ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಪತ್ರಕರ್ತ ಯತಿರಾಜ್ ಸದ್ಯ ನಿರ್ದೇಶನದಲ್ಲಿ ಅತ್ಯಂತ ಬ್ಯುಜಿಯಾಗಿದ್ದಾರೆ.
‘ಬೊಂಬೆ ಹೇಳುತೈತೆ’ ಎಂಬ ಪ್ರಾಯೋಗಿಕ ಚಿತ್ರ ಕೈಗೆತ್ತಿಕೊಂಡು ನಟನೆ ನಿರ್ದೇಶನ ಹಾಗೂ ಇತರ ವಿಭಾಗಗಳಲ್ಲಿ ದುಡಿಯುವ ಯತಿರಾಜ್ ತಾವೊಬ್ಬ ಬಹುಮುಖ ಪ್ರತಿಭೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.
ಈಗ ಎರಡು ಚಿತ್ರಗಳು ಕೈಯಲ್ಲಿ ಇರುವಾಗಲೇ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುವ ಯತ್ನದಲ್ಲಿ ಯತಿರಾಜ್ ತೊಡಗಿದ್ದಾರೆ. ಆ ಚಿತ್ರದ ಹೆಸರು ‘ಸಂಜು’. ಅಗಮ್ಯ ಪಯಣಿಗ ಎಂಬುದು ಟ್ಯಾಗ್ ಲೈನ್.
ಚಿತ್ರದ ಬಗ್ಗೆ ವಿವರ ನೀಡಲು ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ಯತಿರಾಜ್ ಜೊತೆಗೆ ಮುಖ್ಯ ಪಾತ್ರದಲ್ಲಿರುವ ಮಾನ್ವಿತ್, ಶ್ರಾವ್ಯ, ಕಲಾವಿದರಾದ ಪ್ರದೀಪ್, ಮಹಂತೇಶ್, ಶಂಕರ್ ಭಟ್, ಛಾಯಾಗ್ರಾಹಕ ವಿದ್ಯಾ ನಾಗೇಶ್, ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ವೇದಿಕೆಯಲ್ಲಿದ್ದರು.
ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ಇದೊಂದು ಪ್ರೇಮಕಥೆ. ಬಸ್ ನಿಲ್ದಾಣದಲ್ಲೇ ಹೆಚ್ಚು ನಡೆಯುತ್ತದೆ. ಮಡಿಕೇರಿ, ಮೂರ್ನಾಡು ಮೊದಲಾದ ಹಸಿರು ವಾತಾವರಣ ದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂಬ ವಿವರ ಕೊಟ್ಟರು ಯತಿರಾಜ್.
ಮುಖ್ಯ ಪಾತ್ರದಲ್ಲಿರುವ ಮಾನ್ವಿತ್ ರಂಗಭೂಮಿ ಹಿನ್ನೆಲೆಯವರು; ಹಾಗಾಗಿ ಸಿದ್ದಪಡಿಸಿಕೊಂಡಿರುವ ಸ್ಕಿಟ್ ನ್ನು ಅಭಿನಯದ ಮೂಲಕವೇ ಪರಿಚಯಿಸಿಕೊಂಡರು.
ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿಕೊಟ್ಟಿದೆ. ಇದರಲ್ಲಿ ನನ್ನ ಪಾತ್ರದಲ್ಲಿ ಅನೇಕ ವಿಶೇಷತೆಗಳು ಇವೆ ಎಂದು ವಿವರ ನೀಡಿದ್ದು ಶ್ರಾವ್ಯ.
ಚಿತ್ರದ ಆಶಯಗಳು ವಿಶೇಷವಾಗಿವೆ. ಹಾಗಾಗಿ ತಂಡ ವಿಶೇಷತೆಗೆ ಹೆಚ್ಚು ಒತ್ತು ಕೊಟ್ಟಿದೆ ಎಂಬ ವಿವರಗಳು ಬಂದವು..