* ಧರ್ಮಣ್ಣ ಹೀರೋ
* ಹಾಸ್ಯವೇ ಪ್ರಧಾನ
ಹಾಸ್ಯ ಪಾತ್ರಗಳ ಮೂಲಕವೇ ಹೆಸರಾಗಿರುವ ಧರ್ಮಣ್ಣ ಮುಖ್ಯ ಪಾತ್ರದಲ್ಲಿರುವ ‘ರಾಜಯೋಗ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.
ರಾಜಯೋಗ ಎಂಬುದು ಎಲ್ಲರಿಗೂ ಅಪ್ಯಾಯಮಾನ ಪದ. ಮನುಷ್ಯನ ಜೀವನದಲ್ಲಿ ಶ್ರೀಮಂತಿಕೆ, ಪದವಿ ಎಲ್ಲವೂ ಬಂದಾಗ ರಾಜಯೋಗ ಬಂದಿದೆ ಎಂದು ಹೇಳುವುದು ರೂಢಿ.
ಈ ಚಿತ್ರದಲ್ಲಿ ರಾಜಯೋಗದ ಕಲ್ಪನೆಗಳನ್ನು ಹೇಳಲಾಗಿದೆ. ಮುಖ್ಯವಾಗಿ ಒಂದು ಗುರಿಯ ಜೊತೆಗೆ ಶ್ರಮಪಡುತ್ತಾ ಹೋದರೆ ಒಂದಲ್ಲ ಒಂದು ದಿನ ರಾಜಯೋಗ ಬರುತ್ತದೆ ಎಂಬುದು ಪರಿಕಲ್ಪನೆ ಎಂದು ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ವಿವರಿಸಿದರು.
ಅದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ. ಇಡೀ ಚಿತ್ರತಂಡ ಉತ್ಸಾಹದಿಂದ ಭಾಗಿಯಾಗಿತ್ತು.
ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಧರ್ಮಣ್ಣ ಅವರ ಹಾಸ್ಯದ ಮೊನಚು ಎಲ್ಲರಿಗೂ ಪರಿಚಯವಾಗಬೇಕಿದೆ. ಇಲ್ಲಿ ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ. ಮಗನ ಪಾತ್ರ ತಂದೆಗೆ ಬುದ್ಧಿ ಕಲಿಸುತ್ತದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಮೂರು ಹಂತಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈಗ ಚಿತ್ರೀಕರಣ ನಂತರದ ಕೆಲಸಗಳು ನಡೆಯುತ್ತಿವೆ ಎಂದರು.
‘ರಾಮಾ ರಾಮಾ ರೇ’ ಚಿತ್ರದ ಪಾತ್ರ ನಾನು ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸಿದೆ ಎಂದರು ಧರ್ಮಣ್ಣ. ಈ ಚಿತ್ರದಲ್ಲಿ ಕಥೆ ಮತ್ತು ನಿರ್ದೇಶಕರು ಮುಖ್ಯರಾಗಿದ್ದು, ಆನಂತರದಲ್ಲಿ ಮೂರನೇಯ ಪಾತ್ರವನ್ನು ನಿರ್ವಹಿಸಿರುವೆ ಎಂದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಲ್ಲಿ ಹಾಸ್ಯ, ಭಾವುಕತೆ ಎಲ್ಲವೂ ಇದೆ. ಮುಖ್ಯವಾಗಿ ಸಂಬಂಧಗಳ ಮೌಲ್ಯಗಳನ್ನು ಹೇಳಲು ಹಾಸ್ಯವನ್ನು ಬಳಸಿಕೊಳ್ಳಲಾಗಿದೆ ಎಂದರು ಧರ್ಮಣ್ಣ.
ಧರ್ಮಣ್ಣ ಎದುರು ನಿರೀಕ್ಷಾರಾವ್ ನಟಿಸಿದ್ದು, ನಾಗೇಂದ್ರ ಶಾ, ಕೃಷ್ಣಮೂರ್ತಿ ಕವತಾರ್, ಶ್ರೀನಿವಾಸ ಗೌಡ, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ಅಕ್ಷಯ್ ರಿಶಭ್ ಸಂಗೀತ, ವಿಷ್ಣುಪ್ರಸಾದ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ ಚಿತ್ರಕ್ಕಿದೆ ಎಂಬ ಮಾಹಿತಿಗಳು ಬಂದವು.