ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಮನೋಜ್ಞ ಅಭಿನಯ ಮತ್ತು ಸಮ್ಮೋಹಕ ಸಂಗೀತ; ಅಪ್ರತಿಮ ದೃಶ್ಯಗಳ ಮೂಲಕ ಸಾರ್ವಕಾಲಿಕ ಗೆಲುವು ದಾಖಲಿಸಿರುವ ನಾಗ್ ಶೇಖರ್ ನಿರ್ದೇಶನ ಹಾಗೂ ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿದ್ದ ಚಿತ್ರದ ಮುಂದುವರೆದ ಭಾಗ ತಯಾರಾಗುತ್ತಿದೆ.
ಅದು ಸಂಜು ವೆಡ್ಸ್ ಗೀತಾ-2..!
ಚಿತ್ರದ ಪ್ರಥಮ ಹಂತವೇ ಅದ್ದೂರಿ ಮೂಡಿಸಿಕೊಂಡಿದೆ. ಮೊದಲ ಚಿತ್ರಣ (ಫಸ್ಟ್ ಲುಕ್)ದಿಂದ ಹಿಡಿದು ಟೀಸರ್ ಬಿಡುಗಡೆಯವರೆಗೂ ಹೆಚ್ಚು ಅದ್ದೂರಿ ತನವನ್ನು ಕಾಯ್ದುಕೊಂಡಿದೆ.
ಸ್ವಾತಂತ್ರ್ಯೋತ್ಸವದ ದಿನದಂದು ಪ್ರತಿಷ್ಠಿತ ಸ್ಟಾರ್ ಹೊಟೇಲ್ ನಲ್ಲಿ ನಡೆದ ಮುಹೂರ್ತ ಹಾಗೂ ಟೀಸರ್ ಬಿಡುಗಡೆಯಲ್ಲಿ ಚಿತ್ರರಂಗದ ಗಣ್ಯರ ಉಪಸ್ಥಿತಿ ಎದ್ದು ಕಂಡಿತು.
ಇದು ಸಂಜು ವೆಡ್ಸ್ ಗೀತಾದ ಮುಂದುವರೆದ ಭಾಗವೇ ಎಂಬುದರ ಮಾಹಿತಿ ಕೊಟ್ಟರು ನಿರ್ದೇಶಕ ನಾಗ್ ಶೇಖರ್. ಮೊದಲ ಭಾಗದಲ್ಲಿದ್ದ ಬಹಳಷ್ಟು ಕಲಾವಿದರು ಇದರಲ್ಲಿಯೂ ಇರುತ್ತಾರೆ ಎಂಬ ಮಾಹಿತಿಯನ್ನೂ ಕೊಟ್ಟರು.
ಆದರೆ ಇಲ್ಲಿ ರಮ್ಯಾ ಬದಲಿಗೆ ರಚಿತಾ ರಾಮ್ ಇದ್ದಾರೆ. ಛಾಯಾಚಿತ್ರ ಚಿತ್ರೀಕರಣದಲ್ಲೇ ಅವರ ಇರುವಿಕೆ ಅದ್ಭುತವಾಗಿದೆ.
ನಾಗ್ ಶೇಖರ್ ಅವರಿಗೆ ಅವಕಾಶ ನೀಡಿ ಚಿತ್ರರಂಗಕ್ಕೆ ಬರಲು ಕಾರಣಕರ್ತರಾದ ಹಿರಿಯ ನಿರ್ದೇಶಕ ಎಸ್.ಮಹೇಂದರ್ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ
ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ
ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಐದು ಹಾಡುಗಳನ್ನು ಸಂಯೋಜಿಸಿದ್ದು, ಅವು ಅತ್ಯುತ್ತಮ ವಾಗಿ ಮೂಡಿ ಬಂದಿವೆ. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂಬ ವಿವರ ನೀಡಿದರು ನಾಗ್ ಶೇಖರ್.
ಮುಹೂರ್ತ ದೃಶ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದರೆ; ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ಕರ್ನಾಟಕ ರತ್ನ ಪವರ್ ಸ್ಟಾರ್ ಗೆ ಗೌರವ ಸಲ್ಲಿಸಲಾಗಿದೆ.
ನಿರ್ಮಾಪಕರಾದ ಚಲುವಾದಿ ಕುಮಾರ್, ನಾರಾಯಣ ಎಂ.ಸಿ. ಮಾತನಾಡಿದರು. ರಚಿತಾರಾಮ್, ಶ್ರೀನಗರ ಕಿಟ್ಟಿ ಈ ಚಿತ್ರ ಹೊಸ ಅನುಭವಕ್ಕೆ ಸಾಕ್ಷಿಯಾಗಿದೆ ಎಂದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಿತಿ ಕವಿರಾಜ್ ಚಿತ್ರದ ಕುರಿತಂತೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಭಿಷೇಕ್ ಅಂಬರೀಶ್, ನಾಗಶೇಖರ್ ಅದ್ಭುತವಾದ ತಂತ್ರಜ್ಞ ಎಂದು ಕೊಂಡಾಡಿದರು.
ಐಎಎಸ್ ಅಧಿಕಾರಿ ಮಂಜುನಾಥ್, ನಿರ್ಮಾಪಕ ಕಾರ್ತಿಕ್ ಗೌಡ, ನಟ ಆದಿತ್ಯ, ಮಾಜಿ ಶಾಸಕ ಬಾಲರಾಜ್, ನಾಗತಿಹಳ್ಳಿ ಚಂದ್ರಶೇಖರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ಹಾಜರಿದ್ದರು. ನಿರ್ಮಾಪಕ ಜಾಕ್ ಮಂಜು ಈ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಬಂತು.