ಈಗ್ಗೆ ಹತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ಕಾಲ್ಗೆಜ್ಜೆ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಎ.ಬಂಗಾರು ಈಗ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.
ಕಾಲ್ಗೆಜ್ಜೆ ಚಿತ್ರವು ಕ್ಲಾಸಿಕ್ ನಿರೂಪಣೆಯಿಂದ ಜನಮನ ಗೆದ್ದಿತ್ತು. ಅಲ್ಲದೆ ರಾಜ್ಯ ಪ್ರಶಸ್ತಿ ಪಡೆದ ಚಿತ್ರ ಇದಾಗಿತ್ತು. ಈಗ ಅದೇ ಮಾದರಿಯ ನವಿರು ನಿರೂಪಣೆ ಚಿತ್ರ ಮಾಡುತ್ತಿರುವುದಾಗಿ ನಿರ್ದೇಶಕ ಎ.ಬಂಗಾರು ಪ್ರಕಟಿಸಿದರು.
ಅದು ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ. ಹಿರಿಯ ನಿರ್ದೇಶಕ ಎಸ್.ಮಹೇಂದರ್ ಶೀರ್ಷಿಕೆ ಅನಾವರಣ ಮಾಡಿ ಶಿಷ್ಯ ಎ.ಬಂಗಾರುಗೆ ಶುಭ ಹಾರೈಸಿದರು.
ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ನಿರ್ಮಾಣದ ಈ ಚಿತ್ರಕ್ಕೆ ಎ. ಬಂಗಾರು ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಈಚೆನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ವಿರಳವಾಗಿವೆ ಎಂದರು ಹಿರಿಯ ನಿರ್ದೇಶಕ ಎಸ್.ಮಹೇಂದರ್. ಹಿಂದೆ ಬಂಗಾರು ನಿರ್ದೇಶನ ಮಾಡಿದ್ದ ‘ಕಾಲ್ಗೆಜ್ಜೆ’ ಚಿತ್ರ ನೋಡಿ ಬಹಳವೇ ಖುಷಿಯಾಗಿತ್ತು. ಬಂಗಾರು ನಾನು ಇಷ್ಟಪಡುವ ಹುಡುಗ ಅವರ ಈ ಯೋಜನೆ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಈ ಚಿತ್ರವೊಂದು ಸುಮಧುರ ದೃಶ್ಯಕಾವ್ಯ..!
ಹಾಗೆಂದು ಹೇಳಿಕೊಂಡರು ನಿರ್ದೇಶಕ ಎ.ಬಂಗಾರು. ಸಂಗೀತ ಚಿತ್ರದ ಜೀವಾಳ. ಹಿಂದೆ ಕಾಲ್ಗೆಜ್ಜೆ ಚಿತ್ರಕ್ಕೆ ಸಂಗೀತ ನೀಡಿದ್ದ ಗಂಧರ್ವ ಅವರೇ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.
ಮೂರು ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಹಿರಿಯ ನಟಿ ಸುಹಾಸಿನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಕೊಟ್ಟರು ನಿರ್ದೇಶಕರು.
ಚಿತ್ರದ ಶೀರ್ಷಿಕೆ ಬಿಡುಗಡೆಯ ಸಲುವಾಗಿಯೇ ಹಾಡು ಮಾಡಲಾಗಿದೆ. ಮುಂದೆ ನವೆಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣ ನಡೆಯಲಿದೆ. ಪೃಥ್ವಿ ಅಂಬರ್ ಹಾಗೂ ಶ್ಯಾಲಿನಿ ಭಟ್ ಮುಖ್ಯ ಪಾತ್ರದಲ್ಲಿ ನಟಿಸುವ ಸಾಧ್ಯತೆಯ ಬಗ್ಗೆಯೂ ನಿರ್ದೇಶಕರು ವಿವರಿಸಿದರು.
ಈಚೆಗೆ ‘ಪದವಿ ಪೂರ್ವ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ರವಿ ಶ್ಯಾಮನೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಜೊತೆ ಹಲವು ಸ್ನೇಹಿತರು ಸೇರಿಕೊಂಡಿದ್ದಾರೆ. ಬಂಗಾರು ನನ್ನ ಹಲವು ವರ್ಷದ ಸ್ನೇಹಿತರು ಎಂಬ ನೆನಪುಗಳನ್ನು ಬಿಚ್ಚಿಟ್ಟರು ರವಿ ಶ್ಯಾಮನೂರು.
ಮಡಿಕೇರಿ (ಮಂಜು ಕರಗುವ ಸಮಯ) ಎಂಬ ಈ ಚಿತ್ರದ ನಿರ್ಮಾಣದಲ್ಲಿ ತಾವೂ ಕೈ ಜೋಡಿಸಿರುವುದಾಗಿ ಹೇಳಿಕೊಂಡರು ಶಿವಪ್ರಕಾಶ್. ಹಿಂದೆ ಕಾಲ್ಗೆಜ್ಜೆ ನೋಡಿ ಖುಷಿಯಾಗಿ ಮತ್ತೊಂದು ಸಿನಿಮಾ ಮಾಡಲು ಬಂಗಾರು ಅವರಿಗೆ ಅಡ್ವಾನ್ಸ್ ನೀಡಿದ್ದಾಗಿ ತಿಳಿಸಿದರು.
ಸಂಗೀತಮಯವಾದ ಚಿತ್ರಕ್ಕೆ ಗಂಧರ್ವ ಸಂಗೀತ ನೀಡುತ್ತಿದ್ದು, ಇದೊಂದು ಸುಮಧುರ ಪಯಣ ಮತ್ತು ಸವಾಲಿನ ಕೆಲಸ ಎಂದರು.
ಸಮಾರಂಭದಲ್ಲಿ ಗಣ್ಯರಾದ ಬಳಿಗಾರ್, ಮಹೇಂದ್ರ ಬಡಳ್ಳಿ ಸೇರಿದಂತೇ ಬಂಗಾರು ಅವರ ಹಿತೈಷಿಗಳು ಶುಭ ಹಾರೈಸಿದರು. ಕೊನೆಯಲ್ಲಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ ತಂಡಕ್ಕೆ ಶುಭ ಹಾರೈಸಿದರು.
ನಟಿ ಶಾಲಿನಿ ಭಟ್, ಭವಾನಿ ಪ್ರಕಾಶ್ ಮಾತನಾಡಿದರು. ಚಿತ್ರದಲ್ಲಿ
ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು, ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ.
ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಮೂವರು ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದಾರೆ. ಚಂದ್ರ-ಪ್ರಭ ಮತ್ತು ಯಾಸಿನ್ ಕ್ಯಾಮೆರಾ ಕೈಚಳಕವಿದೆ. ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಗಂಗಮ್ ರಾಜು ನೃತ್ಯ ನಿರ್ದೇಶನವಿದೆ. ದಿವ್ಯಾ ಭಾರತಿ ಈ ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಬಂದವು.