ಕೋಪ ಮನುಷ್ಯನ ಸಹಜ ಗುಣ..
ಇದು ಅತಿಯಾದರೆ ಅಮೃತವೂ ವಿಷದಂತೆ..
ಹಾಗಾಗಿ ಅದನ್ನು ನಿಯಂತ್ರಣದಲ್ಲಿ ಇಡುವುದು ಬಹಳವೇ ಮುಖ್ಯ..
ಈ ರೀತಿಯ ಸಂದೇಶ ಹೊಂದಿರುವ ಚಿತ್ರ ‘ಟೆಂಪರ್’. ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಂಜು ಕವಿ ಮೊದಲ ನಿರ್ದೇಶನದ ಚಿತ್ರ ಇದು.
ಆರ್ಯನ್ ಸೂರ್ಯ ಹಾಗೂ ಖಾಸಿಮಾ ರಫಿ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ತಬಲ ನಾಣಿ, ಮಿತ್ರಾ, ಟೆನ್ನಿಸ್ ಕೃಷ್ಣ ಮೊದಲಾದ ಕಲಾವಿದರ ದಂಡೇ ಇದೆ..
‘ಗೀತ ರಚನೆ ಮಾಡುವಾಗಲೇ ನಿರ್ದೇಶಕನಾಗಬೇಕು ಎಂಬುದು ಕನಸಾಗಿತ್ತು. ಈಗ ಒಂದು ಪ್ರಯತ್ನ ಮಾಡಿರುವೆ. ಚಿತ್ರದ ಹೆಸರು ಟೆಂಪರ್ ಎಂದಿದ್ದರೂ ಇದು ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ’ ಎಂದರು ಮಂಜು ಕವಿ.
ಹೊಸಬರ ಚಿತ್ರವನ್ನು ಪ್ರೋತ್ಸಾಹಿಸಿ; ಪೈರಸಿ ಮಾಡಬೇಡಿ ಎಂಬ ಕೋರಿಕೆಯೂ ಬಂತು. ಬೆಳೆಯುವಾಗಲೇ ಮೈ ತುಂಬಾ ಕೋಪ ತುಂಬಿಕೊಂಡರೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಲಾಗಿದೆ ಎಂಬ ವಿವರ ಕೊಟ್ಟರು.
ತಬಲಾ ನಾಣಿ ಅಪ್ಪನ ಪಾತ್ರ ನಿರ್ವಹಿಸಿದ್ದು, ಅವರ ಕುಡಿತದ ಝಲಕ್ ಏನೆಂಬುದಕ್ಕೆ ಟ್ರೈಲರ್ ನಲ್ಲೇ ಉತ್ತರ ಸಿಕ್ಕಿತು. ಮಿತ್ರ ಅವರ ಪಾತ್ರ ಕೂಡ ಗಮನ ಸೆಳೆಯಬಲ್ಲದು ಎಂಬ ಉತ್ತರವೂ ಸಿಕ್ಕಿತು.
ಚಿತ್ರದಲ್ಲಿ ನನ್ನ ಟೆಂಪರ್ ಏನೆಂಬುದು ವ್ಯಕ್ತವಾಗಿದೆ. ಮೊದಲು ಅಭಿನಯ ಮತ್ತು ಫೈಟ್ ಕಷ್ಟವೆನಿಸಿತ್ತು. ಆದರೆ ಟ್ರೈಲರ್ ನೋಡಿದ ತಕ್ಷಣ ಆ ಕಷ್ಟವೆಲ್ಲಾ ಮರೆತು ಹೋಯಿತು ಎಂಬುದು ಆರ್ಯನ್ ಸೂರ್ಯ ನೀಡಿದ ವಿವರ. ಖಾಸಿಮಾಗೆ ಇದು ಪೂರ್ಣ ಪ್ರಮಾಣ ಅಭಿನಯ ನೀಡಲು ಸಿಕ್ಕಿರುವ ಪಾತ್ರ. ಪತ್ರಕರ್ತ ಧನು ಕೂಡ ಚಿತ್ರದಲ್ಲಿ ಎರಡನೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಟ್ರೈಲರ್ ಬಿಡುಗಡೆಯ ಮುಖ್ಯ ಅತಿಥಿಗಳಾಗಿದ್ದರು. ಬಾಲನಟ ಪವನ್ ಮೋರೆ, ಸಂಕಲನಕಾರ ಕೆಂಪರಾಜು, ನಟಿ ಪ್ರಿಯಾ ತರುಣ್, ಸಂಗೀತ ನಿರ್ದೇಶಕ ಆರ್.ಹರಿ ಬಾಬು ಮಾತನಾಡಿದರು.
ಅಂದ ಹಾಗೆ ಚಿತ್ರವು ಡಿಸೆಂಬರ್ 16ರಂದು ತೆರೆ ಕಾಣುತ್ತಿದ್ದು, ವಿ.ವಿನೋದ್ ಕುಮಾರ್ ಹಾಗೂ ಬಿ.ಮೋಹನ್ ಬಾಬು ಈ ಚಿತ್ರದ ನಿರ್ಮಾಪಕರು.