ರೇಟಿಂಗ್ : 4/5
ನಿರ್ಮಾಣ : ಎನ್.ಎಂ.ಕಾಂತರಾಜ್
ನಿರ್ದೇಶನ : ಚಂದ್ರಮೋಹನ್
ಕಾಡು ಹಾದಿಯ ತುಂಬೆಲ್ಲಾ
ನಗುವಿನ ಬುಗ್ಗೆ..
ನಾಲ್ವರು ಗಂಡಸರು ಒಬ್ಬಳೇ ಮಹಿಳೆ ಇರುವ ಗುಂಪು ಒಂದು ನಿಗೂಢ ಶೋಧಿಸುವ ಕಾರ್ಯಕ್ಕೆ ಮುಂದಾದಾಗ ನಡೆಯುವ ಘಟನಾವಳಿಗಳು ಚಿತ್ರವಾಗಿದೆ.
ಗೋಪಾಲಸ್ವಾಮಿ (ರಂಗಾಯಣ ರಘು), ಕುಮಾರ (ಚಿಕ್ಕಣ್ಣ), ಸುನೀಲ (ಅನೀಶ್ ತೇಜೇಶ್ವರ್), ಸತೀಶ (ಗುರುನಂದನ್) ಹಾಗೂ ಮೀನಾಕ್ಷಿ (ಅರ್ಚನಾ ಕೊಟ್ಟಿಗೆ) ನಿಧಿಯ ಶೋಧನೆಗಾಗಿ ಕಾಡಿನ ಜಾಡು ಹುಡುಕುತ್ತಾ ಹೊರಡುವರು.
ಅಲ್ಲಿ ಒಂದು ಕಿವಿ ಕೇಳದ ಕುಮಾರನಿಗೆ ಯಾವ ಕೆಲಸಕ್ಕೆ ಹೋಗುತ್ತಿದ್ದೇವೆ ಎಂಬುದರ ಪರಿಚಯವಿಲ್ಲ. ಹಾಗಾಗಿ ಆತನ ಮಿಸ್ ಅಂಡರ್ ಸ್ಟಾಂಡಿಂಗ್ ಮತ್ತು ಮಿಸ್ಸಾಗಿ ಬರುವ ಮಾತುಗಳು ನಗೆಯ ಬುಗ್ಗೆಯನ್ನೇ ಹರಿಸುತ್ತವೆ.
ಅಗಾಧ ಕಾಡಿನ ನಡುವೆ ಯಾವುದೇ ಅಪಾಯಕಾರಿ ಪ್ರಾಣಿಗಳು, ಪಕ್ಷಿ ಅಥವಾ ಜಲಚರ ಯಾವುದೂ ಈ ಐವರನ್ನು ವಿಚಲಿತಗೊಳಿಸುವುದಿಲ್ಲ. ಆದರೆ ಅವರ ಚೇಷ್ಟೇಗಳೇ ಹೇಗೆ ಗೊಂದಲಕ್ಕೆ ಸಿಕ್ಕಿಸುತ್ತವೆ ಎಂಬುದು ಪ್ರೇಕ್ಷಕನಲ್ಲಿ ಉಕ್ಕುವ ನಗೆಯ ಕಾರಣ.
ಹೀಗೆ ಮೊದಲರ್ಧ ಮುಗಿಯುವ ಹೊತ್ತಿಗೆ ಇವರ ಗುರಿ ಮುಟ್ಟುವಿಕೆ ಸಾಧ್ಯವಾಗುತ್ತದೆ. ಜೊತೆಗೆ ಒಂದಷ್ಟು ಕಾಲ ಕರ್ನಾಟಕವನ್ನು ಕಾಡಿದ ನರಹಂತಕನ ಭೂತ ಎದುರಾಗುತ್ತದೆ.
ಮುಂದೆ ಆ ಭೂತ ಚೇಷ್ಟೇಯದೇ ಮಾತು. ನಿಜ ಜೀವನದಲ್ಲಿ ಅತ್ಯಂತ ಕ್ರೌರ್ಯ ಮೆರೆದಿದ್ದ ಆ ಭೂತ ಅತಿಮಾನುಷ ಶಕ್ತಿಯನ್ನು ಹೊಂದಿದ್ದರೂ ಮೃದು ಧೋರಣೆ ತಳೆದಿರುತ್ತದೆ ಏಕೆ..
ಅಥವಾ ಭೂತದ ಭಯಾನಕತೆಯನ್ನು ನಿರ್ದೇಶಕರು ಅರಗಿಸಿಕೊಂಡಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ (ಕಥೆ ಸತ್ಯ ಶೌರ್ಯ ಸಾಗರ್). ಆದರೆ ಕಾಡುಗಳ್ಳನ ಆ ಭೂತದ ಕಾರಣ ನಡೆಯುವ ಘಟನಾವಳಿಗಳು ಥ್ರಿಲ್ ನ ಜೊತೆಗೆ ನಗೆಯನ್ನು ಮೊಗೆದು ಕೊಡುತ್ತವೆ.
ಅಮಾಯಕತ್ವ ತುಂಬಿಕೊಂಡ ಐವರಿಗೆ ಅಗಾಧ ಸಂಪತ್ತು ವಶವಾಗುವುದಿಲ್ಲ. ಬದಲಿಗೆ ಅವರು ಎಂತಹ ವಿಪತ್ತು ಎದುರು ಹಾಕಿಕೊಳ್ಳುತ್ತಾರೆ ಎಂಬುದೇ ಕ್ಲೈಮ್ಯಾಕ್ಸ್. ಜೊತೆಗೆ ಚಿತ್ರದ ಭಾಗ ಎರಡಕ್ಕೆ ಮುನ್ನುಡಿ.
ರಂಗಾಯಣ ರಘು ಹಾಗೂ ಚಿಕ್ಕಣ್ಣ ಎಂದಿನ ಕಾಮಿಡಿ ವರಸೆಯಲ್ಲಿ ಮಿಂದೇಳುವ ಸನ್ನಿವೇಶಗಳಲ್ಲಿ ಉಳಿದವರು ಕಣ್ಣುಗಳಲ್ಲೇ ನಟಿಸಿರುವುದು ವಿಶೇಷ. ಶರಣ್ಯ ಶೆಟ್ಟಿ ಕಾಣಿಸಿಕೊಂಡರೂ ಕಾಡಿನಲ್ಲಿ ಅವರ ಪಾತ್ರವಿಲ್ಲ. ಕಾಡಿನ ದೃಶ್ಯಗಳಿಗಿಂತ ಧರ್ಮವಿಶ್ ಅವರ ಹಿನ್ನೆಲೆ ಸಂಗೀತದ ಝಲಕ್ ಪ್ರೇಕ್ಷಕನನ್ನು ಹೆಚ್ಚಿನ ಥ್ರಿಲ್ ಗೆ ಒಳಪಡಿಸುತ್ತದೆ.
ಲಾಜಿಕ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ನೋಡಿ ನಕ್ಕು ಮೈ ಮನ ಹಗುರಾಗಿ ಬರಲು ‘ಫಾರೆಸ್ಟ್’ ನ ದಾರಿ ಹಿಡಿಯ ಬಹುದು. ಜೊತೆಗೆ ಹಳೆಯ ನೆನಪುಗಳನ್ನು ಎಳೆದುಕೊಳ್ಳಲು ಸಹಕಾರಿ.