ಅನಿವಾರ್ಯ ಸಂದರ್ಭದಲ್ಲಿ ಅಪ್ಪ ಅಮ್ಮನಿಂದ ದೂರವಾದ ಬಾಲಕನಿಗೆ ಅದಮ್ಯ ದೇಶಭಕ್ತಿ ಹೊಂದಿರುವ ವ್ಯಕ್ತಿಯ ಆಶ್ರಯ ದೊರೆಯುತ್ತದೆ; ಮುಂದೆ ಬಾಲಕನೂ ದೇಶಪ್ರೇಮ ರೂಢಿಸಿಕೊಳ್ಳುತ್ತಾನೆ. ಆದರೆ ಅರಿವಿಲ್ಲದ ಅಚಾತುರ್ಯವೊಂದು ದೇಶ ಭಕ್ತನನ್ನು ಇಕ್ಕಟ್ಟಿಗೆ ಸಿಗುತ್ತದೆ; ಅದರಿಂದ ಚರ್ಚೆ ವಾದ ವಿವಾದವೂ ನಡೆಯುತ್ತದೆ..
‘ನಮ್ಮ ಭಾರತ’ ಎಂಬುದು ಹೆಸರಾಗಿದ್ದರೂ ಭಾರತೀಯ ಮನಸ್ಥಿತಿಯಲ್ಲಿ ದೇಶಪ್ರೇಮ ತುಂಬುವ ಪ್ರಯತ್ನವೇ ಚಿತ್ರದಲ್ಲಿ ಎದ್ದು ಕಾಣುವ ಅಂಶ. ಕುಗ್ರಾಮವೊಂದರಲ್ಲಿನ ಸಿದ್ಧ (ಸಿದ್ಧಾರ್ಥ್) ಎಂಬ ಬಾಲಕನ ಅಪ್ಪ ಅಮ್ಮ ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಹೋಗುವ ಅನಿವಾರ್ಯತೆ ಒದಗಿ ಬರುತ್ತದೆ. ಹಾಗೆ ಹೋಗುವಾಗ ಒಬ್ಬನೇ ಮಗನನ್ನೂ ಬಿಟ್ಟು ಹೋಗುವ ಪರಿಸ್ಥಿತಿ. ಹಾಗಾಗಿ ಮಗನನ್ನು ಅದೇ ಊರಿನಲ್ಲಿ ಶಿಸ್ತಿನ ಶಿಫಾಯಿಯಂತೆ ಬದುಕುವ ಹಿರಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಬಿಟ್ಟು ಹೋಗುತ್ತಾರೆ.
ಆ ಹಿರಿಯ ವ್ಯಕ್ತಿ ರಾಷ್ಟ್ರೀಯ ವಾದವನ್ನು ಮೈಗೂಡಿಸಿಕೊಂಡ ಅನುಪಮ ದೇಶಭಕ್ತ. ತನ್ನ ಆಶ್ರಯದಲ್ಲಿ ಬೆಳೆಯುತ್ತಿರುವ ಬಾಲಕನಿಗೆ ದೇಶಪ್ರೇಮ ಎಂದರೆ ಏನು.. ನಮ್ಮ ಬಾವುಟದ ಮಹತ್ವ ಏನು ಎಂಬುದರ ಅರಿವು ಮೂಡಿಸುತ್ತಾ ಹೋಗುವಾಗ ಬಾಲಕನ ಹೊಟ್ಟೆ ನೋವಿನ ಸಂಕಟ; ಆತ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವುದು ಮುಂತಾದ ಭಾವುಕ ಸನ್ನಿವೇಶಗಳು ಬಂದು ಹೋಗುತ್ತವೆ.
ಮುಂದೆ ಬಾವುಟ ಹಾರಿಸುವ ಅಚಾತುರ್ಯ ಬಾಲಕನಿಂದ ನಡೆದು ಹೋಗುತ್ತದೆ.. ರಾಷ್ಟ್ರೀಯ ಹಬ್ಬಗಳಲ್ಲದೆ ಬೇರೆ ದಿನಗಳಲ್ಲಿ ನಮ್ಮ ರಾಷ್ಟ್ರೀಯ ಧ್ವಜ ಹಾರಿಸಬಾರದು ಎಂಬುದು ಚರ್ಚೆಯಾಗಿ ಮಾರ್ಪಡುತ್ತದೆ. ಅದು ಅಪರಾಧ ಕೂಡ ಆಗಿರುವುದರಿಂದ ಶಿಕ್ಷೆ ಅನುಭವಿಸಲು ಹಿರಿಯ ವ್ಯಕ್ತಿ ಸಿದ್ಧರಾಗುತ್ತಾರೆ. ಆಗ ವಾದ ವಿವಾದಗಳು ನಡೆಯುತ್ತವೆ.
ಅಂತಿಮವಾಗಿ ರಾಷ್ಟ್ರಧ್ವಜದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಎದ್ದು ಕಾಣುತ್ತದೆ. ರಾಷ್ಟ್ರೀಯವಾದವೂ ಇದೆ ಮತ್ತು ಗಾಂಧೀಜಿಯವರ ಚರಕವೂ ಇದೆ.. ಹಾಗಾಗಿ ಎಲ್ಲಾ ವಾದಗಳಿಗಿಂತ ದೇಶಪ್ರೇಮವೇ ಮುಖ್ಯ ಎಂಬುದು ವ್ಯಕ್ತವಾಗುತ್ತದೆ.
ಸುಮಾರು 30 ವರ್ಷ ಛಾಯಾಗ್ರಾಹಕರಾಗಿ ವಿಶೇಷ ಅನುಭವಗಳನ್ನು ಪಡೆದುಕೊಂಡಿರುವ ಹಾಗೂ ಪುಟ್ಟಣ್ಣ ಕಣಗಾಲ್ ಅವರಿಗೆ ಸಹಾಯಕರಾಗಿ ದುಡಿದಿರುವ ಕುಮಾರಸ್ವಾಮಿ ಈ ಚಿತ್ರದ ನಿರ್ದೇಶಕರಾಗಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಅವರೇ..
ಬಾಲಕನ ಪಾತ್ರದಲ್ಲಿ ಪ್ರಜ್ವಲ್ ಅಭಿನಯ ನೈಜವಾಗಿದೆ. ವಾಗೀಶ್ ಅಪ್ಪಟ ದೇಶಭಕ್ತಿಯನ್ನು ಹೊದ್ದುಕೊಂಡೇ ನಟಿಸಿದಂತೆ ಕಾಣುತ್ತದೆ. ‘ಭರತ ಭೂಮಿ ನಮ್ಮ ದೇಶ..’ ಎಂಬ ಹಾಡು ದೇಶ ಪ್ರೇಮ ಹುಟ್ಟಿಸುವ ಭಾಗದಂತಿಯೇ ಮೂಡಿ ಬಂದಿದೆ. ಮಂಡ್ಯ ನಾಗರಾಜ್ ಸಾಹಿತ್ಯ ಮತ್ತು ಕುಮಾರ್ ಈಶ್ವರ್ ಸಂಗೀತವೂ ಗಮನ ಸೆಳೆಯುತ್ತದೆ.