ಇದು ಹೊಸಬರ ದೊಡ್ಡ ಪ್ರಯತ್ನ. ಹಾಗಾಗಿ ಪ್ಯಾನ್ ಇಂಡಿಯಾ ದೊಡ್ಡ ಚಿತ್ರದ ಎದುರು ಬಿಡುಗಡೆಗೆ ಸಜ್ಜಾಗಿದೆ.
ಹೆಸರು ಧೀರ ಭಗತ್ ರಾಯ್..!
ಬರುವ ತಿಂಗಳು ಅಂದರೆ ಡಿಸೆಂಬರ್ 6 ಕ್ಕೆ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಎದುರು ತೆಲುಗು ಚಿತ್ರ ‘ಪುಷ್ಪ-2’ ಬಿಡುಗಡೆ ಕಾಣುತ್ತಿದೆ. ಹಾಗಾಗಿ ಕನ್ನಡ ಚಿತ್ರಕ್ಕೆ ಆದ್ಯತೆ ಇರಲಿ ಎಂಬುದು ಚಿತ್ರ ತಂಡದ ಒಕ್ಕೊರಲ ಒತ್ತಾಯ.
ಆದರೆ ‘ಪುಷ್ಪ-2’ ವಿತರಕರಿಂದ ಉಡಾಫೆಯ ಉತ್ತರ ಬಂದಿರುವುದು ಚಿತ್ರತಂಡವನ್ನು ಕೆರಳಿಸಿದೆ ಎಂಬುದು ಮಾತು. ಈಚೆಗೆ ನಡೆದ ಚಿತ್ರದ ಪ್ರಚಾರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಹಾಗೆ ನೋಡಿದರೆ ಇದು ಜೈ ಭೀಮ್, ಕಾಟೇರ ಮಾದರಿಯ ಸಿನಿಮಾ. ಕಥೆ ಮತ್ತು ತಾಂತ್ರಿಕ ವಿಷಯದಲ್ಲಿ ಯಾವ ದೊಡ್ಡ ಚಿತ್ರಗಳಿಗೂ ಕಡಿಮೆ ಇಲ್ಲ. ಹಾಗಾಗಿ ದೊಡ್ಡ ಚಿತ್ರಕ್ಕೆ ಸವಾಲು ಹಾಕಿದೆ ಎಂಬುದು ಚಿತ್ರತಂಡದ ಮಾತು.
ಹೊಸ ನಿರ್ದೇಶಕ ಕರ್ಣನ್ ಈ ಚಿತ್ರಕ್ಕೆ ಕಥೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಕೇಶ್ ದಳವಾಯಿ ಮುಖ್ಯ ಪಾತ್ರದಲ್ಲಿದ್ದು, ಇವರಿಗೆ ಇದು ಮೊದಲ ಚಿತ್ರ. ಅವರ ಜೊತೆ ಹೊಸಬರೇ ಆದ ಸುಚರಿತಾ ನಟಿಸಿದ್ದಾರೆ.
ಜೊತೆಗೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಎಚ್.ಸಿ.ಹರಿರಾಮ್ , ಕೆ.ಎಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ ಹಾಗೂ ಇತರರ ತಾರಾ ಬಳಗವಿದೆ. ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಸೆಲ್ಪಂ ಜಾನ್ ಛಾಯಾಗ್ರಹಣವಿದೆ. ಎನ್.ಎಂ ವಿಶ್ವ ಈ ಚಿತ್ರದ ಸಂಕಲನಕಾರ.