* ನವೆಂಬರ್ 29 ರಂದು ಬಿಡುಗಡೆ *
* ಜಾನಪದ ಸಂವೇದನೆಯ ಚಿತ್ರ *
ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಮದನ್ ಪಟೇಲ್ ಈಗ ಮಣ್ಣಿನ ಗುಣದ ಚಿತ್ರಗಳನ್ನು ಮೆರೆಸುವ ಚಿತ್ರಗಳತ್ತ ಗಮನ ಹರಿಸಿದ್ದು, ಜಾನಪದ ಸಂವೇದನೆಯ ಚಿತ್ರ ‘ತಮಟೆ’ ಬಿಡುಗಡೆಗೆ ಸಜ್ಜುಗೊಂಡಿದೆ.
ವಂದನ್ ಎಂ ನಿರ್ಮಾಣದ ಹಾಗೂ ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತಮಟೆ’ ಚಿತ್ರದ ಟೀಸರ್ ಹಾಗೂ ಹಾಡುಗಳು ಈಚೆಗೆ ಬಿಡುಗಡೆ ಕಂಡಿತು.
ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ತಮಟೆ ನಮ್ಮ ಜಾನಪದ ವಾದ್ಯ. ಅದರ ಸುತ್ತಲೂ ಹೆಣೆಯಲಾಗಿರುವ ಕಥೆಯಲ್ಲಿ ಮಣ್ಣಿನ ಸೊಗಡಿನ ನಂಟಿದೆ ಹಾಗೂ ಉತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರವು ಇದಾಗಿದೆ ಎಂದರು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್.
ಇದೊಂದು ಗ್ರಾಮೀಣ ಭಾಗದ ಸೂಕ್ಷ್ಮ ಸಂವೇದನೆ ಇರುವ ಚಿತ್ರ. ತಮಟೆ ವಾದ್ಯಗಾರನೊಬ್ಬನ ಜೀವನಾಧಾರಿತ ಈ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ನಟಿಸಿರುವೆ ಹಾಗೂ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ ಎಂಬ ವಿವರ ನೀಡಿದರು ಮದನ್ ಪಟೇಲ್.
ಬಹಳ ಸಮಯದ ಬಳಿಕ ಸಂಗೀತದ ನಿರ್ದೇಶನ ಮಾಡಿರುವೆ ಮತ್ತು ಚಿತ್ರಕಥೆಯನ್ನು ನಾನೇ ಬರೆದಿರುವೆ ಎಂದರು ಮದನ್ ಪಟೇಲ್.
ತಮಟೆ ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆ ಪಡೆದಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯುವ ಹಂಬಲವೂ ಇದೆ ಎಂದರು.
ನಿರ್ದೇಶಕ ಹಾಗೂ ನಟ ಮಯೂರ್ ಪಟೇಲ್ ದುಬೈ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿರುವ ಮಾಹಿತಿಗಳು ಬಂದವು.
ಕೆಲ ದಿನಗಳ ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಟೆ ಚಿತ್ರದ ಪ್ರಚಾರ ಸಭೆಗೆ ಆಗಮಿಸಿ ಶುಭ ಕೋರಿದ್ದರು.
ಟೀಸರ್ ಬಿಡುಗಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಡುವುದಿತ್ತು. ಅನಿವಾರ್ಯ ಕಾರಣಗಳಿಂದ ಅವರು ಆಗಮಿಸಿರಲಿಲ್ಲ.
ನಟಿ ತೇಜಸ್ವಿನಿ, ನಟ ಕಾವೇರಿ ಶ್ರೀಧರ್ , ಮುತ್ತುರಾಜ್ ಹಾಗೂ ದಿನಕರ್ ಈ ಸಂದರ್ಭದಲ್ಲಿ ಹಾಜರಿದ್ದರು.