ನೃತ್ಯ ಕಲಾವಿದೆಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಗೌರಿಶ್ರೀ ಈಗ ನಿರ್ದೇಶನದ ಕ್ಯಾಪ್ ಹಾಕಿದ್ದಾರೆ ಮಾತ್ರವಲ್ಲ; ಚಿತ್ರದ ನಿರ್ಮಾಪಕಿ ಕೂಡ ಆಗಿದ್ದಾರೆ.
ಅದು ಜನರಕ್ಷಕ.. ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದರು. ಮುಖ್ಯವಾಗಿ ಅದು ಪುನೀತ್ ರಾಜ್ಕುಮಾರ್ ಅವರನ್ನು ನೆನೆಯುವ ವಿಶೇಷ ಕಾರ್ಯಕ್ರಮವಾಗಿತ್ತು.
ಚಿತ್ರದ ಹೆಸರು ಜನರಕ್ಷಕ.. ಅದಕ್ಕೆ ನಾ ಭಕ್ಷಕ ಎಂಬ ಟ್ಯಾಗ್ ಲೈನ್ ಇದೆ. ಪ್ರಧಾನ ಭೂಮಿಕೆಯಲ್ಲಿ ಗೌರಿಶ್ರೀ ಅವರೇ ಅಭಿನಯಿಸುತ್ತಿದ್ದು, ರಘು, ಸೋಮಸುಂದರ್, ಪ್ರಿಯಾ, ನಟರಾಜ್, ತ್ರಿಶೂಲ್, ರತ್ನಮಾಲಾ, ನಾಗೇಂದ್ರ ಹಾಗೂ ಭಾಗ್ಯಶ್ರೀ ಇತರ ತಾರಾಗಣದಲ್ಲಿ ಇದ್ದಾರೆ.
ಚಿತ್ರದ ಶೀರ್ಷಿಕೆ ಅನಾವರಣದ ಜೊತೆಗೆ ಟೀಸರ್ ಕೂಡ ಬಿಡುಗಡೆ ಕಂಡಿತು. ಪಿಕೆಎಚ್ ದಾಸ್ ಛಾಯಾಗ್ರಹಣ, ದೇವದಾಸ್ ಸಂಗೀತ, ಫೈವ್ ಸ್ಟಾರ್ ಗಣೇಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಸರಳತೆ, ಪಾರ್ವತಮ್ಮ ರಾಜ್ ಕುಮಾರ್ ಅವರ ಹೃದಯ ವೈಶಾಲ್ಯ ಹಾಗೂ ಪುನೀತ್ ರಾಜ್ಕುಮಾರ್ ಅವರ ಕೊಡುಗೈ ಗುಣಗಳನ್ನು ನೆನೆದರು.
ನಟ ಕರಿಸುಬ್ಬು ಕಲಾವಿದರಾಗಿ ತಮ್ಮ ಅನುಭವ ಹಾಗೂ ಅಣ್ಣಾವ್ರ ಅನುಕರಣೆ ಮೊದಲಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು. ಫೈವ್ ಸ್ಟಾರ್ ಗಣೇಶ್ ವಿಶೇಷವಾಗಿ ಪುನೀತ್ ಅವರ ಗುಣಗಾನ ಮಾಡಿದರು.
ವಿ2 ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಗೌರಿಶ್ರೀ, ತಾವು ನೃತ್ಯದ ಶಾಲೆ ಆರಂಭ ಮಾಡುವಾಗ ಪುನೀತ್ ರಾಜ್ ಕುಮಾರ್ ಹೇಗೆ ಬೆಂಬಲ ಕೊಟ್ಟು ಪ್ರೋತ್ಸಾಹ ನೀಡಿದರೆಂಬುದನ್ನು ವಿವರಿಸಿದರು.
ಈ ಚಿತ್ರದ ಮೂಲಕ ಕನಸುಗಳನ್ನು ಈಡೇರಿಕೊಳ್ಳುವ ಆಶಯವಿದೆ. ಅದಕ್ಕೆ ಜೊತೆಗಿರುವ ಅನೇಕರ ಸಹಕಾರವಿದೆ ಎಂದು ಅನೇಕ ಹೆಸರುಗಳನ್ನು ಮೆಲುಕು ಹಾಕಿದರು ನಿರ್ದೇಶಕಿ ಗೌರಿಶ್ರೀ.
ಹಿಂದೆ ಒಮ್ಮೆ ವಿಷ್ಣು ಸರ್ ತದ್ರೂಪಿಯಂತೆ ಇದ್ದ ಕಲಾವಿದರನ್ನು ನೋಡಿದ್ದೆ. ಮುಂದೊಂದು ದಿನ ಅವರಿಗಾಗಿ ಸಿನಿಮಾ ಮಾಡಬೇಕು ಎಂದುಕೊಂಡೆ. ಆ ಕಾಲ ಈಗ ಕೂಡಿ ಬಂದಿದೆ ಎಂದು ಹೇಳುತ್ತಾ ಹೋದರು..