Snehapriya.com

June 8, 2025

ಕ್ಷೇತ್ರಪತಿ ಚಿತ್ರವಿಮರ್ಶೆ

Social Share :

ನಿಜ ಜೀವನದ ಅಧಿಪತಿ

ರೈತ ದೇಶದ ಬೆನ್ನೆಲುಬು ನಿಜ..! ಆದರೆ ಆತ ಎದುರಿಸುತ್ತಿರುವ ಸಮಸ್ಯೆ ಮತ್ತು ನಿರಾಶಾ ಭಾವದ ಜೀವನವೇ ವಿಷಾದ ಮತ್ತು ವಿಪರ್ಯಾಸ..

ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಮಗನೊಬ್ಬನ ಅಸಹಾಯಕತೆ ಮತ್ತು ರೋಷಾವೇಶದ ಕಥೆಯೇ ಇಲ್ಲಿ ಅನಾವರಣಗೊಂಡಿದೆ.

ಎಂಜಿನಿಯರಿಂಗ್ ಓದುವ ಹುಡುಗ ಅನಿವಾರ್ಯ ಸನ್ನಿವೇಶದಲ್ಲಿ ರೈತನಾದಾಗ ಎದುರಿಗೆ ಬಿಭತ್ಸ ನಡೆಯ ರಕ್ಕಸರ ಅಟ್ಟಹಾಸ ಕಾಣಿಸುತ್ತದೆ. ಅಸಹಾಯಕ ಹುಡುಗ ಅವರ ಮುಂದೆ ಕೆಚ್ಚೆದೆಯವನಾಗಿ ಎದ್ದು ನಿಲ್ಲುವುದು ವಿಸ್ಮಯವಲ್ಲ.. ಅದು ಎದೆಗಾರಿಕೆ.

ತಿಮ್ಮಾಪುರದ ಬಸವ ಅಲಿಯಾಸ್ ಬಸವರಾಜ್ ಹಾದಿಮನಿ ಶಾಲೆ ಕಲಿತವ. ಉನ್ನತ ವ್ಯಾಸಂಗ ಮಾಡುವಾಗ ಅಕಸ್ಮಾತ್ ಎದುರಾದ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತವ. ಗ್ರಾಮೀಣ ಭಾಗದ ಕ್ರೌರ್ಯವನ್ನು ಕಂಡು ಸಿಡಿದೇಳುವ ಆತನ ವರಸೆ ಅತ್ಯಂತ ನೈಜ ಮತ್ತು ರೋಚಕ.

ರೈತ ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಇಲ್ಲ. ಅದೆಲ್ಲಾ ಮಧ್ಯವರ್ತಿಗಳ ಪಾಲು. ರೈತನ ಬೆಳೆ ನೇರ ಮಾರಾಟವಾದಾಗ ಮಾತ್ರ ಅದಕ್ಕೆ ಸರಿಯಾದ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದನ್ನು ಅರಿತು ದಿಟ್ಟ ಹೆಜ್ಜೆಯ ಮೂಲಕ ನೇರ ಮಾರಾಟಕ್ಕೆ ಮುಂದಾಗುವ ಬಸವ ಅನುಭವಿಸುವ ಪಾಡೇನು ಎಂಬುದೇ ಕಥಾವಸ್ತು.

ಮೊದಲರ್ಧ ಬಸವನ ಝಲಕ್ ಜೊತೆಗೆ ರವಿಬಸರೂರ್ ಸಂಗೀತದ ಅಬ್ಬರದಲ್ಲಿ ಚಿತ್ರ ನೋಡುವ ಸಮಯದ ಅರಿವೇ ಆಗುವುದಿಲ್ಲ. ಅಷ್ಟು ನಿಖರ ಮತ್ತು ನೈಜ ಬಿಗಿಯಾದ ಸನ್ನಿವೇಶಗಳು ಮನಸ್ಸಿಗೆ ಮುದ ನೀಡುತ್ತವೆ.

