ರೇಟಿಂಗ್ : 3/5
ನಿರ್ಮಾಣ : ಕೆ.ವಿ.ಶಶಿಧರ್
ನಿರ್ದೇಶನ : ಕೆ.ಎಂ.ರಘು
ಶಿಕ್ಷಣ ವ್ಯವಸ್ಥೆಯ ಸರಳೀಕರಣ
ಶಿಕ್ಷಣ ವ್ಯವಸ್ಥೆಗೊಂದು ಸರಳ ಸೂತ್ರ ಜಾರಿಗೊಳಿಸಿ ಪ್ರತಿಯೊಬ್ಬ ವಿದ್ಯಾರ್ಥಿ ಯ ಬದುಕಿನಲ್ಲಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿರಬಹುದು. ಆದರೆ ಸಿನಿಮಾವೊಂದರಲ್ಲಿ ಶಿಕ್ಷಣ ವ್ಯವಸ್ಥೆ ಸರಳೀಕರಣಗೊಳಿಸುವ ಮಾರ್ಗಸೂತ್ರ ತಿಳಿಸುವ ಪ್ರಯತ್ನ ಮಾಡಲಾಗಿದೆ..
ಅದೇ ಜಸ್ಟ್ ಪಾಸ್..!
ದಳವಾಯಿ ಎಂಬ ಆದರ್ಶ ವ್ಯಕ್ತಿಯೊಬ್ಬರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವ ಪಣ ತೊಟ್ಟು ಜಸ್ಟ್ ಪಾಸಾಗುವ ಯುವ ಸಮೂಹಕ್ಕೆ ಆರಂಭಿಸುವ ಕಾಲೇಜು ಮಾಮೂಲಿನಂತೆ ಮಜಾ ಮಸ್ತಿಯಲ್ಲಿ ಸಾಗುತ್ತದೆ..
ಜಸ್ಟ್ ಪಾಸಾದವರನ್ನು ಕಲೆ ಹಾಕಿ ಕಾಲೇಜು ನಡೆಸುವ ಸಾಹಸದಲ್ಲಿ ಹುಡುಗರ ಯೌವನೋತ್ಸಾಹದ ಕೆಲಸಗಳನ್ನು ಉತ್ತೇಜನವೆಂದು ಭಾವಿಸುವ ದಳವಾಯಿ ಅವರದು ತಾಯಿ ಹೃದಯ.
ಎಲ್ಲರನ್ನೂ ಮಕ್ಕಳೆಂದು ಭಾವಿಸುವ ಅವರ ಉದಾರತೆ ಅವರಿಗೆ ಮುಳುವಾಗುತ್ತದೆ. ಮಾದಕ ದ್ರವ್ಯ ಸಾಗಣೆಯ ಆರೋಪಕ್ಕೆ ಸಿಲುಕಿಸುತ್ತದೆ..
ಮುಂದೆ ನಡೆಯುವುದು ಕ್ರಾಂತಿ. ಮಕ್ಕಳಿಗೆ ಶಿಕ್ಷಕರು ಆದರ್ಶ. ಅಂತಹ ಆದರ್ಶ ಮೆರೆಯುವ ಶಿಕ್ಷಕರು ಮತ್ತು ಮಕ್ಕಳಿಂದ ಕಾಲೇಜು ಉತ್ತಮ ಅಂಕ ಪಡೆದು ಸರ್ಕಾರಿ ವ್ಯವಸ್ಥೆಯನ್ನು ಅಣುಕಿಸುತ್ತದೆ..
ಆರಂಭದಲ್ಲಿ ಪಡ್ಡೆ ಹುಡುಗರ ತರ್ಲೆ ಆಟ ಪಾಠಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆ ಸಿಗುತ್ತಾ ಹೋಗುತ್ತದೆ. ಉತ್ತರಾರ್ಧದಲ್ಲಿ ಶೈಕ್ಷಣಿಕ ವ್ಯವಸ್ಥೆಯ ಉಳುಕುಗಳು ಗೋಚರವಾಗುತ್ತವೆ. ಒಂದು ಡ್ರಗ್ ಮಾಫಿಯಾ ಮತ್ತು ಅವ್ಯವಸ್ಥಿತ ಮೌಲ್ಯ ಮಾಪನದ ಮೂಲಕ ಇಡೀ ವ್ಯವಸ್ಥೆಯ ಕಥೆ ಹೇಳಿರುವುದು ಅಚ್ಚರಿ.
ದಳವಾಯಿ ಅವರ ಪಾತ್ರದಲ್ಲಿ ರಂಗಾಯಣ ರಘು ಅಪ್ರತಿಮ ನಟ ಎನಿಸಿಕೊಳ್ಳುತ್ತಾರೆ. ಹಾಸ್ಯ ವರಸೆ ಮೀರಿದ ಪಾತ್ರದಲ್ಲಿ ಸಾಧು ಕೋಕಿಲ ಬಹಳವೇ ಇಷ್ಟವಾಗುತ್ತಾರೆ.
ಮುಖ್ಯ ಪಾತ್ರದಲ್ಲಿರುವ ಶ್ರೀ, ಪ್ರಣತಿ ಸೇರಿದಂತೆ ಸುಚ್ಚೇಂದ್ರ ಪ್ರಸಾದ್, ಗೋವಿಂದೇಗೌಡ, ದಾನಪ್ಪ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಅವರ ಪಾತ್ರಗಳು ಗಮನ ಸೆಳೆಯುತ್ತವೆ.
ಸುಜಯ್ ಕುಮಾರ್ ಕ್ಯಾಮೆರಾ ಹಾಗೂ ಹರ್ಷವರ್ಧನ್ ರಾಜ್ ಸಂಗೀತ ಚಿತ್ರಕ್ಕೆ ಪೂರಕ.