ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ನಿರ್ದೇಶನದ ಚಿತ್ರ ‘ದರ್ಬಾರ್’ ಬಿಡುಗಡೆಗೆ ಸಜ್ಜುಗೊಂಡಿದೆ.
ಸತೀಶ್ ಈ ಚಿತ್ರವನ್ನು ನಿರ್ಮಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ವಿ.ಮನೋಹರ್ ನಿರ್ದೇಶನ ಮತ್ತು ಸಂಗೀತ ನಿರ್ದೇಶನ ಎರಡನ್ನೂ ಮಾಡಿದ್ದಾರೆ.
ಅಂದ ಹಾಗೆ ಇದೇ ಜೂನ್ 9ರಂದು ಚಿತ್ರವು ಬಿಡುಗಡೆ ಕಾಣುತ್ತಿದ್ದು, ಇದರ ಪ್ರಚಾರದ ಸಲುವಾಗಿ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ ಎಂಬ ವಿವರಗಳನ್ನು ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿತು ತಂಡ.
ಸುದೀರ್ಘ ಅವಧಿಯ ಬಳಿಕ ಅಂದರೆ 23 ವರ್ಷಗಳ ಬಳಿಕ ನಾನು ಮತ್ತೆ ಡೈರೆಕ್ಟರ್ ಕ್ಯಾಪ್ ಹಾಕಬೇಕಾಯಿತು. ಇದಕ್ಕೆ ಸತೀಶ್ ಕಾರಣಕರ್ತರು. ಈ ಚಿತ್ರ ಪರಿಶುದ್ಧ ಹಾಸ್ಯದಿಂದ ಕೂಡಿದೆ. ಮನೋಹರ್ ನಿರ್ದೇಶಕನಾಗಿ ಹೇಗೆ ಎಂಬುದಕ್ಕೂ ಇದು ಉತ್ತರವಾಗಿದೆ ಎಂದರು.
ಕೆಟ್ಟದ್ದನ್ನು ಕಂಡರೆ ಆಗದ ವ್ಯಕ್ತಿ ಊರೊಳಗಿನ ಸೋಮಾರಿಗಳನ್ನು, ಜೂಜುಕೋರರನ್ನು ಸರಿಪಡಿಸಲು ಯತ್ನಿಸುತ್ತಾನೆ. ಈ ಗುಣ ಇಷ್ಟವಾಗದವರು ಆತನ ವಿರುದ್ಧ ಸಂಚು ರೂಪಿಸುತ್ತಾರೆ. ಇದೆಲ್ಲವೂ ತಮಾಷೆಯ ರೂಪದಲ್ಲೇ ಇರುವುದು ವಿಶೇಷ ಎಂದರು ಮನೋಹರ್.
ಗಿಚ್ಚಿ ಗಿಲಿಗಿಲಿ ಕಾರ್ತೀಕ್, ಸಂತು, ಸಾಧು ಕೋಕಿಲ, ನವೀನ್ ಪಡೀಲ್ ಪಾತ್ರಗಳು ನೋಡುಗರನ್ನು ರಂಜಿಸುತ್ತವೆ. ಮಂಡ್ಯ, ಮದ್ದೂರು ಭಾಗದ ರಂಗಭೂಮಿ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ ಎಂಬ ವಿವರವೂ ಬಂತು.
ಉಪೇಂದ್ರ ಚುನಾವಣೆ ಹಾಡು ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಹಾಡು ಬಿಡುಗಡೆ ಮಾಡಬೇಕಿದೆ. ಇಡೀ ಚಿತ್ರವನ್ನು ಮಾರದೇವನಹಳ್ಳಿ ಎಂಬಲ್ಲಿ ಚಿತ್ರೀಕರಿಸಲಾಗಿದೆ.
ಸತೀಶ್ ಜೊತೆ ಜಾಹ್ನವಿ ನಟಿಸಿದ್ದು, ಅವರಿಗಿದು ಮೊದಲ ಚಿತ್ರ. ಸಾಮ್ರಾಟ್ ಎಸ್. ಛಾಯಾಗ್ರಹಣವಿದೆ. ಸತೀಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ.
ಎಂ.ಎನ್.ಲಕ್ಷ್ಮಿದೇವಿ, ಅಶೋಕ್ ಸೇರಿದಂತೆ ಸಾಕಷ್ಟು ಹಿರಿಯ ಕಲಾವಿದರು ಅಭಿನಯಿಸಿದ್ದಾರೆ ಎಂಬ ವಿವರಗಳು ಬಂದವು.