ಪ್ಯಾನ್ ಇಂಡಿಯಾ ‘ಕಬ್ಜ’ ಚಿತ್ರದ ‘ನಮಾಮಿ..’ ಹಾಡು ಈಗ ಸದ್ದು ಮಾಡ ತೊಡಗಿದೆ. ನಟಿ ಶ್ರೀಯ ಶರಣ್ ಸಾಂಪ್ರದಾಯಿಕ ಉಡುಗೆ ತೊಟ್ಟು ಹಾಡಿರುವ ಈ ಹಾಡಿನಲ್ಲಿ ಹೊಸತನದ ಲಾಲಿತ್ಯವಿದೆ. ಜೊತೆಗೆ ಕಲಾತ್ಮಕ ರಂಗಿದೆ. ಹಾಗೂ ಸಿನಿ ಪ್ರೇಕ್ಷಕರ ಹಾಟ್ ಫೇವರಿಟ್ ಆಗತೊಡಗಿದೆ.
ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕಬ್ಜ’ ಚಿತ್ರವು ಎಲ್ಲಾ ರೀತಿಯಲ್ಲಿಯೂ ಬಿಡುಗಡೆಗೆ ಸಜ್ಜುಗೊಂಡಿದೆ. ಇದೇ ವೇಳೆ ಬಿಡುಗಡೆ ಪೂರ್ವ ಸಮಾರಂಭಗಳು ಹೊಸ ದಾಖಲೆ ಸೃಷ್ಟಿಸುವ ಆಶಯಗಳನ್ನು ಹೊಂದಿವೆ.
ಈಗಾಗಲೇ ಘೋಷಣೆ ಮಾಡಲಾಗಿರುವಂತೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ಕಬ್ಜ ಬಿಡುಗಡೆಯಾಗಲಿದೆ.
ಅದಕ್ಕೆ ಮುಂಚೆ ಅಂದರೆ ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಐತಿಹಾಸಿಕ ಸಮಾರಂಭ ನಡೆಯಲಿದ್ದು, ಈ ಸಮಾರಂಭ ಇದುವರೆಗಿನ ಇವೆಂಟುಗಳನ್ನು ಮೀರಿದ ಅದ್ದೂರಿತನದಿಂದ ಕೂಡಿರಲಿದೆ ಎಂಬುದು ಚಿತ್ರತಂಡದ ಮಾಹಿತಿ.
ಏಕೆಂದರೆ ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ಗಳ ಸಮಾಗಮ ಅದಾಗಲಿದೆ. ಸುಮಾರು 10 ಲಕ್ಷ ಜನರ ಸೇರುವಿಕೆಯೂ ದಾಖಲೆಯಾಗಲಿದೆ ಎಂಬುದು ತಂಡದ ವಿವರಣೆ.
ಇಂಡಿಯನ್ ರಿಯಲ್ ಸ್ಟಾರ್ ಆಗಿ ಉಪೇಂದ್ರ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಡಾ.ಶಿವರಾಜ್ ಕುಮಾರ್ ಅವರಂತಹ ದೊಡ್ಡ ಸ್ಟಾರ್ ಸಂಗಮವಿದೆ.
ಹಾಗಾಗಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ಗಣ್ಯರು ಅಲಂಕರಿಸುವ ವೇದಿಕೆ ಅತ್ಯಂತ ಆಕರ್ಷಕ ಹಾಗೂ ಐತಿಹಾಸಿಕವೆನಿಸಲಿದೆ.
ನಿಜವಾದ ಪ್ಯಾನ್ ಇಂಡಿಯಾ ಆಶಯಗಳು ಈ ಸಂದರ್ಭದಲ್ಲಿ ಕೈಗೂಡಲಿವೆ ಎಂಬುದು ನಿರ್ದೇಶಕ ಆರ್.ಚಂದ್ರು ಅವರ ನಂಬಿಕೆ. ಹಾಗಾಗಿ ಅವರು ಅಪರೂಪದಲ್ಲಿ ಅಪರೂಪವಾಗಿರುವ ಅದ್ದೂರಿ ಮತ್ತು ಐತಿಹಾಸಿಕ ಸಮಾರಂಭದ ತಯಾರಿಯಲ್ಲಿ ನಿರತರಾಗಿದ್ದಾರೆ.