ಗಣ ರಾಜ್ಯೋತ್ಸವ ಸಂದರ್ಭದಲ್ಲಿ ‘ಜೈ ಭೀಮ್’ ಹಾಡು ಬಿಡುಗಡೆ ಕಂಡಿದ್ದು, ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಡಿರುವುದು ವಿಶೇಷವಾಗಿದೆ.
ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ ರಾಜೀವ್ ಹನು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಈ ಹಾಡು ಈಗ ಗಮನ ಸೆಳೆದಿದೆ.
ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಹಾಗೂ ಕನ್ನಡದ ಹೆಸರಾಂತ ಗೀತರಚನಕಾರ ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಕಂಡಿದೆ.
ಬೇಗೂರ್ ಕಾಲೋನಿ ಎಂಬುದು ಒಂದು ಹೋರಾಟದ ಕಥೆ. ಕಾಲೋನಿಲ್ಲಿರುವ ಮಧ್ಯಮ ವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲ ಎಂಬ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ ಎಂಬ ವಿವರ ನೀಡಿತು ಚಿತ್ರತಂಡ.
ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಸಮುದಾಯದ ಜನರು ವಾಸಿಸುವ
ಈ ಕಾಲೋನಿ ಸಾಮರಸ್ಯದ ಸಂಕೇತವಾಗಿರುತ್ತದೆ. ಹಾಗಾಗಿ ಸಾಮರಸ್ಯ ಸಾರುವ ಹಾಡೊಂದನ್ನು ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂಬ ವಿವರ ಬಂತು.
ಚಿತ್ರವು ಇದೇ ಜನವರಿ 31 ರಂದು ಬಿಡುಗಡೆಯಾಗಲಿದೆ. ಮಕ್ಕಳಿಗೆ ಪಾಠದಷ್ಟೇ ಆಟ ಕೂಡ ಮುಖ್ಯ. ಆದರೆ ಮಕ್ಕಳು ಆಟವಾಡಲು ಈಗ ಮೈದಾನಗಳು ಹೆಚ್ಚು ಇಲ್ಲ. ಇರುವ ಮೈದಾನಗಳನ್ನಾದರೂ ಉಳಸಿಕೊಳ್ಳುವ ಪ್ರಯತ್ನ ಆಗಬೇಕು ಎಂಬುದು ಕಥೆಯ ತಿರುಳು ಎಂಬ ವಿವರ ನೀಡಿದರು ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು.
ರಾಘವ ಎಂಬ ಹೆಸರಿನ ಪಾತ್ರದಲ್ಲಿ ಮೈದಾನದ ಸಲುವಾಗಿ ಹೋರಾಟ ಮಾಡುವುದು ನಿಜ ಜೀವನದ ಪಾತ್ರದಂತೆಯೇ ಇದೆ ಎಂಬುದು ಮುಖ್ಯ ಪಾತ್ರದಲ್ಲಿ ನಟಿಸಿರುವ ರಾಜೀವ್ ಹನು ಮಾತು.
ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್, ಸಂಕಲಕಾರ ಪ್ರಮೋದ್ ತಲ್ವಾರ್, ಛಾಯಾಗ್ರಾಹಕ ಕಾರ್ತಿಕ್ ಎಸ್ ಹಾಗೂ ನಟಿಯರಾದ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಹಾಡು ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದರು.