ಸಮಾಜದಲ್ಲಿ ಮಕ್ಕಳನ್ನು ಅಮಾನುಷ ರೀತಿಯಲ್ಲಿ ಅಪಹರಿಸಿ ಬಿಕ್ಷಾಟನೆ ಹಾಗೂ ಇತರ ಘೋರ ರೀತಿಯಲ್ಲಿ ಬಳಸಲಾಗುತ್ತದೆ. ಮಕ್ಕಳ ರಕ್ಷಣೆ ಮಾಡುವುದು ಪೋಷಕರ ಆದ್ಯ ಕರ್ತವ್ಯ ..
ಮಕ್ಕಳನ್ನು ಪೋಷಕರು ಯಾವ ರೀತಿ ನೋಡಿಕೊಳ್ಳಬೇಕು ರಕ್ಷಣೆ ಮಾಡಬೇಕು ಎಂಬುದರ ಕುರಿತು ಸಂದೇಶ ನೀಡುವ ಚಿತ್ರವಾಗಿ ಮೂಡಿ ಬಂದಿರುವುದು ‘ನನ್ನ ಹೆಸರು ಕಿಶೋರ ಏಳ್ ಪಾಸ್ ಎಂಟು’.
ಎಂ.ಪಿ.ಭಾರತಿ ಶಂಕರ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವೇಳೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಹಾಗೂ ಈ ಹಿಂದೆ ‘ಸಿಂಹ ಹಾಕಿದ ಹೆಜ್ಜೆ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಂ.ಡಿ.ಪಾರ್ಥಸಾರಥಿ ನಿರ್ಮಿಸಿದ್ದಾರೆ.
ಇದು ಗುಲ್ಬರ್ಗದಲ್ಲಿ ನಡೆದ ಸತ್ಯ ಘಟನೆ. ಮಕ್ಕಳನ್ನು ಅಪಹರಿಸಿ ಕ್ರೂರವಾಗಿ ಬಳಸಿದ ಘಟನೆ. ಇದು ಮನಕಲಕಿತು. ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯದಲ್ಲಿ ಕಥೆ ಮಾಡಿ ಸಿನಿಮಾ ಮಾಡಲಾಗಿದೆ ಎಂಬ ವಿವರ ಬಿಚ್ಚಿಟ್ಟರು ನಿರ್ದೇಶಕ ಭಾರತಿ ಶಂಕರ್.
ಚಿತ್ರದಲ್ಲಿ ತಬಲನಾಣಿ ಹುಡುಗನ ಅಪ್ಪನ ಪಾತ್ರ ನಿರ್ವಹಿಸಿದ್ದಾರೆ ಎಂದರು ನಿರ್ದೇಶಕರು. ತಬಲನಾಣಿ ಅವರು ಸುದ್ದಿಗೋಷ್ಠಿ ನಿರ್ವಹಣೆಯ ಹೊಣೆ ಹೊತ್ತಿದ್ದರು. ಮೊದಲಿಗೆ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿತು ಚಿತ್ರತಂಡ.
ನಾನು ಮೂರು ಬಾರಿ ಕಥೆ ಕೇಳಿದೆ. ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲದು ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ನಿರ್ಮಾಣ ಮಾಡಲೇ ಬೇಕು ಎಂಬ ಗಟ್ಟಿ ನಿರ್ಧಾರ ಮಾಡಿದ್ದೆ ಎಂದರು ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ
ಪ್ರಚಾರದ ಹೊಣೆ ಹೊತ್ತು ವಿಶೇಷ ವಾಹನದ ಜೊತೆ ಸಾಕಷ್ಟು ಊರುಗಳನ್ನು ಸುತ್ತಾಡಿದ ಅಪ್ಪಟ ಕನ್ನಡಾಭಿಮಾನಿ ರಂಗಸ್ವಾಮಿ ಸಹ ಚಿತ್ರದ ಬಗ್ಗೆ ಮಾತನಾಡಿದರು.
ಅಂದ ಹಾಗೆ ಡ್ರಾಮ ಜ್ಯೂನಿಯರ್ ನ ಪ್ರತಿಭಾವಂತ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದು, ಮಹೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಜೊತೆಗೆ ಅಮಿತ್, ಶಶಿ, ಮಂಜುನಾಥ್, ಸಾಯಿ ಕಾಸರಗೋಡು, ಮಿತಾಲಿ ಮೊದಲಾದವರಿದ್ದಾರೆ ಎಂಬ ಮಾಹಿತಿ ಬಂತು.
ಇದೇ 19ರಂದು ಬಿಡುಗಡೆ ಕಾಣುತ್ತಿರುವ ಚಿತ್ರಕ್ಕೆ ಮಂಜು ಕವಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ 28 ದಿನ ಚಿತ್ರೀಕರಣ ನಡೆದಿದೆ ಎಂಬ ವಿವರಗಳು ಬಂದವು..