಲಿ ಕುತೂಹಲ ತುಂಬ ಬಲ್ಲದು ಎಂದು ಹೇಳಿಕೊಂಡಿತು ಚಿತ್ರತಂಡ.
ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮೊದಲಾದವರ ತಾರಾಗಣವಿದೆ.
ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ನೃತ್ಯ ಸಂಯೋಜನೆ ಚಿತ್ರಕ್ಕಿದೆ ಎಂಬ ಮಾಹಿತಿಗಳು ಬಂದವು.