ಶ್ರದ್ಧೆ ಮತ್ತು ಶಕ್ತಿ ಸೇರಿಕೊಂಡರೆ ಏನಾಗುತ್ತದೆ..
ಹೆಚ್ಚಿನ ಸಂದರ್ಭದಲ್ಲಿ ಗೆಲುವಾಗುತ್ತದೆ.. ಇಲ್ಲಿ ಕೂಡ ಒಂದು ಚಿತ್ರ ಬಿಡುಗಡೆಗೆ ಮುನ್ನವೇ ಗೆಲುವಿನ ಭರವಸೆಯನ್ನು ಹರಿಸಿದೆ..
ಅದೇ ಲಂಕಾಸುರ..!
ಟೈಗರ್ ಪ್ರಭಾಕರ್ ಅವರ ಪುತ್ರ ಮರಿ ಟೈಗರ್ ಎಂದೇ ಬಿರುದಾಂಕಿತ ವಿನೋದ್ ಪ್ರಭಾಕರ್ ಈಗ ಹೊಸ ಸಾಹಸಗಳಲ್ಲಿ ಮಿಂದೆದ್ದಿದ್ದಾರೆ..
ಟೈಗರ್ ಹೆಸರಿನಲ್ಲಿ ‘ಟೈಗರ್ ಟಾಕೀಸ್’ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವುದು ಸಾಹಸಗಳ ಮೊದಲ ಹೆಜ್ಜೆ ಮತ್ತು ಅದರ ಮೂಲಕ ‘ಲಂಕಾಸುರ’ ಎಂಬ ಸಿನಿಮಾ ನಿರ್ಮಿಸಿ ವಿನೂತನ ಸಾಹಸ ಮೆರೆದಿರುವುದು ಎರಡನೇ ಹೆಜ್ಜೆ ಹಾಗೂ ಪತ್ನಿ ನಿಶಾ ಅವರೊಂದಿಗೆ ವಿನಮ್ರ ನಡವಳಿಕೆ ಮೂಲಕ ಚಿತ್ರತಂಡದ ಮತ್ತು ಚಿತ್ರರಸಿಕರ ಮನ ಗೆದ್ದಿರುವುದು ಮೂರನೇ ಹೆಜ್ಜೆ.
ಮೂರು ಹೆಜ್ಜೆಗಳ ಸಂಬಂಧವಾದ ಧರ್ಮಪತ್ನಿ ನಿಶಾ ಅವರ ಜೊತೆ ಅದ್ದೂರಿಯ ಸಮಾರಂಭದಲ್ಲಿ ಸಾಹಸದ ವಿಷಯ ಹಂಚಿಕೊಂಡರು ಮರಿ ಟೈಗರ್ ವಿನೋದ್ ಪ್ರಭಾಕರ್.
ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್, ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್, ಡೈನಾಮಿಕ್ ಸ್ಟಾರ್ ದೇವರಾಜ್, ಗರ್ಜನೆ ಮಾಡುವ ಆರ್ಮಗಮ್ ಖ್ಯಾತಿಯ ರವಿಶಂಕರ್, ಹಿರಿಯ ನಟ ಎಂ.ಎಸ್.ಉಮೇಶ್, ನಿರ್ಮಾಪಕ ಯತೀಶ್ ರಾಕ್ ಲೈನ್, ಯುವ ಪೀಳಿಗೆ ನಟರಾದ ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್, ವಿಲನ್ ಆಗಿ ಗಮನ ಸೆಳೆಯುತ್ತಿರುವ ಬ.ಲ.ರಾಜವಾಡಿ ಮರಿಟೈಗರ್ ಸಾಹಸ ವಿನೋದಗಳನ್ನು ಹಾಡಿ ಹೊಗಳಿದರು.
ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಪದಾಧಿಕಾರಿಗಳಾದ ಸುಂದರ್ ರಾಜ್, ಜೈಜಗದೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ನಿರ್ಮಾಪಕ ರಾಮಮೂರ್ತಿ ಹಾಗೂ ಇತರರು ಟೈಗರ್ ಜೊತೆಗೆ ಮರಿಟೈಗರ್ ಗುಣಗಾನ ಮಾಡಿದರು.
