ರಾಜಾಜಿನಗರದ ಲುಲ್ಲು ಮಾಲ್ ಆವರಣ ಭಾನುವಾರ ವರ್ಣರಂಜಿತ ವಾತಾವರಣದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ಉಪಸ್ಥಿತಿಯಲ್ಲಿ ನಲಿದಾಡಿತು..
ಅದು ‘ಮನದ ಕಡಲು’ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡ ಸಂದರ್ಭ.
‘ಮುಂಗಾರು ಮಳೆ’ ನಿರ್ಮಾಪಕ ಈ ಕೃಷ್ಣಪ್ಪ ಬಹಳ ಸಮಯದ ಬಳಿಕ ಮತ್ತೆ ನಿರ್ಮಾಣ ಮಾಡುತ್ತಿರುವ ಚಿತ್ರ ಮನದ ಕಡಲು. ಯೋಗರಾಜ್ ಭಟ್ ಅದರ ನಿರ್ದೇಶಕರು.
ಯಶ್ ಅದೆಷ್ಟೋ ವರ್ಷಗಳ ಬಳಿಕ ಬಹಿರಂಗ ಸಭೆಯ ರೀತಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಅದಕ್ಕೆ ಇ.ಕೃಷ್ಣಪ್ಪ ಅವರ ಜೊತೆಗಿನ ಒಡನಾಟ ಕಾರಣ ಎಂಬುದು ಪ್ರಚಾರ ಸಭೆಯಲ್ಲೇ ಬಹಿರಂಗವಾದ ವಿಷಯ.
ಇ.ಕೃಷ್ಣಪ್ಪ ನಿರ್ಮಾಣದ ‘ಮೊಗ್ಗಿನ ಮನಸ್ಸು’ ಯಶ್ ಅವರ ಮೊದಲ ಚಿತ್ರ. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು ರಾಕಿಂಗ್ ಸ್ಟಾರ್.
ಬೆಳವಣಿಗೆಯ ಹಾದಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಸಾಕಷ್ಟು ಜನರ ಶ್ರಮವನ್ನು ಮರೆಯಲಾರೆ ಎಂದರು.
ಇದೇ ಮಾರ್ಚ್ 28 ರಂದು ತೆರೆಗೆ ಬರಲು ಸಂಪೂರ್ಣ ಸಜ್ಜಾಗಿರುವ ಚಿತ್ರದ ಬಗ್ಗೆ ಇಡೀ ಚಿತ್ರತಂಡ ಮಾಹಿತಿ ನೀಡಿತು.
‘ಮನದ ಕಡಲು’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ಸುಮುಖ, ನಟಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.