ಓ ಪ್ರೇಮವೇ.. ಮಧುರ ಭಾವವೇ.. ಬಿಟ್ಟು ಹೋಗದಿರು ಓ ಮಾಯೇ..
ಪ್ರೇಮ ಮತ್ತು ಅದರ ನಿರರ್ಥಕತೆ ಅಥವಾ ಪ್ರೇಮ ಮತ್ತು ವೈರಾಗ್ಯ ಸಮನಾಗಿ ನೋಡಲು ‘ಬನಾರಸ್’ಗೆ ಪ್ರಯಾಣ ಮಾಡಲೇ ಬೇಕು..
ಅರ್ಥಾತ್ ಬನಾರಸ್ ಎಂಬ ಸಿನಿಮಾ ನೋಡಲೇ ಬೇಕು..
ಹೌದು ‘ಒಲವೇ ಮಂದಾರ’ ಖ್ಯಾತಿಯ ಸೂಕ್ಷ್ಮ ಸಂವೇದನೆಯ ನಿರ್ದೇಶಕ ಜಯತೀರ್ಥ ಈ ಬಾರಿ ಕಾಶಿಯನ್ನು ಸುತ್ತು ಹಾಕಿ ರೀಲ್ ಸುತ್ತಿದ್ದಾರೆ. ಅದೂ ಬಣ್ಣದ ಓಕುಳಿಯ ಜೊತೆ ಮತ್ತು ಬದುಕಿನ ನಶ್ವರ ವಿಷಯಗಳ ಜೊತೆ..
ಅದೇ ಬನಾರಸ್..!
ವೈರಾಗ್ಯದ ಜಾಗದಲ್ಲಿ ಪ್ರೀತಿ ಹುಟ್ಟುತ್ತದೆ.. ಆ ಪ್ರೀತಿ ಹಾಡಾಗುತ್ತದೆ.. ಅದೇ ‘ಮಾಯ ಗಂಗೆ..’
ಹೌದು ಈ ಮಾಯ ಗಂಗೆಯೇ.. ಪ್ರೇಮ ಗಂಗೆ.. ಪ್ರೇಮ ಮಾಯೆ.. ಗಂಗೆ ನಿರಂತರ.. ಪ್ರೇಮ ಮತ್ತು ಮಾಯೆ ಬೆರೆತ ಹಾಡು ಪ್ರೇಕ್ಷಕರಿಗೆ ಖಂಡಿತಾ ಕಚಗುಳಿ ಇಡಬಲ್ಲದು.. ಆ ರೀತಿಯ ಚಿತ್ರೀಕರಣದ ಸಾಮರ್ಥ್ಯ ಅದಕ್ಕಿತ್ತು.
ಬನಾರಸ್ ಚಿತ್ರದ ಮಾಯಗಂಗೆ ಹಾಡು ಬಿಡುಗಡೆಯಲ್ಲಿ ಪ್ರೇಕ್ಷಕ ಪ್ರವಾಹ ಹರಿದಿತ್ತು. ಅದಕ್ಕೆ ಕಾರಣ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಜಾಹಿದ್ ಖಾನ್.
ಹೌದು ಜಾಹಿದ್ ಖಾನ್ ಜನಪ್ರಿಯ ರಾಜಕಾರಣಿ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಅವರ ಪುತ್ರ. ಆದರೆ ಸಿನಿಮಾ ಮಾಡುವ ಹಾದಿಯಲ್ಲಿ ಎಲ್ಲಿಯೂ ಅಪ್ಪನ ಪ್ರಸ್ತಾಪವಿಲ್ಲ; ಏಕೆಂದರೆ ಮಗ ಸಿನಿಮಾ ಸ್ಟಾರ್ ಆಗುವುದು ಅಪ್ಪನಿಗೆ ಇಷ್ಟವೇ ಇಲ್ಲ..
ಎಷ್ಟು ನಿಜವೋ ಏನೋ.. ಜಮೀರ್ ಅಹಮದ್ ಹೊರತಾಗಿ ಅವರ ಬಾಲ್ಯದ ಗೆಳೆಯ ತಿಲಕ್ ರಾಜ್ ಬಲ್ಲಾಳ್ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ ಮಾತ್ರವಲ್ಲ; ಜಾಹಿದ್ ಗೆ ಗಾಡ್ ಫಾದರ್ ಆಗಿ ಬೆನ್ನ ಹಿಂದೆ ನಿಂತಿದ್ದಾರೆ.
ಹೇಳಿ ಕೇಳಿ ಬನಾರಸ್ ಪಾನ್ ಇಂಡಿಯಾ ಸಿನಿಮಾ. ಹಾಗಾಗಿ ಕೇರಳದ ಪತ್ರಕರ್ತರೂ ಹಾಜರಿದ್ದರು ಮತ್ತು ಮಾಯೆ ಗಂಗೆ ಮಲಯಾಳಂ ನಲ್ಲೂ ಹರಿದಳು.. ಮುಂದೆ ಹಿಂದಿ, ತಮಿಳು, ತೆಲುಗಿನಲ್ಲಿ ಮಾಯಗಂಗೆ ಹರಿಯುತ್ತಾಳೆ..
ಪ್ರಶ್ನೆಗೆ ಉತ್ತರ ಕೊಟ್ಟಿತು ತಂಡ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ್ ಕ್ಯಾಮೆರಾ ಕೆಲಸದ ಬಗ್ಗೆ ಹೊಗಳಿಕೆಗಳು ಬಂದವು.
ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ಯಶಸ್ ಸೂರ್ಯ, ಶೈಲಜಾ ನಾಗ್, ಲಹರಿ ವೇಲು, ಲಹರಿ ಚಂದ್ರು ಗಣ್ಯರ ಸಾಲಿನಲ್ಲಿ ಇದ್ದರು. ಜಾಹಿದ್ ಜೊತೆ ನಟಿಸಿದ ಸೋನಾಲ್, ಸುಜಯ್ ಶಾಸ್ತ್ರಿ, ಸಂತೋಷ್, ಮಲಯಾಳಂ ಗೀತರಚನಾಕಾರ ಆದಿ ಮೊದಲಾದವರ ಉಪಸ್ಥಿತಿ ಇತ್ತು.
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ.
ಕಾಶಿಯ ಸಾಕಷ್ಟು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದರೆ ಇದು ದಾಕುಮೆಂಟರಿ ಅಲ್ಲ; ಒಂದು ಪರಿಶುದ್ಧ ಮನರಂಜನಾ ಚಿತ್ರ. ಹಾಗಾಗಿ ಉತ್ತರ ಪ್ರದೇಶ್ ಸರ್ಕಾರ ಚಿತ್ರಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದೆ ಎಂಬ ಮಾಹಿತಿಗಳನ್ನು ನೀಡಿದರು ನಿರ್ದೇಶಕ ಜಯತೀರ್ಥ.
ಮಂಗಳೂರು ಮೂಲದ ತಿಲಕ್ ರಾಜ್ ಗೆಳೆಯ ಮತ್ತು ಅವರ ಮಗನ ಸಲುವಾಗಿಯೇ ಈ ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ನಿರ್ಮಾಣ ಪೂರ್ವದಲ್ಲಿ ಬಹಳಷ್ಟು ತಯಾರಿ ನಡೆದಿದೆ. ಅದು ಜಾಹಿದ್ ಖಾನ್ ಗೆ ಕನ್ನಡ ಪರಿಭಾಷೆಯನ್ನು ಹೇಳಿಕೊಡುವುದೂ ಸೇರಿದೆ ಎಂದರು ಜಯತೀರ್ಥ.
ಜಾಹಿದ್ ಖಾನ್ ಕನ್ನಡವಷ್ಟೇ ಅಲ್ಲ; ಭಾರತೀಯ ಚಿತ್ರರಂಗದ ಖಾನ್ ಗಳ ಗುಂಪಿಗೆ ಮತ್ತೊಂದು ಸೇರ್ಪಡೆಯಾಗುತ್ತಾರೆ ಎಂಬ ಆಶಾ ಭಾವನೆಯನ್ನು ಹೊರ ಹಾಕಿದವರು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್.