ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಮುಖ್ಯ ಪಾತ್ರದಲ್ಲಿರುವ ‘ನಮ್ ಹುಡುಗ್ರು’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡು ಹಾಡುವ ಮೂಲಕ ಚಿತ್ರಕ್ಕೆ ಹೊಸ ರೀತಿಯ ಶಕ್ತಿ ನೀಡಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಗೀತೆ ಆಗಲೇ ಚಿತ್ರರಸಿಕರ ಬಾಯಿಯ ಚಾಕೋಲೇಟ್ ಆಗುತ್ತಿದೆ. ಮೆಲೋಡಿ ಗೀತೆಗಳ ಪಟ್ಟಿಯಲ್ಲಿ ಒಂದು ಗಟ್ಟಿಯಾದ ಸ್ಥಾನ ಗುರುತಿಸಿಕೊಂಡಿರುವ ಅಭಿಮಾನ್ ರಾಯ್ ನಮ್ ಹುಡುಗ್ರು ಚಿತ್ರಕ್ಕೆ ಐದು ವಿಭಿನ್ನ ಬಗೆಯ ಹಾಡುಗಳನ್ನು ನೀಡಿದ್ದಾರೆ.
ನಿಜಕ್ಕೂ ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್ ನಲ್ಲೇ ಅದರ ಅದ್ದೂರಿಯ ವಿವರಗಳು ದಕ್ಕಿವೆ. ಹಾಡುಗಳಂತೂ ಈಗಾಗಲೇ ಎಲ್ಲರ ಗಮನ ಸೆಳೆದಿವೆ. ಇದು ನನ್ನ ಅದೃಷ್ಟವೇ ಸರಿ ಎಂದು ನಗು ಮುಖದಿಂದಲೇ ವಿವರಿಸಿದರು ನಾಯಕ ನಟ ನಿರಂಜನ್.
ಎಸ್.ಮಹೇಂದರ್, ಆರ್.ಚಂದ್ರು ಅವರಂಥಹ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಎಚ್.ಬಿ.ಸಿದ್ದು ನಿರ್ದೇಶನದ ಚಿತ್ರಕ್ಕೆ ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ ಇನ್ನಿತರ ಚಿತ್ರರಂಗದ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.
ಹೊಸಬರಿಗೆ ಪ್ರೋತ್ಸಾಹ ಬೇಕು. ಕೆಲವು ವಿಷಯದಲ್ಲಿ ನಮ್ಮಂಥವರು ನೋವನ್ನು ಅನುಭವಿಸಬೇಕು. ಆದರೆ ಚಿತ್ರಕ್ಕೆ ಒಳ್ಳೆಯದಾಗುವುದಾದರೆ ಅವೆಲ್ಲವೂ ಮರೆತು ಹೋಗಬಹುದು ಎಂದು ಮಾರ್ಮಿಕವಾಗಿ ಮಾತನಾಡಿದರು ನಿರ್ದೇಶಕ ಸಿದ್ದು.
ಚಿತ್ರಕ್ಕೆ ಅಶ್ರುಫ್ ನಿರ್ಮಾಪಕರಾದರೂ ಎಲ್ಲವನ್ನು ಹೆಚ್ಚಾಗಿ ನಿಭಾಯಿಸಿದವರು ಕಾರ್ಯಕಾರಿ ನಿರ್ಮಾಪಕ ಮಂಜುನಾಥ್ ಬಾಬು, ಚಿತ್ರ ಇನ್ನೇನು ಚಿತ್ರೀಕರಣ ಮುಗಿಸುವ ಹಾದಿಯಲ್ಲಿ ಈ ಸಂದರ್ಭ ಎರಡು ಹಾಡುಗಳ ಜೊತೆ ಮಾಧ್ಯಮಗಳ ಮುಂದೆ ಬಂದಿತ್ತು.
ರಂಗಾಯಣ ಮತ್ತು ನಾಗ್ತಿಹಳ್ಳಿಯವರ ಟೆಂಟ್ ಸಿನಿಮಾ ಮೂಲಕ ಅಭಿನಯ ತರಬೇತಿ ಪಡೆದಿರುವ ರಾಧ್ಯ ಚಿತ್ರದ ನಾಯಕ ನಟಿ. ಮೈಸೂರು ಮೂಲದ ನನಗೆ ಈ ಚಿತ್ರ ವರವಾಗಿ ಬಂದಿದೆ. ಅಭಿನಯ ಸವಾಲು ಎಂಬುದನ್ನು ಸ್ವೀಕರಿಸಿರುವೆ. ಇದೇ ವೇಳೆ ಹಾಡಿನಲ್ಲಿ ಸುಂದರವಾಗಿ ತೋರಿಸಿರುವುದು ಅದೃಷ್ಟ ಎಂದುಕೊಳ್ಳುವೆ ಎಂದು ಹೇಳುತ್ತಾ ಹೋದರು.
ಅಪ್ಪು ಸರ್ ಕುಣಿದಾಡಿದ್ದು.
ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಸ್ವಲ್ಪ ಭಾವುಕವಾಗಿಯೇ ಮಾತನಾಡಿದರು. ಅಪ್ಪು ಸರ್ ಒಂದು ಹಾಡು ಹಾಡಿದ್ದು ನನ್ನ ಜೀವನದ ಪರಮಗುರಿ ಈಡೇರಿದಂತೆ ಆಯಿತು. ಅವರು ಹಾಡುವಾಗ ನಾನು ಯಾರೆಂಬುದು ಅವರಿಗೆ ತಿಳಿಯಲಿಲ್ಲ.. ಕೊನೆಗೆ ನನ್ನ ಅನೇಕ ಹಾಡುಗಳ ಬಗ್ಗೆ ತಿಳಿಸಿದಾಗ.. ಅವೆಲ್ಲವೂ ನನ್ನ ಫೆವರಿಟ್ ಎನ್ನುತ್ತಾ ಮೈಮರೆತು ಕುಣಿದೇ ತೋರಿದರು. ಆಗ ನಾನೂ ನಿಜಕ್ಕೂ ಭಾವುಕನಾದೆ. ಅವರ ಸರಳತನ ಕಂಡು ದಂಗಾದೆ. ಹೀಗೆ ವಿವರಿಸುತ್ತಾ.. ನಾನು 20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದು ಹಿಟ್ ಹಾಡುಗಳನ್ನು ಕೊಟ್ಟರೂ ಇನ್ನೂ ಹೊಸಬನಂತೆಯೇ ಇರುವೆ ಎಂಬ ವಿಷಾದವನ್ನೂ ವ್ಯಕ್ತಪಡಿಸಿದರು.