ಚಿತ್ರತಂಡವರೇ ಆದ ಸಂಗೀತ ನಿರ್ದೇಶಕ ವಿಜಯ್ ಕೃಷ್ಣ, ಛಾಯಾಗ್ರಾಹಕ ಸುಜ್ಞಾನ್, ಸಾಹಸ ನಿರ್ದೇಶಕರಾದ ಡಿಫರೆಂಟ್ ಡ್ಯಾನಿ, ಅರ್ಜುನ್, ನಟಿಯರಾದ ಪಾರ್ವತಿ, ಆದ್ಯಪ್ರಿಯ ಹಾಗೂ ನಿರ್ದೇಶಕ ಪ್ರಮೋದ್ ಕುಮಾರ್ ನಿರ್ಮಾಪಕರ ಔದಾರ್ಯ ಕೊಂಡಾಡಿದರು.
ಅದು ಟ್ರೈಲರ್ ಬಿಡುಗಡೆಯ ಸಮಾರಂಭವೂ ಹೌದು.. ಟ್ರೈಲರ್ ನೋಡಿದವರು ಈ ಚಿತ್ರ ಖಂಡಿತವಾಗಿ ಕನ್ನಡದ ಭರವಸೆ ಎಂದುಕೊಂಡರು. ಮುಖ್ಯವಾಗಿ ವಿ.ರವಿಚಂದ್ರನ್ ಮಾತನಾಡುವಾಗ ‘ಉತ್ಸಾಹದ ಹಿಂದೆ ಒಳ್ಳೆ ಉದ್ದೇಶ ಇದ್ರೆ ಖಂಡಿತವಾಗಿ ಉತ್ಸವ ಮಾಡಬಹುದು’ ಎಂದು ನೇರವಾಗಿ ಚಿತ್ರದ ಗೆಲುವಿಗೆ ಮುನ್ನುಡಿ ಬರೆದು ಬಿಟ್ಟರು.
ನಿಮ್ಮ ಅಪ್ಪ ಟೈಗರ್ ಪ್ರಭಾಕರ್ ಅವರ ತೊಡೆಯ ಮೇಲೆ ಬೆಳೆದವನು ನಾನು.. ಅವರು ಎಷ್ಟೇ ಚಿತ್ರದಲ್ಲಿ ಹೀರೋ ಆದರೂ ‘ಪ್ರೇಮಲೋಕದ ಪ್ರಿನ್ಸಿಪಾಲ್’ ಎಂದು ಕ್ರೇಜಿಸ್ಟಾರ್ ಹೇಳಿದ ಗಳಿಗೆಯೂ ಥ್ರಿಲ್ಲಿಂಗ್ ಕ್ಷಣವಾಗಿತ್ತು. ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಮಾಡಿ ಆರಂಭದಲ್ಲೇ ನೀವು ಗೆದ್ದಿದ್ದೀರಾ ಎಂದು ವಿನೋದ್ ಹಾಗೂ ನಿಶಾ ಅವರನ್ನು ಅಭಿನಂದಿಸಿದರು ರವಿಮಾಮ.
ಮಾಧ್ಯಮದ ಪ್ರತಿಯೊಬ್ಬರೂ ನನ್ನ ಬೆಳವಣಿಗೆ ಅಭಿನಂದಿಸಿದ್ದಾರೆ. ಮುಖ್ಯವಾಗಿ ನನ್ನ ತಂದೆಯ ಮೇಲಿನ ಅಭಿಮಾನವನ್ನು ನನ್ನ ಮೇಲೆ ಧಾರೆ ಎರೆದಿದ್ದಾರೆ ಎಂದು ಭಾವುಕರಾದವರು ವಿನೋದ್ ಪ್ರಭಾಕರ್.
ದೇವರಾಜ್ ಡೈಲಾಗ್ ಗೆ ರವಿಶಂಕರ್ ಧ್ವನಿ ವಿನೂತನ ಮತ್ತು ರೋಚಕವಾಗಿತ್ತು. ರವಿ ಸರ್ ಅವರ ಹಠವಾದಿ ಮೂಲಕ ನಾನು ಕಲಿತ್ತಿದ್ದು ಎಂದು ಹೇಳಿಕೊಂಡಿದ್ದು ನಿರ್ದೇಶಕ ಪ್ರಮೋದ್ ಕುಮಾರ್.
ವಿನೋದ್ ಪ್ರಭಾಕರ್ ಹಾಗೂ ನಿಶಾ ಮನೆಯ ಸಂತೋಷಕೂಟದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಹೇಗೆ ಸತ್ಕರಿಸಬೇಕು ಎಂಬುದಕ್ಕೆ ಮಾದರಿಯಾಗಿದ್ದರು.