ಚಿತ್ರದ ಹೆಸರು ‘ಕಡಲ ತೀರದ ಭಾರ್ಗವ’ ಆದರೆ ಅದು ಶಿವರಾಮ ಕಾರಂತರಲ್ಲ..!
ಇಂತಹ ಶೀರ್ಷಿಕೆ ಕೊಡುವಾಗ ವಾಣಿಜ್ಯ ಮಂಡಳಿಯಲ್ಲಿ ಕುಳಿತವರು ಏಕೆ ಹಿಂದೆ ಮುಂದೆ ನೋಡುವುದಿಲ್ಲ ಎಂಬಷ್ಟರ ಮಟ್ಟಿಗೆ ಶೀರ್ಷಿಕೆಯೇ ಪ್ರಶ್ನೆಗಳನ್ನು ಒಡ್ಡುತ್ತದೆ..
ಸಮಾಧಾನದ ವಿಷಯವೆಂದರೆ, ಕಡಲ ತೀರದ ಭಾರ್ಗವ ಚಿತ್ರತಂಡ ಕ್ರಿಯಾಶೀಲ ಕೆಲಸದಲ್ಲಿ ಒಂದಷ್ಟು ವಿಭಿನ್ನ ನೆಲೆಯನ್ನು ಕಾಯ್ದುಕೊಂಡಿದೆ. ಭಾರ್ಗವ ಎಂಬುದು ಪರುಶರಾಮನಿಗೆ ಇರಬಹುದಾದ ಹೆಸರು. ಕಡಲ ತೀರದ ಭಾರ್ಗವ ಎಂಬುದಕ್ಕೆ ನಮ್ಮ ಬಳಿ ಅನೇಕ ಸಮರ್ಥನೆಗಳಿವೆ ಎಂದು ಹೇಳಿಕೊಂಡಿತು ಚಿತ್ರತಂಡ.
ಚಿತ್ರದ ಮುಖ್ಯ ಪಾತ್ರದಲ್ಲಿರುವ ಭರತ್ ಗೌಡ ಹಾಗೂ ವರುಣ್ ರಾಜ್ ನಿರ್ಮಾಪಕರೂ ಆಗಿದ್ದಾರೆ. ನಿರ್ಮಾಣದ ವಿಷಯದಲ್ಲಿ ಎದುರಾದ ಅಡ್ಡಿ ಆತಂಕಗಳ ಬಗ್ಗೆ ಹೇಳುತ್ತಲೇ.. ಇಬ್ಬರೂ ದೈಹಿಕ ಫಿಟ್ ನೆಸ್ ವಿಶೇಷತೆಗಳನ್ನು ಹೇಗೆ ಕಾಯ್ದುಕೊಳ್ಳಲಾಗಿದೆ ಎಂಬುದನ್ನು ವಿವರಿಸಿದರು.
ಕೊರೊನಾ ಆತಂಕದಲ್ಲಿ ಕಷ್ಟಗಳು ಎದುರಾದವು. ಸಿನಿಮಾ ಒಂದು ತಪ್ಪಸ್ಸು ಯಾವುದಕ್ಕೂ ಹೆದರಬೇಡಿ ಎಂಬ ಹಿತೈಷಿಗಳ ಮಾತನ್ನು ಉಲ್ಲೇಖಿಸಿ ಹೇಗೋ ಕಷ್ಟಪಟ್ಟು ಸಿನಿಮಾ ಮಾಡಿ ಮುಗಿಸಿದ್ದೇವೆ ಎಂದರು ಭರತ್ ಗೌಡ.
ನನ್ನದು ಅಚ್ಚರಿಯ ಪಾತ್ರ ಎಂದರು ಭಾರ್ಗವನ ಪಾತ್ರ ನಿರ್ವಹಿಸಿರುವ ವರುಣ್ ರಾಜ್.
ಪ್ರೀತಿ ಪ್ರೇಮ ಲಿವಿಂಗ್ ರಿಲೇಶನ್ಸ್ ಇಂತಹ ವಿಷಯಗಳ ಬಗ್ಗೆ ಸಿನಿಮಾ ಕುತೂಹಲ ಕಾಯ್ದುಕೊಂಡು ಅಚ್ಚರಿಯ ತಿರುವು ನೀಡುತ್ತಾ ಹೋಗುತ್ತದೆ ಎಂಬ ವಿವರಗಳು ಬಂದವು.
ಹಿರಿಯ ನಟ ಶ್ರೀಧರ್ ಅವರು ಮಾನಸಿಕ ತಜ್ಞ ಪಾತ್ರ ಮಾಡಿರುವುದಾಗಿ ಮಾಹಿತಿ ನೀಡಿದರು. ನಟಿ ಶೃತಿ ಪ್ರಕಾಶ್, ನನ್ನದು ಮುದ್ದಾದ ಪಾತ್ರ ಎಂದರು.
ಮತ್ತೊಬ್ಬ ನಟ ರಾಘವ್ ನಾಗ್ ಪೊಲೀಸ್ ಪಾತ್ರ ಎರಡು ಮೂರು ಶೆಡ್ ಗಳಲ್ಲಿ ಬರುತ್ತದೆ ಎಂಬ ವಿವರ ಕೊಟ್ಟರು. ಅಶ್ವಿನ್ ಹಾಸನ್ ಅವರಿಗೂ ವಿಶೇಷ ಪಾತ್ರವಿದೆ. ಆದರೆ ನಾನು ಆಡಿಷನ್ ನಲ್ಲಿ ಆಯ್ಕೆಯಾದವನು ಎಂಬ ವಿವರ ಅವರಿಂದ ಬಂತು..
ಚಿತ್ರದ ಮತ್ತೊಂದು ಅಚ್ಚರಿ ಎಂದರೆ ಅದು ಹಾಡುಗಳು.. ಅನಿಲ್ ಸಿ.ಜೆ
ಸಂಗೀತ ನಿರ್ದೇಶಕ. ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು ಎಲ್ಲವೂ ಲೈವ್ ನಲ್ಲಿ ಮಾಡಿದ ವಿವರ ಬಂತು. ಅಂದ ಹಾಗೆ ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆ ಆಡಿಯೋ ಹೊರತಂದಿದ್ದು, ಅಶ್ವಿನಿ ರಾಮ್ ಪ್ರಸಾದ್ ಹಾಡುಗಳ ಬಗ್ಗೆ ಹೊಗಳಿದರು. ಸಂಕಲನಕಾರ ಉಮೇಶ್, ಸಹ ನಿರ್ಮಾಪಕಿ ವೀಣಾ ಜಿ.ಕುಮಾರ್ ಇದ್ದರು.
ನಿರ್ದೇಶಕ ಪನ್ನಗಾ ಸೋಮಶೇಖರ್ ಚಿತ್ರಕ್ಕೆ ಕಡಲ ತೀರದ ಭಾರ್ಗವ ಎಂಬ ಶೀರ್ಷಿಕೆ ಏಕೆ ಎಂಬುದನ್ನು ಸಮರ್ಥಿಸಿಕೊಂಡರು.