Snehapriya.com

June 8, 2025

ಕಾಲದ ಜೊತೆ ಕೋಮಲ ಚಂಚಲ

Social Share :

ಕೋಮಲ್ ಮತ್ತೆ ಬಣ್ಣ ಹಚ್ಚಿದ್ದಾರೆ..

ಇಲ್ಲಿಯವರೆಗೆ ಏಕೆ ಅಜ್ಞಾತ ವಾಸ ಅನುಭವಿಸುತ್ತಿದ್ದರು ಎಂಬುದಕ್ಕೆ ಅವರೇ ಉತ್ತರ ನೀಡಿದ್ದಾರೆ..

ಅದು ಕೇತು ಪ್ರಭಾವ..!

ನವರಸ ನಾಯಕ ಜಗ್ಗೇಶ್ ಜ್ಯೋತಿಷ ಶಾಸ್ತ್ರದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡವರು.. ಅವರು ‘ಸದ್ಯಕ್ಕೆ ಸುಮ್ಮನಿರು ತಮ್ಮ ಈಗ ಕೇತುವಿನ ಪ್ರಭಾವವಿದೆ’ ಎಂದಿದ್ದರಂತೆ..

ಅದರಂತೆ ಕಾಯ್ದು ಕಾಯ್ದು ಕೊನೆಗೆ ಕಾಲದ ಜೊತೆ ಬಂದಿದ್ದಾರೆ ಕೋಮಲ್ ಕುಮಾರ್. ಹಾಗಾಗಿ ಚಿತ್ರದ ಹೆಸರು

ಕಾಲಾಯ ನಮಃ..!

ಇದು ತೀರಾ ಆಕಸ್ಮಿಕ. ಕಾಲ ಭೈರವ ಸ್ವಾಮಿಯ ಪರಮ ಭಕ್ತರಾದ ಕೋಮಲ್ ಅವರಿಗೆ ಅದೇ ಸ್ವಾಮಿಯ ಹೆಸರು ಸಿಕ್ಕಿದೆ.

ಇದಿಷ್ಟು ವಿವರ ಸಿಕ್ಕಿದ್ದು ಕಂಠೀರವ ಸ್ಟುಡಿಯೋ ಆವರಣದಲ್ಲಿ. ಚಿತ್ರದ ಮುಹೂರ್ತ ನಡೆದ ಶುಭ ಗಳಿಗೆಯಲ್ಲಿ..

ಅದೇ ಕಾಲಾಯ ನಮಃ

ಸದಾ ಕ್ರಿಯಾಶೀಲ ನಡೆಯ ಕೋಮಲ್ ಕೆಲ ವರ್ಷಗಳೇ ಸುಮ್ಮನಿದ್ದರು ಎಂಬುದು ಅಚ್ಚರಿ. ಆದರೆ 2020 ಎಂಬ ಅವರ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ದವಿದೆ ಎಂಬುದು ಬೇರೆ ಮಾತು.

ಹಾಸ್ಯವಲ್ಲದೆ ಮನೋಜ್ಞ ಅಭಿನಯವನ್ನೂ ನೀಡಬಲ್ಲೆ ಎಂಬುದನ್ನು ನಿರೂಪಿರುವ ಮಹಾನ್ ಕಲಾವಿದ ಕೋಮಲ್, ಅದೇ ರೀತಿ ಸಾಹಸ, ಡ್ಯಾನ್ಸ್ ಕೂಡ ಮಾಡಬಲ್ಲ ಬಹುಮುಖ ಪ್ರತಿಭೆ. ಅವರು ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಅಣ್ಣನ ಮಗ ಯತಿರಾಜ್ ಸಮಾನಾಂತರ ಪಾತ್ರದಲ್ಲಿರುವುದು ವಿಶೇಷ.

ಸಹೋದರ ಕೋಮಲ್ ಹಾಗೂ ಮಗ ಯತಿರಾಜ್ ಚಿತ್ರಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ ನವರಸ ನಾಯಕ ಜಗ್ಗೇಶ್. ಕೋಮಲ್ ಬಗ್ಗೆ ಮಾತನಾಡುತ್ತಾ, ಅವನಿಗೆ ಕೇತು ಪ್ರಭಾವ ಇರುವುದಾಗಿ ಹೇಳಿದ್ದೆ. ಅದನ್ನು ನನ್ನ ತಮ್ಮ ಪಾಲಿಸಿದ್ದು ವಿಶೇಷ. ಮಗ ಯತಿ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ಕೊಟ್ಟಿದೆ ಎಂದರು ಜಗ್ಗೇಶ್.

ಕೋಮಲ್ ಅವರ ಪತ್ನಿ ಅನುಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮತಿವಣ್ಣನ್ ನಿರ್ದೇಶನ ಮಾಡುತ್ತಿದ್ದಾರೆ. ಕೋಮಲ್ ಫೇವರಿಟ್ ಆಗಿರುವ ಎಮಿಲ್ ಸಂಗೀತ ನೀಡುತ್ತಿದ್ದಾರೆ ಎಂಬ ವಿವರಗಳು ಬಂದವು.

ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಇತರ ಪಾತ್ರಗಳಲ್ಲಿ ಇದ್ದಾರೆ‌. ಒಂದು ಉತ್ತಮ ಕಥೆಯನ್ನು ಹೊಂದಿರುವ ಚಿತ್ರವಿದು ಎಂದರು ನಿರ್ದೇಶಕ ಮತಿವಣ್ಣನ್.

ಅಂದ ಹಾಗೆ ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕ. ಸುಚೇಂದ್ರ ಪ್ರಸಾದ್, ತಿಲಕ್ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *