Snehapriya.com

June 8, 2025

ಚಿತ್ರನ್ನ ಮೊಸರನ್ನ ತಿಂದು ಬೆಳೆದೆ ಲೀಲಾವತಿ ಹೇಳಿದ ನೆನಪುಗಳು..

Social Share :

 

(ಹಿರಿಯ ನಟಿ ಲೀಲಾವತಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ.
ಕ್ರಿಸ್ ಮಸ್ ಹಾಗೂ ಲೀಲಾವತಿ ಅಮ್ಮನವರ ಹುಟ್ಟುಹಬ್ಬಕ್ಕೆ ಹಿಂದಿನ ಸಂದರ್ಶನದ ಈ ನೆನಪುಗಳು..)

ಅನೇಕ ಕಷ್ಟ ಕೋಟಲೆಗಳಲ್ಲಿ ನಲುಗಿದರೂ ಆಕೆಯ ಮನಸ್ಸು ಯಾವಾಗಲೂ ಗರಿ ಬಿಚ್ಚಿ ಹಾರುತ್ತದೆ..


ಚಿತ್ರರಂಗದ ಸವಿ ನೆನಪುಗಳು ಅನೇಕ ನೋವುಗಳನ್ನು ಮರೆಸುತ್ತದೆ..

‘ಹಾರುತ ದೂರಾ.. ದೂರಾ..
ಮೇಲೆರುವ ಬಾರಾ.. ಬಾರಾ..
ನಾವಾಗುವ ಚಂದಿರ ತಾರಾ..’
(ಚಿತ್ರ : ರಾಣಿ ಹೊನ್ನಮ್ಮ)

ಹೊಟ್ಟೆ ಪಾಡಿಗಾಗಿ ಸಿನಿಮಾ ರಂಗಕ್ಕೆ ಬಂದು ತಮ್ಮ ಅಮೋಘ ನಟನೆಯ ಮೂಲಕ ಜನಮನ ಗೆದ್ದಿರುವ ಹಿರಿಯ ನಟಿಯ ಹೆಸರು ಲೀಲಾವತಿ..!

ಕನ್ನಡ ಚಿತ್ರರಂಗದ ಅನುಪಮ ತಾರೆಯರ ಪೈಕಿ ನಾಯಕಿ ಮತ್ತು ತಾಯಿ ಎರಡೂ ಆಗಿ ವಿಜೃಂಭಿಸಿದ ನಟಿಯರ ಪೈಕಿ ಲೀಲಾವತಿ ಯಾವತ್ತೂ ವಿಶೇಷ ಮತ್ತು ವಿರಳ..

ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಹೊಂದಿರುವ ಲೀಲಾವತಿ ಅಮ್ಮನವರು ಸದಾ ಕಾಲವೂ ಕನ್ನಡದ ಸಿನಿ ಪ್ರೇಮಿಗಳ ಅಚ್ಚು ಮೆಚ್ಚು..

ದಕ್ಷಿಣ ಕನ್ನಡದ ಭಾಗದಲ್ಲಿ ಹುಟ್ಟಿ ಬೆಳೆದು ಉದ್ಯೋಗ ಹುಡುಕುತ್ತಾ ಬಂದು ಸುಬ್ಬಯ್ಯ ನಾಯ್ಡು ಅವರ ಕಂಪನಿಯಲ್ಲಿ ಕಲಾವಿದೆಯಾಗಿ ಸೇರ್ಪಡೆಗೊಂಡ ಲೀಲಾವತಿ ಅವರು ಮೊದಲು ಅಭಿನಯಿಸಿದ್ದು ‘ಭಕ್ತ ಪ್ರಹ್ಲಾದ’ ಚಿತ್ರದ ಚಿಕ್ಕದಾದ ‘ಸಖಿ’ಯ ಪಾತ್ರದಲ್ಲಿ..

ಮುಂದೆ ಆ ಸಖಿಯ ಪಾತ್ರವೇ ಅವರಿಗೆ ಮುಖ್ಯ ಪಾತ್ರವನ್ನು ಕರುಣಿಸಿತು.  ನಂತರ  ‘ಮಾಂಗಲ್ಯ ಯೋಗ’ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಲೀಲಾವತಿ ಅಭಿನಯಿಸಿದರು.

ಮುಂದೆ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರೊಟ್ಟಿಗೆ ‘ರಾಣಿ ಹೊನ್ನಮ್ಮ’ ಚಿತ್ರದ ಅಭಿನಯಿಸಿದ ಬಳಿಕ ಅವರಿಗೆ ಅವಕಾಶಗಳ ಸುರಿ ಮಳೆಯೇ ಆಯಿತು. ಇದು ಆಗಿನ ಕಾಲಕ್ಕೆ ನಟಿಯರಿಲ್ಲದೆ ಬಂದವೋ.. ಅಥವಾ ಪ್ರತಿಭೆಗೆ ಸಿಕ್ಕ ಪುರಸ್ಕಾರವೋ ಎಂದು ಪ್ರಶ್ನೆ ಮಾಡುವ ಲೀಲಾವತಿ ಅವರಿಗೆ ತಾವೊಬ್ಬ ಅದ್ಭುತ ಕಲಾವಿದೆ ಎಂಬ ಯಾವ ಅಹಂ ಕೂಡ ಇಲ್ಲ..

‘ಜಾಲಿ ಮರದ ಕೊಂಬೆ’ಯ ರೀತಿಯಲ್ಲಿ ಜೀವನ ನಡೆಸಿದೆ ಎಂದು ಇಂದಿಗೂ ಹೇಳಿಕೊಳ್ಳುವ ಅವರು, ಹಿಂದೆಲ್ಲಾ ಹೊಟೇಲ್ ಅದು ಇದು ಇರಲಿಲ್ಲ.. ಚಿತ್ರನ್ನ ಮೊಸರನ್ನ ಪಾಕೇಟ್ ಗಳಲ್ಲಿ ಬರುತ್ತಿದ್ದವು. ಕಲೆಯ ಬಗ್ಗೆ ಅಪಾರ ಪ್ರೀತಿ ಇದ್ದ ನನಗೆ ಇಂತಹ ವಿಷಯಗಳು ಬಾಧಿಸಲಿಲ್ಲ. ನಾನು ಈಗಲೂ ಚಿತ್ರನ್ನ ಮೊಸರನ್ನ ತಿಂದು ಬೆಳೆದವಳು ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಇದೆ ಎಂದಿದ್ದರು ಒಮ್ಮೆ ವಿನಮ್ರವಾಗಿ..

ಆಗ ನಾವು ಕಳೆದ ದಿನಗಳು ಇಂದಿಗೂ ನಮ್ಮೊಂದಿಗೆ ಇವೆ. ಏಕೆಂದರೆ ಚಿತ್ರನ್ನ ಮೊಸರನ್ನದ ಕಾಲದ ನೆನಪುಗಳೇ ರೋಮಾಂಚಕ. ಆ ದಿನಗಳಲ್ಲಿ ಎಲ್ಲರೊಳಗೂ ಪ್ರೀತಿ ತುಂಬಿ ತುಳುಕುತ್ತಿತ್ತು.

ಒಂದು ರೀತಿಯಲ್ಲಿ ಇದೆಲ್ಲಾ ದೇವರು ಕೊಟ್ಟ ಭಾಗ್ಯ. ಯಾವ ಜನ್ಮದ ಪುಣ್ಯವೋ ಏನೋ ಜನರು ಪ್ರೀತಿಸುವ ಕಲಾವಿದೆಯಾದೆ ಎಂದು ಹಿರಿಯ ಕಲಾವಿದೆ ಹೇಳುವಾಗ ಅವರಲ್ಲಿದದ್ದು ಮಾತೃ ಹೃದಯ..

ವರನಟ ಡಾ.ರಾಜ್ ಕುಮಾರ್ ಅವರು ಈ ನಾಡಿನ ಮಹಾನ್ ಸಂತ..
ಅದಕ್ಕೆ ಒಂದು ಘಟನೆ ನೆನಪಾಗುತ್ತಿದೆ. ಅದು ‘ಸಂತ ತುಕಾರಾಂ’ ಚಿತ್ರದ ಶೂಟಿಂಗ್ ಸಮಯ.

ಆಗೆಲ್ಲಾ ಹೆಚ್ಚು ಸೌಲಭ್ಯಗಳಿರಲಿಲ್ಲ.. ನೀರಿನಲ್ಲಿ ರಾಜ್ ಅವರಿದ್ದರು. ಅದು ಕೊರೆಯುವ ಚಳಿ ಬೇರೆ.. ಬೇರೆಯವರಾಗಿದ್ದರೆ; ಅದನ್ನು ನಿರಾಕರಿಸುತ್ತಿದ್ದರೋ ಏನೋ.. ಆದರೆ ರಾಜ್ ಮಾತ್ರ ಚಳಿಯ ಕೊರೆಯುವ ನೀರಿನಲ್ಲಿ ಬಹಳ ಹೊತ್ತು ಕಳೆದರು. ಆ ಸಂದರ್ಭದಲ್ಲಿ ಅವರ ಮುಖ ನೋಡುವಾಗ ಅಯ್ಯೋ ಎನಿಸುತ್ತಿತ್ತು. ಆ ಕ್ಷಣಕ್ಕೆ ಪಾತ್ರಕ್ಕೆ ನ್ಯಾಯವೊದಗಿಸುವುದಷ್ಟೇ ಅವರ ಕರ್ತವ್ಯವಾಗಿತ್ತು. ಅವರು ಅಷ್ಟೊಂದು ತಾದ್ಯಾತ್ಮದ ಗುಣ ಕಾಯ್ದುಕೊಂಡಿದ್ದರಿಂದಲೇ ಅಷ್ಟೊಂದು ಎತ್ತರಕ್ಕೆ ಬೆಳೆದರು..
ಎಂದು ಹೇಳುತ್ತಲೇ ನೆನಪಿನ ಬುತ್ತಿಯನ್ನು ಮತ್ತಷ್ಟು ತೆರೆದಿಟ್ಟರು..
(ಮುಂದುವರಿಯುವುದು)

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *