ಹಳೆಯ ಸಿದ್ಧ ಸೂತ್ರದಲ್ಲೇ ಸಂಬಂಧಗಳ ನೆಲೆ ಬೆಲೆ..
ಹೀಗೊಂದು ತುಂಬು ಕುಟುಂಬ.. ಅಣ್ಣ ತಂಗಿ, ತಂಗಿಗೊಬ್ಬ ಗೆಳತಿ, ಅಣ್ಣನಿಗೆ ಮನಸೋತ ಪ್ರೇಯಸಿ..
ಜೊತೆಗೆ ಕೆಡುಕ ಊರ ಗೌಡನ ಸಹೋದರ ಮತ್ತು ಊರ ಗೌಡ..
ಮುಂದೇನಾಯ್ತು..!
ಇಂತಹ ಕುತೂಹಲದಿಂದಲೇ.. ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.. ಆದರೆ ಸಿದ್ಧ ಸೂತ್ರದಲ್ಲೇ ಕಥೆ ಹೆಣೆಯಲಾದ ಹಿನ್ನೆಲೆಯಲ್ಲಿ ಮುಂದಾಗುವುದನ್ನು ಊಹಿಸಬಹುದು..
ಸೂರ್ಯ ಕೋಪಿಷ್ಠ ಹುಡುಗ. ಆದರೆ ಆತನ ಹೃದಯ ತಂಗಾಳಿಯಂತೆ.. ಸಂಪರ್ಕದಲ್ಲಿ ಇರುವ ಎಲ್ಲರಿಗೂ ಅದು ತಂಗಾಳಿ ಮತ್ತು ನೆರಳು ಕೊಡುವ ಮರ. ಬಾಲ್ಯದ ಗೆಳೆಯರನ್ನು ಜೊತೆಯಲ್ಲಿಕೊಂಡು ಪೋಷಿಸಿ ಬೆಳೆಸುವುದೂ ಅಲ್ಲದೆ, ತಂಗಿಯ ಸ್ನೇಹಿತೆಗೂ ಕೂಡ ಅಣ್ಣನಾಗಿರುತ್ತಾನೆ.
ಇಂತಹ ಹುಡುಗನಿಗೆ ಟೆಂಪರ್ ಏರುವುದು ಊರಿನ ಜಮಿನ್ದಾರ ಮತ್ತು ಆತನ ತಮ್ಮ ನೀಡುವ ಕ್ವಾಟಲೆಗಳಿಂದ..
ಅಷ್ಟರಲ್ಲಿ ಜಮಿನ್ದಾರನ ಮಗಳ ಜೊತೆ ಅವನಿಗೆ ಪ್ರೇಮವಾಗಿರುತ್ತದೆ. ಸೂರ್ಯ ಕ್ಲಿಷ್ಟಕರ ಸಂದರ್ಭಗಳನ್ನು ಜಯಿಸುತ್ತಾನೆ..
ಇದೊಂದು ಸುಂದರ ಸಾಂಸಾರಿಕ ಚಿತ್ರ ಎಂದರೆ ಅದು ಅತಿಶಯೋಕ್ತಿ ಅಲ್ಲ.. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಸಂದೇಶಗಳು ಬೆಸೆದುಕೊಂಡಿರುವುದು ವಿಶೇಷ.
ಚಿತ್ರದ ಕೊನೆಯಲ್ಲಿ ಬರುವ ಗೆಳೆಯನ ಸಾವು ಮತ್ತು ಆತನ ಸಾವಿನ ಯಾತ್ರೆ ನೈಜ ಎಂಬಂತೆ ಚಿತ್ರೀಕರಿಸಿರುವುದರಿಂದ ಅದು ಹೃದಯ ವಿದ್ರಾವಕ ಮತ್ತು ಎಂತಹವರ ಹೃದಯವನ್ನೂ ಆರ್ದ್ರಗೊಳಿಸುತ್ತದೆ..
ಸೂರ್ಯನ ಪಾತ್ರದಲ್ಲಿ ಆರ್ಯನ್ ಸೂರ್ಯ ಫಿಟ್ ಅಂಡ್ ಫೈನ್, ಜೋಡಿಯಾಗಿ ಖಾಸಿಮಾ ಹೊಂದಿಕೆಯ ನಟನೆ.. ತಬಲನಾಣಿ ಎಂದಿನ ಲೀಲಾಜಾಲ ನಟನೆ ಮೆರೆದರೆ, ಮಿತ್ರ, ಪವನ್, ಧನು ಮೊದಲಾದವರ ನಟನೆ ಗಮನಾರ್ಹ. ಖಳನ ಪಾತ್ರದಲ್ಲಿ ಯತಿರಾಜ್ ಗಮನ ಸೆಳೆದರೇ.. ಬ.ಲ.ರಜವಾಡಿ ಎಂದಿನ ಗತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಮಂಜು ಕವಿ ಎಲ್ಲಿಯೂ ಬೋರಾಗದಂತೆ ಚಿತ್ರಕಥೆ ಹೊಸೆದಿದ್ದಾರೆ. ಹಾಡುಗಳು ಇಷ್ಟವಾಗುತ್ತವೆ.. ಹಾಗಾಗಿ ಮನೆ ಮಂದಿ ಕುಳಿತು ‘ಟೆಂಪರ್’ ನೋಡಬಹುದು..