ಆದರೆ ಉತ್ತರಾರ್ಧದಲ್ಲಿ ಟಿವಿ ಬ್ರೇಕಿಂಗ್ ನ್ಯೂಸ್ ಗಳ ಅತಿಯಾದ ಅಬ್ಬರ ಚಿತ್ರದ ವೇಗಕ್ಕೆ ಕಡಿವಾಣ ಹಾಕಿದಂತೆ ಮತ್ತು ನೈಜತೆಯ ಹೂರಣ ಕಸಿದಂತೆ ಅನಿಸುತ್ತದೆ.

ರೈತನ ಮೇಲೆಯೇ ಷಡ್ಯಂತ್ರ ಹೂಡುವುದು ಆದಾಯ ತೆರಿಗೆ ದಾಳಿ ಅದಕ್ಕೆ ಬಸವನಿಂದ ಸರಿಯಾದ ರೋಷಾವೇಷ ಪ್ರಕ್ರಿಯೆ ಬದಲು ಅದನ್ನು ತಣ್ಣಗೆ ಅನುಭವಿಸುತ್ತಾ ಹೊರಗಿನ ಪ್ರಪಂಚ ಅಲ್ಲೋಲ್ಲ ಕಲ್ಲೋಲ ಎಂದು ತೋರಿಸುವುದು ನೈಜತೆಯನ್ನು ಪಕ್ಕಕ್ಕೆ ಸರಿಸಿ ತರ್ಕಕ್ಕೆ ದಾರಿ ಮಾಡಿ ಕೊಡುತ್ತಾ ಹೋಗುತ್ತದೆ.

ಆದರೂ ನೈಜತೆಯ ಅಗಾಧತೆಯನ್ನು ಬಿಂಬಿಸುವಲ್ಲಿ ಚಿತ್ರ ಹಿಂದೆ ಬಿದ್ದಿಲ್ಲ‌ ಎಂಬುದಕ್ಕೆ ಸ್ನೇಹಿತನ ಸಾವಿನ ಸನ್ನಿವೇಶ ಬೆಂಬಲವಾಗಿ ನಿಲ್ಲುತ್ತದೆ.

ಇಡೀ ಚಿತ್ರವನ್ನು ಆವರಿಸಿಕೊಂಡಿರುವ ನವೀನ್ ಶಂಕರ್ ನಿಜವಾದ ಹೀರೋ ಅಂದರೆ ಹೀಗೆ ರಿಯಲ್ ಆಗಿ ನಟಿಸಬೇಕು ಎಂಬುದಕ್ಕೆ ಉದಾಹರಣೆ ಆಗುವಷ್ಟು ನೈಜವಾಗಿ ನಟಿಸಿದ್ದಾರೆ.

ಖಳ ನಟರ ಪಾತ್ರದಲ್ಲಿರುವ ರಾಹುಲ್ ಐನಾಪುರ ಹಾಗೂ ಹರ್ಷ ಅರ್ಜುನ್ ಪಾತ್ರವೂ ನೈಜತೆಯಿಂದ ಕೂಡಿದೆ. ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್ ಮೊದಲಾದವರ ಪಾತ್ರಗಳು ಪೂರಕವಾಗಿವೆ.

ಛಾಯಾಗ್ರಾಹಕ ಶಿವ ಸಾಗರ್ ಪ್ರತಿ ಫ್ರೇಮ್ ನಲ್ಲಿಯೂ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ. ರವಿಬಸ್ರೂರ್ ಸಂಗೀತ ಚಿತ್ರದ ಹೈಲೈಟ್.

ಹೊಸದಾಗಿ ನಿರ್ದೇಶನ ಮಾಡಿರುವ ಶ್ರೀಕಾಂತ್ ಕಟಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಅಪರೂಪಕ್ಕೆ ಉತ್ತರ ಕರ್ನಾಟಕ ಸೊಗಡಿನಲ್ಲಿ ಮೂಡಿಬಂದಿರುವ ಅತ್ಯುತ್ತಮ ಚಿತ್ರ ಇದು ಎಂಬುದು ಚಿತ್ರ ನೋಡಿ ಮುಗಿಸಿದಾಗ ಅನಿಸುತ್ತದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *