ಮುಗಿಲ ಪೇಟೆ ಬಿಡುಗಡೆಗೆ ಮುನ್ನವೇ ಸದ್ದು ಮಾಡತೊಡಗಿದೆ. ಮುಖ್ಯವಾಗಿ ಚಿತ್ರದ ಮನರಂಜನೆ ವಿಷಯದ ಬಗ್ಗೆ ಚಿತ್ರತಂಡ ಅತ್ಯಂತ ಖುಷಿಯಿಂದಲೇ ಮಾತನಾಡಿತು..
ಅದು ಸ್ಟಾರ್ ಹೊಟೇಲ್.. ಯಾವ ಸ್ಟಾರ್ ನಟರ ಚಿತ್ರಗಳಿಗೂ ಕಡಿಮೆ ಇಲ್ಲದ ಅದ್ದೂರಿಯ ಸೆಟ್ ಕಂಗೊಳಿಸುತಿತ್ತು. ಅದೂ ಕೂಡ ಸ್ಟಾರ್ ಚಿತ್ರವೇ.. ಏಕೆಂದರೆ ಅದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ಮನೋರಂಜನ್ ಮುಖ್ಯ ಪಾತ್ರದಲ್ಲಿರುವ ಚಿತ್ರ.
ಇದೇ ನವೆಂಬರ್ 19ರಂದು ಬಿಡುಗಡೆ ಕಾಣುತ್ತಿರುವ ಚಿತ್ರ ಮುಗಿಲ್ ಪೇಟೆ. ಮನೋರಂಜನ್ ರವಿಚಂದ್ರನ್ ಮತ್ತು ಅವರ ಸಹೋದರ ವಿಕ್ರಂ ರವಿಚಂದ್ರನ್ ಅವರ ಪರಿಶ್ರಮದ ಫಲ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂಬ ಹೊಗಳಿಕೆ ಪ್ರತಿಯೊಬ್ಬರಿಂದಲೂ ವ್ಯಕ್ತವಾಯಿತು.
‘ಅಪ್ಪನ್ ಹೆಗಲ್ ಮೇಲೆ ಕುಳಿತಾಗ ಅದರ ಮಹತ್ವ ಗೊತ್ತಾಗಲಿಲ್ಲ.. ಮುಂದೆ ಅರಿವಾಯಿತು ನಾನು ದೇವರ ಹೆಗಲಮೇಲೆ ಕುಳಿತ್ತಿದೆಂದು..’ ಎಂದು ಅಪ್ಪನ ನೆರಳಿನಲ್ಲಿ ಅರಳಿದ ಬಗೆಯನ್ನು ವಿವರಿಸಿದ ಮನೋರಂಜನ್ ಅವರಲ್ಲಿ ಭಾವುಕತೆ ತುಂಬಿ ತುಳುಕುತಿತ್ತು.. ನನ್ನ ಈ ಸಿನಿಮಾದ ಜರ್ನಿಯಲ್ಲಿ ಹಿರಿಯ ಕಲಾವಿದರಿಂದ ಹಿಡಿದು ಎಲ್ಲರೂ ಸಹಕಾರ ನೀಡಿದ್ದಾರೆ. ನನ್ನ ತಮ್ಮ ಮತ್ತು ತಂಗಿ ಇಬ್ಬರೂ ನನ್ನ ಶಕ್ತಿ. ಚಿತ್ರ ನಿರ್ಮಾಣ ಮಾಡಿರುವ ರಕ್ಷಾ ಕೂಡ ನನ್ನ ತಂಗಿಯೇ ಎಂದರು ಮನೋರಂಜನ್.
ಹಿರಿಯ ನಟ ರಂಗಾಯಣ ರಘು, ಮುಗಿಲು ಯಾವೊತ್ತು ಎತ್ತರ; ಅದನ್ನು ತಲೆ ಎತ್ತಿ ನೋಡಬೇಕು. ಆದರೆ ಪೇಟೆ ಎಂದರೆ ಅದಮ್ಯ ಪ್ರೀತಿ ಕಾಣುತ್ತದೆ ಎಂದರು.
ರಕ್ಷಾ ವಿಜಯ್ ಕುಮಾರ್ ಚಿತ್ರದ ನಿರ್ಮಾಪಕರು. ರವಿಸರ್ ಕುಟುಂಬದ ಸ್ನೇಹದಿಂದ ಈ ಚಿತ್ರ ನಿರ್ಮಿಸುವ ಅವಕಾಶ ಬಂತು ಎಂದರು ರಕ್ಷಾ.
ನಿಮ್ಮ ಅಪ್ಪ ಯಾಕೆ ಬರಲಿಲ್ಲ ಎಂದು ಪ್ರೀತಿಯಿಂದಲೇ ಮನೋರಂಜನ್ ಗೆ ಪ್ರಶ್ನಿಸಿದ ಸಾಧು ಕೋಕಿಲ, ಮನು ವಿಕ್ಕಿ ಸಾಧನೆ ತೋರಿಸಬೇಕೆಂದಿದ್ದಾರೆ.. ಅದಕ್ಕೆ ಕೇಳಿದೆ ಎಂದು ನಕ್ಕರು.
17 ಗೆಟಪ್ ಇದೆ ನನಗೆ. ಬಹಳ ವಿಶೇಷವಾಗಿದೆ. ಪಾತ್ರದ ಬಗ್ಗೆ ನಾನು ಹೇಳುವುದಿಲ್ಲ.. ಆದರೆ ನನ್ನ ಪಾತ್ರದ ವಿವರ ಲಿಮ್ಕಾ ಪ್ರಶಸ್ತಿಗೆ ಅರ್ಹತೆ ಪಡೆದಿದೆ ಎಂದರು ಸಾಧು.
ನಿರ್ದೇಶಕ ಭರತ್ ಎಸ್.ನಾವುಂದ ಮಾತನಾಡುವಾಗ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡರು. ನನ್ನ ಕನಸಿನ ಸಿನಿಮಾ ಮಾಡಲು ಈ ಹಂತಕ್ಕೆ ತಳ್ಳಿ ದವರು ಬಹಳ ಜನರಿದ್ದಾರೆ
ತಂತ್ರಜ್ಞರು ನನ್ನ ಶಕ್ತಿ ಎಂದರು.
ಶ್ರೀಧರ್ ಸಂಭ್ರಮ್ ಬಹಳವೇ ಖುಷಿಯಲ್ಲಿದ್ದರು. ಚಿತ್ರ ಸೊಗಸಾಗಿದೆ. ನನಗೆ ಈ ಚಿತ್ರ ಸಿಕ್ಕಿದ್ದು ರವಿ ಸರ್ ಚಿತ್ರಗಳ ಋಣ ತೀರಿಸುವಂತೆ ಎಂದರು.
ಹೊಸ ಖಳ ನಟರಲ್ಲಿ ಕಾಕ್ರೋಚ್ ಎಂದೇ ಹೆಸರಾದ ಸುಧೀ, ಹಾಸ್ಯ ನಟ ಅಪ್ಪಣ್ಣ, ನಟಿ ಮೇಘಶ್ರೀ ಹಾಗೂ ಚಿತ್ರದಲ್ಲಿ ನಟಿಸಿ ವೇದಿಕೆಯಲ್ಲಿ ನಿರೂಪಣೆ ಮಾಡಿದ ಕಾವ್ಯಾ ಷಾ ಇದ್ದರು.