* ಚಿತ್ರ ಫೆಬ್ರವರಿಯಲ್ಲಿ ತೆರೆಗೆ *
ವಿಭಿನ್ನ ಕಥಾಹಂದರ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರದಿಂದ ‘ಮಾಯೆ’ ಎಂಬ ಮನ ಸೆಳೆಯುವ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಶಿವಮೊಗ್ಗೆಯ ಹೊಸ ಪ್ರತಿಭೆ ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.
ಎನ್ ಜಿ ಓ ಮುಖ್ಯಸ್ಥೆಯಾಗಿರುವ ಉಷಾ ಚಿತ್ರದ ಕುರಿತು ಸದಾಶಯಗಳನ್ನು ವ್ಯಕ್ತಪಡಿಸಿದರು.
ಚಿತ್ರವು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂಬ ವಿವರ ಕೊಟ್ಟಿತು ಚಿತ್ರತಂಡ.
ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಪ್ಯಾನ್ ಇಂಡಿಯಾ ಮೂವೀ ಆಗಿದೆ. ಈ ಚಿತ್ರಕ್ಕೆ ಐದು ಜನ ನಿರ್ಮಾಪಕರು. ಈ ಐದೂ ಜನರು ಬೇರೆ ಬೇರೆ ರಾಜ್ಯದವರು ಎಂಬ ವಿವರ ಕೊಟ್ಟರು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್.
ಅವರೊಟ್ಟಿಗೆ ಗೋಪಿಚಂದ್ ಹಾಗೂ ಲಾಲ್ ಚಂದ್ ಖತಾರ್ ಸಹ ಧ್ವನಿಗೂಡಿಸಿದರು. ಜೊತೆಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ ಹಾಗೂ ಸರೋವರ್ ಸಹ ನಿರ್ಮಾಣಕ್ಕೆ ಬೆಂಬಲ ನೀಡಿರುವ ವಿವರ ಕೊಟ್ಟರು.
‘ಮಾಂಕ್ ದಿ ಯಂಗ್’ ವಿಂಟೇಜ್ ಫ್ಯಾಂಟಸಿ ಜಾನರ್ ನ ಕಥಾಹಂದರ ಹೊಂದಿರುವ ಚಿತ್ರ. 1869 ನೇ ಇಸವಿಯಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಟ್ರೈಮ್ ಟ್ರಾವೆಲ್ ನ ಥ್ರಿಲ್ ಪ್ರೇಕ್ಷಕ ಆನಂದಿಸಬಹುದು
ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಚಿತ್ರದಲ್ಲಿ ನನ್ನ ಪಾತ್ರ ವಿಶೇಷವಾಗಿದೆ ಎಂದರು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರೋವರ್.
ಪ್ರಮುಖ ಪಾತ್ರದಲ್ಲಿರುವ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ಗಾಯಕಿ ಸಿರಿ ಕಟ್ಟೆ, ಗಾಯಕ ರೋಹಿತ್, ಗೀತರಚನೆಕಾರ ಪ್ರತಾಪ್ ಭಟ್, ಕಲಾವಿದರಾದ ಕೃತಿ, ರವಿ ಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್, ಶಿವಪ್ಪ ಹಾಗೂ ಇತರರು ಚಿತ್ರದ ಕುರಿತು ಮಾತನಾಡಿದರು.