ನಿರ್ಮಾಣ : ನರಸೇಗೌಡ ಪಿ.ಎಂ
ನಿರ್ದೇಶನ : ನಾಗೇಶ್ ಕುಮಾರ್.ಎನ್
ರೌಡಿಸಂನ ಕರಾಳ ಅಧ್ಯಾಯ
ಒಬ್ಬ ಒಳ್ಳೆಯ ಮನಸ್ಸಿನ ವ್ಯಕ್ತಿ ರೌಡಿಸಂನ ಕಬಂಧ ಬಾಹುಗೆ ಹೇಗೆ ಸಿಲುಕುತ್ತಾನೆ ಮತ್ತು ಭೂಗತ ಲೋಕದ ಚಟುವಟಿಕೆಗಳು ಹೇಗೆಲ್ಲಾ ಸಮಾಜದಲ್ಲಿ ಚಾಚಿಕೊಂಡಿದೆ ಎಂಬುದರ ಯಥಾವತ್ ಪ್ರದರ್ಶನ ಇಲ್ಲಿ ಸಿಗುತ್ತದೆ.
ಹೆಸರು ಡಾನ್ ಕುಮಾರ..!
ಆಯಿಲ್ ಕುಮಾರ ಸೇರಿದಂತೆ ಭೂಗತ ಲೋಕದಲ್ಲಿ ಆ ಹೆಸರಿನವರು ತಮ್ಮ ಕರಾಳ ಜಾಡನ್ನು ಬಿಟ್ಟು ಹೋಗಿದ್ದಾರೆ. ಇಲ್ಲಿನ ಕುಮಾರ ಕಾಲ್ಪನಿಕ. ಈ ಕುಮಾರ ಅಬ್ಬರಿಸಿ ಬೊಬ್ಬಿರಿಯುತ್ತಾನೆ. ಎದುರಾಳಿಗಳನ್ನು ಮುಲಾಜಿಲ್ಲದೆ ಕೊಚ್ಚಿ ಕೆಡವುತ್ತಾನೆ.
ಕುಮಾರ ರೌಡಿಯಾಗಿ ಡಾನ್ ಕುಮಾರ ಆಗಲು ಕಾರಣಗಳೇನು ಎಂಬ ವಿವರಣೆಯೇ ಇಲ್ಲಿ ಸಿಗುತ್ತದೆ. ಒಬ್ಬ ಉತ್ತಮ ಮನುಷ್ಯ ರೌಡಿಯಾಗಿ ಪರಿವರ್ತನೆಯಾಗುವ ಆಕಸ್ಮಿಕ ಘಟನೆಗಳು ಜರುಗಿದ ಇತಿಹಾಸ ಜನಪ್ರಿಯ ಚಿತ್ರ ‘ಓಂ’ ನಿಂದ ಹಿಡಿದು ಬಹಳಷ್ಟು ಚಿತ್ರಗಳಲ್ಲಿ ಸಿಗುತ್ತವೆ.
ಆದರೆ ಇಲ್ಲಿನ ಕುಮಾರ ರೌಡಿಯಾಗಬಾರದೆಂಬ ಎದೆಗಾರಿಕೆ ಮೆರೆಯುವವನು. ಪರಿಸ್ಥಿತಿ ಅವನನ್ನು ರೌಡಿ ಮಾಡಿಯೇ ತೀರುತ್ತದೆ. ಮುಂದೇ ಅವನಿಂದಾಗುವುದು ರೌಡಿಗಳ ಮಾರಣ ಹೋಮ.
ನಿರ್ದೇಶಕ ನಾಗೇಶ್ ಕುಮಾರ್ ಅವರು ಸಾಮಾಜಿಕ ವ್ಯವಸ್ಥೆ ಮತ್ತು ಭೂಗತ ಲೋಕದ ಒಳ ಸುಳಿಗಳನ್ನು ಪರಿಶೀಲಿಸಲು ಹೋಗಿಲ್ಲ. ಬದಲಿಗೆ ರೌಡಿಯೊಬ್ಬನ ಅಟ್ಟಹಾಸದ ವಿವರಣೆ ಜೊತೆಗೆ ಪ್ರೀತಿ ಪ್ರೇಮದ ತೆಳು ಪದರವನ್ನು ಉಣಬಡಿಸುತ್ತಾರೆ.
ಜೊತೆಗೆ ಕಾಲದ ಜೊತೆಗೆ ಗುರುತಿಸಿಕೊಳ್ಳುವ ಕೆಲಸವೂ ಆಗುವುದಿಲ್ಲ. ಹಾಗಾಗಿ ಕಥೆ ಎಲ್ಲಿ ಹುಟ್ಟುತ್ತದೆ ಮತ್ತು ಎಲ್ಲಿ ಬೆಳೆಯುತ್ತದೆ ಎಂಬುದೇ ಕುತೂಹಲವಾಗುತ್ತದೆ.
ಎಲ್ಲೋ ಒಂದು ಕಡೆ ಪೊಲೀಸ್ ಅಧಿಕಾರಿಗೆ ಸಾಂಗ್ಲಿಯಾನ ಎಂದು ಕರೆಯುವುದನ್ನು ಬಿಟ್ಟರೆ ಇಡೀ ಚಿತ್ರದಲ್ಲಿ ಪೊಲೀಸರ ಸಪ್ಪಳ ಕಾಣುವುದೇ ಇಲ್ಲ.
ಆದರೆ ಕೆರಳಿದ ಡಾನ್ ಕುಮಾರ ನಡೆಸುವ ರಕ್ತದೋಕುಳಿ ಆಟ ಭೂಗತ ಜಗತ್ತಿನ ಕಿರು ಪರಿಚಯವನ್ನು ಮಾಡಿಕೊಡುತ್ತದೆ.
ಕುಮಾರನಾಗಿ ಚಂದ್ರಶೇಖರ್ ಲೀಲಾಜಾಲವಾಗಿ ನಟಿಸಿದ್ದಾರೆ. ಅವರ ಜೊಡಿಯಾಗಿರುವ ಸಹನಾ ಮತ್ತು ಪ್ರಕೃತಿ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.